ದುರಾಸೆಗಾಗಿ ಭೂಮಿ ಕಲುಷಿತಗೊಳಿಸಬಾರದು: ನ್ಯಾ. ಶುಭಾ ಗೌಡರ್‌

KannadaprabhaNewsNetwork | Published : Jun 6, 2024 12:33 AM

ಚಿಕ್ಕಮಗಳೂರು, ಸಕಲ ಜೀವರಾಶಿಗಳಿಗಿರುವುದು ಒಂದೇ ಭೂಮಿ. ದುರಾಸೆಗಾಗಿ ಕಲುಷಿತಗೊಳಿಸಿದರೆ ಜೀವರಾಶಿಗಳು ಭೂಮಿ ಮೇಲೆ ಬದುಕಲು ಸಾಧ್ಯವಿಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ರಾದ ಶುಭ ಗೌಡರ್ ಹೇಳಿದರು.

ಜಿಲ್ಲಾ ನ್ಯಾಯಾಲಯದ ನೂತನ ಕಟ್ಟಡದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಟ್ಟ ನ್ಯಾಯಾಧೀಶರು

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸಕಲ ಜೀವರಾಶಿಗಳಿಗಿರುವುದು ಒಂದೇ ಭೂಮಿ. ದುರಾಸೆಗಾಗಿ ಕಲುಷಿತಗೊಳಿಸಿದರೆ ಜೀವರಾಶಿಗಳು ಭೂಮಿ ಮೇಲೆ ಬದುಕಲು ಸಾಧ್ಯವಿಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ರಾದ ಶುಭ ಗೌಡರ್ ಹೇಳಿದರು.

ನೂತನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಂಗ ಮತ್ತು ಅರಣ್ಯ ಇಲಾಖೆ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬುಧವಾರ ಸಸಿ ನೆಡುವ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪರಿಸರ ಜಾಗೃತಿ ಮೂಡಿಸುವುದು ಅಗತ್ಯ. ಯಾವುದೇ ಜೀವಿ ಬದುಕಲು ಸುತ್ತಮುತ್ತಲ ಉತ್ತಮ ಪರಿಸರ ಅವಶ್ಯಕ. ಇಲ್ಲದಿದ್ದರೆ ಜೀವಸಂಕುಲದ ಬದುಕಿಗೆ ಕುತ್ತು ಬರಲಿದೆ. ಮಳೆ, ಗಾಳಿ ಮುಂತಾದ ಪ್ರಕೃತಿದತ್ತ ಕ್ರಿಯೆಗೆ ಸೂಕ್ತ ಪರಿಸರವಿಲ್ಲದಿದ್ದರೆ ನಮ್ಮ ಬದುಕು ದುರಂತವಾಗಲಿದೆ ಎಂದರು.

ಪರಿಸರದ ಮೇಲೆ ಮಾನವ ದೌರ್ಜನ್ಯ ನಿತ್ಯ ನಡೆದರೆ ಊಟವಿರಲಿ, ಶುದ್ಧಗಾಳಿ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಹಾಗಾಗಿ ನಾವು ಪರಿಸರ ಉಳಿವಿಗೆ ನಮ್ಮ ಕೈಲಾದ ಕೊಡುಗೆ ನೀಡಬೇಕು. ಮನೆ ಯಂಗಳ ಅಥವಾ ಸುತ್ತಮುತ್ತಲ ಖಾಲಿ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವ ಕಾರ್ಯಕ್ಕೆ ಮುಂದಾಗ ಬೇಕಿದೆ ಎಂದರು.

ಪರಿಸರ ಸಂರಕ್ಷಣೆ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೇ ನಿತ್ಯ ಪ್ರಕೃತಿಯನ್ನು ಸಂರಕ್ಷಿಸುವ ಹೊಣೆಯಾಗಬೇಕು. ಪರಿಶುದ್ಧ ಆಮ್ಲಜನಕ ಹಾಗೂ ಸುಂದರ ವಾತಾವರಣ ನಿರ್ಮಾಣಕ್ಕೆ ಪರಿಸರ ಅತ್ಯಂತ ಪೂರಕ. ಆ ನಿಟ್ಟಿನಲ್ಲಿ ಸಮಾಜದ ನಾಗರೀಕರು ಹೆಚ್ಚೆಚ್ಚು ಪರಿಸರದ ಪ್ರಜ್ಞೆ ಮೂಡಿಸಿ ಕೊಳ್ಳಬೇಕು ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ ಮಾತನಾಡಿ, ಆರೋಗ್ಯಕರ ಜೀವನಕ್ಕಾಗಿ, ಪರಿಸರ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ವ್ಯತ್ಯಾಸವೆಂದರೆ ಪ್ರಾಣಿಗಳು ಪರಿಸರಕ್ಕಾಗಿ ತಮ್ಮನ್ನು ಬದಲಾಯಿಸಿಕೊಳ್ಳುತ್ತವೆ. ಆದರೆ, ಮಾನವರು ಪರಿಸರವನ್ನು ತಮಗಾಗಿ ಬದಲಾಯಿಸುತ್ತಾರೆ ಎಂದರು.

ಇಂದಿನ ಯುವ ಪೀಳಿಗೆ ಪರಿಸರದ ಬಗ್ಗೆ ಕಾಳಜಿ ಬೆಳೆಸಿಕೊಳ್ಳಬೇಕು. ಪರಿಸರ ಉಳಿದರೆ ಜೀವರಾಶಿ ಉಳಿದಂತೆ ಎಂಬ ಸಂದೇಶವನ್ನು ಅಳವಡಿಸಿಕೊಂಡಾಗ ಮಾತ್ರ ಸುಂದರ ಜಗತ್ತನ್ನು ಉಳಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸಾಧ್ಯ ಎಂದು ಹೇಳಿದರು.

ವಕೀಲರ ಸಂಘದ ಕಾರ್ಯದರ್ಶಿ ಆರ್.ಅನಿಲ್‍ಕುಮಾರ್ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಪರಿಸರ ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ. ಪರಿಸರದಿಂದ ಗಾಳಿ, ನೀರು, ಆಹಾರ ಸೇರಿದಂತೆ ಹಲವಾರು ಸೌಲಭ್ಯ ಪಡೆದುಕೊಳ್ಳುವ ಮಾನವರು. ಜೊತೆಗೆ ಪರಿಸರಕ್ಕೆ ಪೂರಕವಾಗಿ ಸ್ಪಂದಿಸುವ ಗುಣ ಬೆಳೆಸಿ ಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ, ಕೌಟುಂಬಿಕ ನ್ಯಾಯಾಲಯದ ನ್ಯಾ. ವಿ.ಪ್ರಕಾಶ್, ಒಂದನೇ ಹೆಚ್ಚುವರಿ ಹಿರಿಯ ಶ್ರೇಣಿ ನ್ಯಾ.ಎಸ್.ಬಿ.ದ್ಯಾವಪ್ಪ, ಎರಡನೇ ಹೆಚ್ಚುವರಿ ಹಿರಿಯ ಶ್ರೇಣಿ ನ್ಯಾ. ಕೃಷ್ಣ, ಪ್ರಧಾನ ಸಿವಿಲ್ ಮತ್ತು ಕ್ರಿಮಿನಲ್ ಕಿರಿಯ ಶ್ರೇಣಿ ನ್ಯಾ. ಆರ್.ಮಂಜುನಾಥ್, ಒಂದನೇ ಹೆಚ್ಚುವರಿ ಸಿವಿಲ್ ನ್ಯಾ. ಮಂಜು, ಎರಡನೇ ಹೆಚ್ಚುವರಿ ಸಿವಿಲ್ ನ್ಯಾ. ಹರೀಶ್, ಮೂರನೇ ಹೆಚ್ಚುವರಿ ನ್ಯಾ. ನಂದಿನಿ, ವಕೀಲರ ಸಂಘದ ಉಪಾಧ್ಯಕ್ಷ ಕೆ.ಎಸ್.ಶರತ್‍ಚಂದ್ರ, ಖಜಾಂಚಿ ಡಿ.ಬಿ.ದೀಪಕ್, ಸಹ ಕಾರ್ಯದರ್ಶಿ ಎನ್.ವಿ.ಪ್ರಿಯದರ್ಶಿನಿ, ಸರ್ಕಾರಿ ವಕೀಲ ಸಿ.ಸತೀಶ್, ವಕೀಲ ಎಚ್. ಟಿ.ಸುನೀಲ್ ಉಪಸ್ಥಿತರಿದ್ದರು.ಪೋಟೋ ಫೈಲ್‌ ನೇಮ್‌ 5 ಕೆಸಿಕೆಎಂ 3ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯದ ನೂತನ ಕಟ್ಟಡದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನ್ಯಾಯಾಧೀಶರಾದ ಶುಭಾ ಗೌಡರ್ ಬುಧವಾರ ಸಸಿ ನೆಟ್ಟರು. ಸುಜೇಂದ್ರ, ಅನಿಲ್‌ ಕುಮಾರ್‌, ನ್ಯಾ. ವಿ. ಹನುಮಂತಪ್ಪ, ವಿ. ಪ್ರಕಾಶ್‌, ದ್ಯಾವಪ್ಪ, ನಂದಿನಿ ಇದ್ದರು.