ಮೈಸೂರು: ಒಂದು ಭಾಷೆಯನ್ನು ಮಾತನಾಡುವುದು ಕಲಿಸಬಹುದು. ಆದರೆ, ಬರವಣಿಗೆ ಕಲಿಸುವುದು ತುಂಬಾ ಕಷ್ಟ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಅಕ್ಕ ಮಹಾದೇವಿ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕಿ ಡಾ. ಕವಿತಾ ರೈ ತಿಳಿಸಿದರು.
ಒಂದು ಭಾಷೆಯ ಜನರಿಗೆ ಮತ್ತೊಂದು ಭಾಷೆಯನ್ನು ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಬರೆಯುವುದನ್ನು ಕಲಿಸುವುದು ಸವಾಲಿನ ಕೆಲಸ. ಒಂದು ಭಾಷೆಯನ್ನು ಎಲ್ಲರೂ ಒಂದೇ ರೀತಿಯಲ್ಲಿ ಮಾತನಾಡಲು ಸಾಧ್ಯವಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಬೆರಳಚ್ಚಿನಲ್ಲಿ ವಿಭಿನ್ನತೆ ಇರುವಂತೆ ಮಾತಿನಲ್ಲೂ ಭಿನ್ನತೆ ಇದೆ. ಒಬ್ಬ ವ್ಯಕ್ತಿ ಮಾತನಾಡುವಂತೆಯೇ ಮತ್ತೊಬ್ಬ ವ್ಯಕ್ತಿ ಮಾತನಾಡುವುದಿಲ್ಲ. ಒಂದು ಭಾಷೆಯ ನಂತರ ಮತ್ತೊಂದು ಭಾಷೆ ಹುಟ್ಟಿಕೊಂಡಿಲ್ಲ. ಒಂದೇ ಕಾಲಘಟ್ಟದಲ್ಲಿ ಅನೇಕ ಭಾಷೆಗಳು ಹುಟ್ಟಿಕೊಂಡಿವೆ. ತಮಿಳು ಭಾಷೆಯಿಂದ ಕನ್ನಡ ಹುಟ್ಟಿಕೊಂಡಿತು ಎಂಬ ನಟ ಕಮಲ್ ಹಾಸನ್ ಅಭಿಪ್ರಾಯ ಆಧಾರರಹಿತ ಎಂದು ಅಭಿಪ್ರಾಯಪಟ್ಟರು.
ಆಧುನಿಕ ತಂತ್ರಜ್ಞಾನದ ಫಲವಾಗಿ ಒಂದು ಭಾಷೆಯಿಂದ ಮತ್ತೊಂದು ಭಾಷೆಯ ನಡುವೆ ಕೊಡು ಕೊಳ್ಳುವ ಪ್ರಕ್ರಿಯೇ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಪ್ರಸ್ತುತ ಕಾಲಘಟ್ಟದ ಯುವಕರು ಕೈ ಬರವಣಿಗೆಗಿಂತ ಕಂಪ್ಯೂಟರ್ ಬರವಣಿಗೆಯಲ್ಲಿ ಪ್ರಾವೀಣ್ಯತೆ ಪಡೆದಿದ್ದಾರೆ. ಮುಂದೆ ಕೃತಕ ಬುದ್ಧಿಮತ್ತೆಯ ನೆರವಿನಿಂದ ಬರೆಯಿಸುವ ಸಂದರ್ಭ ಬಂದರೂ ಅಚ್ಚರಿಯಲ್ಲ ಎಂದು ಹೇಳಿದರು.ಕೊಂಡಿ ಕಳಚಿಹೋಗಿದೆ:
ಸಾಹಿತಿ ಜ್ಯೋತಿ ಗುರುಪ್ರಸಾದ ಮಾತನಾಡಿ, ಇತ್ತೀಚೆಗೆ ಕೃತಿಚೌರ್ಯ ಮಾಡುವವರ ಸಂಖ್ಯೆ ಹಚ್ಚಾಗಿದೆ. ಕೃತಿಚೌರ್ಯದಿಂದ ಓದು ಮತ್ತು ಆಲೋಚನೆಯ ನಡುವಿನ ಕೊಂಡಿ ಕಳಚಿಹೋಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಯಾರದ್ದೋ ಬರವಣಿಗೆ ಕದ್ದು ಪ್ರಕಟಿಸುತ್ತಿದ್ದಾರೆ. ಇದಕ್ಕೆ ಶಿಕ್ಷಣ ಕ್ಷೇತ್ರದಲ್ಲಿನ ಬೋಧನಾ ವಿಧಾನಗಳ ವೈಫಲ್ಯವೇ ಕಾರಣ ಎಂದು ವಿಷಾದಿಸಿದ ಅವರು, ವಿದ್ಯಾರ್ಥಿಗಳು ಸಂತಸದಿಂದ ಕಲಿಯುವ ರೀತಿಯಲ್ಲಿ ಶಾಲಾ ಕಾಲೇಜುಗಳ ಬೋಧನಾ ವಿಧಾನ ಇರಬೇಕು. ಆಗ ವಿದ್ಯಾರ್ಥಿಗಳು ಸ್ವತಂತ್ರವಾಗಿ ಬರೆಯುವುದನ್ನು ರೂಢಿಸಿಕೊಳ್ಳುತ್ತಾರೆ. ಇದರಿಂದ ಕೃತಿಚೌರ್ಯದಂತಹ ಕೆಲಸಕ್ಕೆ ಯಾರೂ ಸಹ ಮುಂದಾಗುವುದಿಲ್ಲ ಎಂದರು.ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಡಾ.ಸಿ.ನಾಗಣ್ಣ, ಮೈಸೂರು ರಂಗನಾಥ್, ಡಾ. ಜಯಗೌರಿ ಶಿವಕುಮಾರ್, ಕೃತಿಯ ಕರ್ತೃ ಡಾ. ಕಲ್ಪನಾ ಮುಕುಂದ ಅಯ್ಯಂಗಾರ್ ಮೊದಲಾದವರು ಇದ್ದರು. ಸಾಗರಿ ಸುನಾಗ್ ಪ್ರಾರ್ಥಿಸಿದರು. ಉಷಾ ನರಸಿಂಹನ್ ಸ್ವಾಗತಿಸಿದರು.
--- ಕೋಟ್--ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಬರವಣಿಗೆ ಅತ್ಯಂತ ಅಗತ್ಯ. ಬರವಣಿಗೆ ಹಕ್ಕುಗಳ ಪ್ರತಿಪಾದನೆಗೆ, ವಿವಿಧ ಇಲಾಖೆಯ ಕಚೇರಿಗಳಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಕಾರ್ಯಗತಗೊಳಿಸಿಕೊಳ್ಳಲು, ತಮ್ಮ ಸಮಸ್ಯೆಗಳನ್ನು ಬರವಣಿಗೆಯ ರೂಪದಲ್ಲಿಯೇ ವಿವರಿಸಬೇಕಿದೆ. ಹೀಗಾಗಿ, ಬರವಣಿಗೆ ಎಂದಿಗೂ ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಳ್ಳಲಿದೆ.
- ಡಾ. ಕವಿತಾ ರೈ, ಸಾಹಿತಿ