ಬೆಳಗಾವಿ : ಭಾಷಾ ಸಂಘರ್ಷದಿಂದ ಶಾಂತಿ, ನೆಮ್ಮದಿ, ಉದ್ಯೋಗಕ್ಕೆ ಸಮಸ್ಯೆಯಾಗಲಿದೆ. ಕಾನೂನು ಸುವ್ಯವಸ್ಥೆ, ಶಾಂತಿ ಸೌಹಾರ್ದತೆ ಕಾಪಾಡಬೇಕಿದೆ. ಗಡಿಭಾಷೆ ಸಂಘರ್ಷ ಮರುಕಳಿಸದಂತೆ ಸರ್ಕಾರ ಎಲ್ಲಾ ರೀತಿ ಕ್ರಮಕೈಗೊಳ್ಳಲಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸ್ ನಿರ್ವಾಹಕನ ಮೇಲೆ ಹಲ್ಲೆ ಪ್ರಕರಣ ಇದು ಇಬ್ಬರ ವೈಯಕ್ತಿಕ ಜಗಳವಾಗಿದ್ದು, ಇದಕ್ಕೆ ಕನ್ನಡ-ಮರಾಠಿ ಬಣ್ಣ ಬಳಿಯಬಾರದು. ಇದರಿಂದ ಬೆಳಗಾವಿ ಅಭಿವೃದ್ಧಿಗೆ ಪೆಟ್ಟು ಬೀಳುತ್ತದೆ ಎಂದರು.
ಬಸ್ ನಿರ್ವಾಹಕನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಿಂದ ಮಾಹಿತಿ ಪಡೆಯಲಾಗಿದೆ. ಇದು ಇಬ್ಬರ ವೈಯಕ್ತಿಕ ಜಗಳ, ಭಾಷೆಗೆ ಇದು ವರ್ಗವಾಗಬಾರದು ಎಂಬುದು ನಮ್ಮ ಮನವಿ. ಕನ್ನಡ, ಮರಾಠಿ ಸಂಘಟನೆ ಎಂದು ಬಿಂಬಿಸಬಾರದು. ಅಂತಿಮವಾಗಿ ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ಪೆಟ್ಟು ಬಿಳಲಿದೆ. ಪೊಲೀಸ್ ಇಲಾಖೆ ತನಿಖೆ ಮಾಡುತ್ತಿದ್ದಾರೆ. ಪೋಕ್ಸೋ ಕೇಸ್ ದಾಖಲು ಆಗಬಾರದಿತ್ತು. ಆದರೂ ಪೊಲೀಸರಿಂದ ತಪ್ಪಾಗಿದೆ. ಇದನ್ನು ಸರಿಪಡಿಸಲು ಅವಕಾಶವಿದೆ. ಮರು ಪರಿಶೀಲನೆ ಆಗಬೇಕಿದೆ ಎಂದರು.
ಎರಡು ರಾಜ್ಯಗಳ ಬಸ್ ಸಂಚಾರ ಸ್ಥಗಿತಗೊಂಡಿರುವುದರಿಂದ ತೀವ್ರ ನಷ್ಟ ಉಂಟಾಗಲಿದೆ. ಪೊಲೀಸರ ಕೆಲಸವನ್ನು ಅವರಿಗೆ ಬಿಡಬೇಕು ಎಂದರು. ಶಿವಸೇನೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂಬ ಬೇಡಿಕೆ ಖಂಡಿಸಿದ ಅವರು, ಬೆಳಗಾವಿ ಮತ್ತು ಕೊಲ್ಹಾಪುರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದರು. ಮಂಗಳವಾರ ನಡೆಯಲಿರುವ ಕರವೇ ಬೆಳಗಾವಿ ಚಲೋ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ ಸಚಿವರು, ಯಾರೂ ಕೂಡ ಬೆಳಗಾವಿಗೆ ಬರಬಾರದು. ಪ್ರಕರಣದಲ್ಲಿ ಎರಡೂ ಕಡೆಯಿಂದ ದೂರು ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅವರಿಗೆ ಸಹಕಾರ ನೀಡಬೇಕು ಎಂದು ಸಚಿವ ಸತೀಶ ಜಾರಕಿಹೊಳಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ರಾಜು (ಆಸೀಫ್), ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ವಿನಯ ನಾವಲಗಟ್ಟಿ, ಸಿದ್ದಕಿ ಅಂಕಲಗಿ ಮತ್ತಿತರರು ಉಪಸ್ಥತರಿದ್ದರು.