ಕನ್ನಡಪ್ರಭ ವಾರ್ತೆ ಮೈಸೂರು
ಕಾರ್ಯಕ್ರಮವು ಭಾಷಾ ಸಮುದಾಯದ ಸದಸ್ಯರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮತ್ತು ಸಬಲೀಕರಣಗೊಳಿಸುವ ಧ್ಯೇಯದೊಂದಿಗೆ ಆಯೋಜಿಸಲಾಗಿದೆ. ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ. ಶೈಲೇಂದ್ರ ಮೋಹನ್ ಕಾರ್ಯಾಗಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಭಾಷೆಯ ಬಗ್ಗೆ ಸಾರ್ವಜನಿಕರ ಮತ್ತು ಭಾಷಾಭಿಮಾನಿಗಳ ದೃಷ್ಟಿಕೋನಗಳ ಕುರಿತು ಮಾತನಾಡಿ, ಭಾಷಾ ದಾಖಲೀಕರಣದ ಉದ್ದೇಶಗಳ ಜೋಡಣೆಯು ವಿಕಸಿತ ಭಾರತದ ರಾಷ್ಟ್ರೀಯ ದೃಷ್ಟಿಕೋನ ಮತ್ತು ಭಾಷಾ ಅಭಿವೃದ್ಧಿಗೆ ಸುಧಾರಿತ ತಂತ್ರಜ್ಞಾನ ಉತ್ತೇಜಿಸುವಲ್ಲಿ ರಾಷ್ಟೀಯ ಶಿಕ್ಷಣ ನೀತಿ-2020ರ ಪಾತ್ರದ ಬಗ್ಗೆ ಚರ್ಚಿಸಿದರು.ಭಾರತೀಯ ಭಾಷಾ ವೈವಿಧ್ಯತೆಯ ವೈಶಿಷ್ಟ್ಯತೆ ಉಲ್ಲೇಖಿಸುತ್ತಾ, ಭಾಷಾ ದಾಖಲಾತಿಯಲ್ಲಿ ಔಪಚಾರಿಕ ಮತ್ತು ಕ್ರಿಯಾತ್ಮಕ ಭಾಷಾಶಾಸ್ತ್ರ ಎರಡನ್ನೂ ಸಂಯೋಜಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.
ಅಳಿವಿನಂಚಿನಲ್ಲಿರುವ ಭಾಷೆಗಳನ್ನು ಸಂರಕ್ಷಿಸುವ ನಿರ್ಣಾಯಕ ಪ್ರಾಮುಖ್ಯತೆ ತಿಳಿಸುತ್ತ, ಈ ಕಾರ್ಯಾಗಾರವು ಭಾಷಾ ವೈವಿಧ್ಯತೆಯನ್ನು ಸಂರಕ್ಷಿಸಲು ಮಾತ್ರವಲ್ಲದೆ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಅತ್ಯಗತ್ಯ ಎಂದು ಅವರು ಹೇಳಿದರು.
ಸಂಸ್ಥಾನದ ಕಿರಿಯ ಸಂಶೋಧನಾಧಿಕಾರಿ ಡಾ. ಸುಜೋಯ್ ಸರ್ಕಾರ್, ಸಂಪನ್ಮೂಲ ವ್ಯಕ್ತಿಗಳಿಗೆ, ಶಿಬಿರಾರ್ಥಿಗಳಿಗೆ ಮತ್ತು ತೋಡಾ ಸಮುದಾಯದ ಸಂಪನ್ಮೂಲ ವ್ಯಕ್ತಿಗಳಿಗೆ ಧನ್ಯವಾದ ಅರ್ಪಿಸಿದರು. ಶಿಬಿರಾರ್ಥಿಗಳು ಈ ಕಮ್ಮಟದ ಸದುಪಯೋಗ ಪಡೆಯುವಂತೆ ವಿನಂತಿಸಿದರು.ರಾಷ್ಟ್ರದಾದ್ಯಂತ 17 ರಾಜ್ಯಗಳಿಂದ ಅರವತ್ತೈದು ಶಿಬಿರಾರ್ಥಿಗಳು ಈ ಭಾಷಾ ದಾಖಲೀಕರಣ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ. 15 ದಿನಗಳ ಕಾರ್ಯಾಗಾರವು ಜ. 21 ರಂದು ಸಮಾರೋಪಗೊಳ್ಳಲಿದೆ.
ಕಮ್ಮಟದ ಜೊತೆಗೆ ನೀಲಗಿರಿ ಬೆಟ್ಟಗಳಲ್ಲಿನ ಸಣ್ಣ ಸಮುದಾಯವು ಮಾತನಾಡುವ ತೋಡಾ ಭಾಷೆಯ ಪುನರುಜ್ಜೀವನ ಮತ್ತು ನಿರಂತರ ಬಳಕೆಗೆ ಅಗತ್ಯ ಸಂಪನ್ಮೂಲವಾದ ತೋಡ ಭಾಷಾ ಬಾಲಬೋಧೆಯ ಅಂತಿಮಗೊಳಿಸುವಿಕೆಯ ಕಮ್ಮಟವನ್ನೂ ಆಯೋಜಿಸಲಾಗಿದೆ. ಒಂಬತ್ತು ತೋಡ ಭಾಷಾ ತಜ್ಞರು ಈ ಭಾಷಾ ಸಾಮಗ್ರಿಯನ್ನು ಅಂತಿಮಗೊಳಿಸುವಲ್ಲಿ ತೊಡಗಿಸಿಕೊಂಡಿದ್ದಾರೆ.