ಶಿರಸಿ: ಪ್ರತಿ ಶನಿವಾರ ತಾಲೂಕು ಮಟ್ಟದಲ್ಲಿ ಪ್ರಜಾಸೇವೆ ಆಂದೋಲನ ಪ್ರಾರಂಭಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಬರ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಸೂಚಿಸಿದ್ದಾರೆ.
ಸ್ಥಳೀಯ ಸಮಸ್ಯೆಗಳು ಹಾಗೂ ಹಾನಿಗಳ ಕುರಿತು ಈಗಾಗಲೇ ಸಭೆ ನಡೆದಿದ್ದು, ಅತಿವೃಷ್ಟಿ, ಅನಾವೃಷ್ಟಿ ಸಂಬಂಧಿಸಿದಂತೆ ತುರ್ತಾಗಿ ಎಲ್ಲರೂ ಕೆಲಸ ಮಾಡಬೇಕು. ಎಲ್ಲ ಇಲಾಖೆಗಳು ಸೇರಿ ಸಭೆ ನಡೆಸಿ, ವರದಿ ಸೋಮವಾರ ಸಲ್ಲಿಸಬೇಕು. ಅಗತ್ಯ ಕ್ರಮಕ್ಕೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ಕೋರಿಕೆ ಸಲ್ಲಿಸುತ್ತೇನೆ ಎಂದು ಹೇಳಿದರು.ಅತಿವೃಷ್ಟಿ, ಅನಾವೃಷ್ಟಿ, ಮಳೆ ಕೊರತೆ ಹಾಗೂ ಮಳೆಯಿಂದ ಆದ ಹಾನಿ ಕುರಿತು ಅವರು ವಿವಿಧ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಪೂರ್ಣ ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಈಗಲೇ ಕಚೇರಿಗೆ ತೆರಳಿ, ಸಂಪೂರ್ಣ ಮಾಹಿತಿ ಸಲ್ಲಿಸಿ ಎಂದು ಸೂಚಿಸಿದರು. ನಿರಂತರವಾಗಿ ಅಧಿಕಾರಿಗಳು ಸ್ಥಳೀಯ ಶಾಸಕರೊಂದಿಗೆ ಸಂಪರ್ಕದಲ್ಲಿದ್ದು, ಸಾರ್ವಜನಿಕರ ಕುಂದು-ಕೊರತೆಗಳನ್ನು ಮತ್ತು ಅಹವಾಲುಗಳನ್ನು ಸ್ವೀಕರಿಸಿ ಅವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಮುಂದಿನ ಸಭೆಯಲ್ಲಿ ಇಂಥ ಯಾವುದೇ ಸಾರ್ವಜನಿಕರ ದೂರುಗಳು ನಮಗೆ ಬರಬಾರದು ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.
ಶಾಸಕ ಶಿವರಾಮ ಹೆಬ್ಬಾರ್ ಮಾತನಾಡಿ, ಅರಣ್ಯ ಇಲಾಖೆ ಜನಸಾಮಾನ್ಯರೊಂದಿಗೆ ಬೆರೆವ ಇಲಾಖೆ. ಅರಣ್ಯ ಇಲಾಖೆ ಜನರೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಳ್ಳಬೇಕು. ಇಲ್ಲಿನ ಜನ ಅರಣ್ಯದ ಮಧ್ಯೆಯೇ ವಾಸಿಸುತ್ತಿದ್ದಾರೆ. ಜಿಪಿಎಸ್ ಆದ ಕಡೆಗಳ ಜನರಿಗೆ ಕಿರುಕುಳ ನೀಡಬೇಡಿ. ಅಧಿಕಾರಿಗಳು ಈ ಜಿಲ್ಲೆಗೆ ಹೊಂದಿಕೊಂಡು ಹೋಗಬೇಕು ಎಂದು ಹೇಳಿದರು.ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಕೃಷಿ ಜಮೀನಿಗೆ ಹೋಗುವ ಜಾಗಗಳಿಗೆ ತೊಂದರೆ ನೀಡಬೇಡಿ. ದನ ಕರುಗಳ ಮೇವಿಗೆ ತೊಂದರೆ ಆಗಬಾರದು. ಜಮೀನುಗಳ ಒಳಗಡೆ ಹಾಕಿರುವ ಅಡಿಕೆ ಮರಗಳನ್ನು ಕೀಳಬೇಡಿ. ಹೊಸ ಅತಿಕ್ರಮಣವಾದರೆ ತೆಗೆಸಿ, ಯಾವುದೇ ತೊಂದರೆಯಿಲ್ಲ. ಹಿಂದಿನಿಂದ ಬಂದ ಅತಿಕ್ರಮಣಗಳನ್ನು ತೆರವುಗೊಳಿಸುವ ಕೆಲಸ ಮಾಡಬೇಡಿ ಎಂದು ಹೇಳಿದರು.ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಪಂ ಸಿಇಒ ದಿಲೀಶ್ ಶಶಿ, ಎಸ್ಪಿ ದೀಪನ್ ಎಂ.ಎನ್., ಎಸಿ ಚಂದ್ರಶೇಖರ ಆರ್.ಜಿ., ತಹಸೀಲ್ದಾರ್ ಪಟ್ಟರಾಜಗೌಡ, ಡಿವೈಎಸ್ಪಿ ಗೀತಾ ಪಾಟೀಲ್, ಸಿಪಿಐ ಸಂಪತ್, ಸತೀಶ್ ನಾಯ್ಕ್, ಸುಮಾ ಉಗ್ರಾಣಕರ್, ಜಗದೀಶ್ ಗೌಡ ಇದ್ದರು.ಹಾನಿ ವೀಕ್ಷಣೆ: ಇತ್ತೀಚೆಗೆ ಭಾರಿ ಮಳೆಯಿಂದ ಹಾನಿಗೊಳಗಾದ ಗೌಡಳ್ಳಿ ಭಾಗದ ಪ್ರದೇಶ ಹಾಗೂ ರಸ್ತೆ ಸಂಪರ್ಕ ಕಡಿತಗೊಂಡಿದ್ದ ಸ್ಥಳಕ್ಕೆ ಸಚಿವ ಲಕ್ಷ್ಮಣ ಸವದಿ ಭೇಟಿ ನೀಡಿ, ಪರಿಶೀಲಿಸಿದರು. ಕೂಡಲೇ ಈ ರಸ್ತೆಗೆ ಸಿಡಿ ಅಳವಡಿಸಿ, ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.