ಭಾಷೆ ಮಾತಿಗೆ ಸೀಮಿತವಾಗಬಾರದು: ಕಿರಣ್ ಜಿ ಗೌರಯ್ಯ

KannadaprabhaNewsNetwork |  
Published : Nov 02, 2025, 04:00 AM IST
ರಾಜ್ಯೋತ್ಸವ ಸಂದೇಶ ನೀಡಿದ ತಹಸೀಲ್ದಾರ್ ಕಿರಣ್ ಜಿ ಗೌರಯ್ಯ | Kannada Prabha

ಸಾರಾಂಶ

ಭಾಷೆ ಕೇವಲ ಮಾತಿಗೆ ಸೀಮಿತವಾಗಬಾರದು. ನಿರಂತರ ಬಳಕೆ ಮಾಡುವ ಮೂಲಕ ಕನ್ನಡದ ಬೆಳವಣಿಗೆ ಆಗಬೇಕಾಗಿದೆ ಎಂದು ಗಣ್ಯರು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಕುಶಾಲನಗರ ಭಾಷೆ ಕೇವಲ ಮಾತಿಗೆ ಸೀಮಿತವಾಗಬಾರದು, ನಿರಂತರ ಬಳಕೆ ಮಾಡುವ ಮೂಲಕ ಕನ್ನಡದ ಬೆಳವಣಿಗೆ ಆಗಬೇಕಾಗಿದೆ ಎಂದು ಕುಶಾಲನಗರ ತಾಲೂಕು ತಹಸೀಲ್ದಾರ್ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ತಾಲೂಕು ಅಧ್ಯಕ್ಷ ಕಿರಣ್ ಜಿ ಗೌರಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಕುಶಾಲನಗರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದ ಮೈದಾನದಲ್ಲಿ 70ನೇಯ ಕನ್ನಡ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಮಾತನಾಡಿದರು. ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕದಲ್ಲಿ ಕನ್ನಡ ಭಾಷೆ ಬಳಕೆ ಕ್ಷೀಣಗೊಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ, ಮಕ್ಕಳಲ್ಲಿ ಭಾಷಾ ಪ್ರೇಮ ಮೂಡಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದ ಅವರು, ಏಕೀಕರಣದ ನಂತರ ರಾಜ್ಯ ಶರವೇಗದಲ್ಲಿ ಬೆಳವಣಿಗೆಯೊಂದಿಗೆ ಅಭಿವೃದ್ಧಿ ಕಂಡಿದೆ ಎಂದು ತಿಳಿಸಿದರು.ಅತಿ ಹೆಚ್ಚಿನ ಜ್ಞಾನಪೀಠ ಪ್ರಶಸ್ತಿಗೆ ಪಾತ್ರವಾಗಿರುವ ಹೆಗ್ಗಳಿಕೆ ಕನ್ನಡ ಭಾಷೆಯದ್ದಾಗಿದೆ. ಭಾಷೆ ಬಗ್ಗೆ ಚಿಂತನೆಗಳು ಕೇವಲ ನವಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದಂತೆ ಎಚ್ಚರ ವಹಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ ಪಿ ಶಶಿಧರ್ ಮಾತನಾಡಿ, ಸೌಹಾರ್ದತೆಗೆ ಪಾತ್ರವಾಗಿರುವ ಕನ್ನಡ ಭಾಷೆ ಬಳಕೆ ಮಾಡುವ ಮೂಲಕ ಬೆಳೆಸಲು ಪ್ರತಿಯೊಬ್ಬರೂ ಕಂಕಣ ಬದ್ಧರಾಗಬೇಕು. ಕನ್ನಡ ನಾಡು ಬೆಳವಣಿಗೆ ಕಾಣಬೇಕಾದಲ್ಲಿ ಭಾಷೆ ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡುವಂತಾಗಬೇಕು ಎಂದರು. ಮುಖ್ಯ ಭಾಷಣಗಾರರಾಗಿ ಪಾಲ್ಗೊಂಡ ನಿವೃತ್ತ ಶಿಕ್ಷಣಾಧಿಕಾರಿ ಕೆ ಎಸ್ ಶಿವಕುಮಾರ್ ದಿನದ ಮಹತ್ವದ ಬಗ್ಗೆ ಮಾತನಾಡಿ, ವಿಶಾಲ ಮೈಸೂರು ರಾಜ್ಯವಾಗಿ ಅಸ್ತಿತ್ವ ಗೊಂಡಿರುವ ಬಗ್ಗೆ ವಿವರವಾಗಿ ತಿಳಿಸಿದರು. ಆ ಬಗ್ಗೆ ನೆನಪಿಗಾಗಿ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡು ಯುವ ಪೀಳಿಗೆಗೆ ಸಮಗ್ರ ಮಾಹಿತಿ ಒದಗಿಸುವಂತಾಗಬೇಕು. ಕನ್ನಡ ಶಾಸನಗಳ ಮೂಲಕ ಕನ್ನಡ ಭಾಷೆಯ ಇತಿಹಾಸವನ್ನು ಪ್ರತಿಯೊಬ್ಬರು ತಿಳಿಯುವಂತಾಗಬೇಕು ಎಂದು ಹೇಳಿದರು. ಗಲ್ಲಿ ಗಲ್ಲಿಗಳಲ್ಲಿ ಮನ ಮನೆಗಳಲ್ಲಿ ಕನ್ನಡ ಭಾಷೆ ಬಳಸುವ ಮೂಲಕ ಭಾಷೆಯ ಉಳಿವು ಸಾಧ್ಯ ಎಂದರು.ಇದೇ ಸಂದರ್ಭ ಹಿರಿಯ ಪತ್ರಕರ್ತರು ಸಾಹಿತಿಗಳು ಆದ ಬಿ ಆರ್ ನಾರಾಯಣ, ಸಾಹಿತಿ ಫ್ಯಾನ್ಸಿ ಮುತ್ತಣ್ಣ, ಕಬಡ್ಡಿ ಕ್ರೀಡಾಪಟು ಕೆ ಎ ಚೇತನ್, ಪುರಸಭೆ ಕಾರ್ಮಿಕರಾದ ಮಂಜುನಾಥ, ಕನ್ನಡಪರ ಸಂಘಟನೆಯ ಇಂದಿರಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪಟ್ಟಣ ವ್ಯಾಪ್ತಿಯ ಶಾಲಾ ಕಾಲೇಜು ವಿದ್ಯಾರ್ಥಿಗಳು ಪೊಲೀಸ್, ಎನ್‌ಸಿಸಿ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.

ಈ ಸಂದರ್ಭ ಪುರಸಭೆ ಅಧ್ಯಕ್ಷರಾದ ಜಯಲಕ್ಷ್ಮಿ, ಉಪಾಧ್ಯಕ್ಷರಾದ ಪುಟ್ಟಲಕ್ಷ್ಮಿ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಕೆ ಎಸ್ ನಾಗೇಶ್, ಪೊಲೀಸ್ ಉಪ ಅಧೀಕ್ಷಕ ಚಂದ್ರಶೇಖರ್, ಪುರಸಭೆ ಮುಖ್ಯ ಅಧಿಕಾರಿ ಟಿ ಎಸ್ ಗಿರೀಶ್, ಪುರಸಭೆ ಸದಸ್ಯರು ಅಧಿಕಾರಿ, ಸಿಬ್ಬಂದಿ ಸಂಘ ಸಂಸ್ಥೆಗಳ ಪ್ರಮುಖರು ಇದ್ದರು.ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

PREV

Recommended Stories

ಪಾಳು ಬಿದ್ದ ರೈತ ಸಭಾ ಭವನ ಕಟ್ಟಡ
ಕೊಂಕಣಿ ನೆಲದಲ್ಲಿ ಕನ್ನಡದಲ್ಲಿ ಸಹಿ ಸಂಗ್ರಹ, ಕದಂಬ ವೃಕ್ಷ ಪೂಜಿಸಿ ರಾಜ್ಯೋತ್ಸವ ಆಚರಣೆ