ಕನ್ನಡಪ್ರಭ ಚಿಕ್ಕಮಗಳೂರು
ಭಾರತದಲ್ಲಿ ಸಂವಿಧಾನದ ಆಶಯದಡಿ ಕಾನೂನುಗಳು ರಚನೆಯಾಗಿದ್ದು, ಇದರ ಪಾಲನೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಹನುಮಂತಪ್ಪ ಹೇಳಿದರು.ಜಿಲ್ಲಾ ಪೊಲೀಸ್ ಇಲಾಖೆ ಮಂಗಳವಾರ ಏರ್ಪಡಿಸಿದ್ದ ಮಾಧ್ಯಮ- ಪೊಲೀಸ್ ಮತ್ತು ಕಾನೂನು ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಚಲಿತ ಅಪರಾಧಗಳಿಗೆ ಅನ್ವಯವಾಗುವಂತೆ ಕೆಲವು ಕಾನೂನುಗಳಿಗೆ ತಿದ್ದುಪಡಿ ತರಲಾಗಿದ್ದು, ಜು.1ರಿಂದ ಜಾರಿಗೆ ಬರಲಿವೆ ಎಂದು ಎಂದು ತಿಳಿಸಿದರು.
ಪ್ರತಿಯೊಂದು ಜೀವಿಯ ಬದುಕಿನ ಉದ್ದಕ್ಕೂ ಅಸಹಾಯಕರ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಬಂದಿದೆ. ಇದು, ಈಗಲೂ ಮುಂದುವರೆದಿದೆ. ಪ್ರತಿ ನಾಗರೀಕನಿಗೆ ಬದುಕುವ ಹಕ್ಕಿದೆ, ಇದನ್ನು ಬೇರೆ ಯಾರೂ ಕೂಡ ಹರಣ ಮಾಡಬಾರದು. ಈ ಕಾರಣಕ್ಕಾಗಿ ಕಾನೂನುಗಳು ಜಾರಿಗೆ ಬಂದಿವೆ. ಅವುಗಳನ್ನು ಪಾಲನೆ ಮಾಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.ಸಂವಿಧಾನದ ಆಶಯದಡಿ ದೇಶದ ಕಾನೂನು ರಚನೆಯಾಗಿವೆ. ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸುವುದು ಇದರ ಉದ್ದೇಶವಾಗಿದೆ ಎಂದ ಅವರು, ಬ್ರಿಟಿಷರ ಕಾಲದಲ್ಲಿ ಜಾರಿಯಲ್ಲಿದ್ದ ಕೆಲವು ಕಾನೂನುಗಳು ಈಗಲೂ ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಪ್ರಚಲಿತ ಅಪರಾಧಗಳ ಶಿಕ್ಷೆಗೆ ಅನ್ವಯವಾಗುವಂತೆ ಸುಪ್ರಿಂ ಕೋರ್ಟ್ನ ಸೂಚನೆ ಮೇರೆಗೆ ಕೆಲವು ಕಾನೂನುಗಳಿಗೆ ಮಾರ್ಪಾಡು ತರಲಾಗಿದೆ ಎಂದು ಹೇಳಿದರು.
ಸರ್ಕಾರಿ ಅಭಿಯೋಜಕರಾದ ಭಾವನಾ ಅವರು, ಭಾರತೀಯ ದಂಡ ಸಂಹಿತೆ (ಐಪಿಸಿ) ಕುರಿತು ಮಾತನಾಡಿ, ಜು.1ರಿಂದ ಭಾರತೀಯ ದಂಡ ಸಂಹಿತೆಯನ್ನು ಭಾರತೀಯ ನ್ಯಾಯ ಸಂಹಿತೆಯನ್ನಾಗಿ ಮಾರ್ಪಾಡುಗೊಳಿಸಲಾಗಿದೆ. 1860ರಲ್ಲಿ ಜಾರಿಗೆ ಬಂದಿರುವ ಐಪಿಸಿಯಲ್ಲಿ 511 ಕಾನೂನುಗಳು ಇದ್ದವು. ಇದೀಗ 358ಕ್ಕೆ ಇಳಿಸಲಾಗಿದೆ. ಹಿಂದಿದ್ದ 23 ಚಾಪ್ಟರ್ಗಳನ್ನು 20ಕ್ಕೆ ಇಳಿಸಲಾಗಿದೆ. ಇದೇ ಮೊದಲ ಬಾರಿಗೆ ಸಾಧಾರಣ ಅಪರಾಧಕ್ಕೆ ಸಮುದಾಯ ಸೇವೆ ಶಿಕ್ಷೆ ನೀಡುವುದನ್ನು ಹೊಸ ಕಾನೂನಿನಲ್ಲಿ ಜಾರಿಗೆ ತರಲಾಗುತ್ತಿದೆ.ಸಂಘಟಿತ ಅಪರಾಧ, ಗ್ಯಾಮ್ ಲಿಂಗ್, ಕಿಡ್ನಾಪ್, ವಾಹನ ಕಳುವು, ಭೂ ಕಬಳಿಕೆ, ಭಯೋತ್ಪಾದನಾ ಕೃತ್ಯ, ಆಂತರಿಕ ಭದ್ರತೆಯಂತಹ ಅಪರಾಧಗಳಿಗೆ ನಿರ್ಧಿಷ್ಟವಾಗಿ ಕಾನೂನಿನಲ್ಲಿ ಶಿಕ್ಷೆ ನೀಡಬೇಕೆಂದು ನಿಖರವಾಗಿ ಹೇಳದಿರುವುದು ಆರೋಪಿಗಳಿಗೆ ಶಿಕ್ಷೆ ನೀಡಲು ಕಷ್ಟವಾಗುತ್ತಿತ್ತು ಎಂದು ಹೇಳಿದರು.
ಜಿಲ್ಲಾ ಕಿರಿಯ ಕಾನೂನು ಅಧಿಕಾರಿ ಬೀನು ಅಪರಾಧಿಕ ಪ್ರಕ್ರಿಯೆ ಸಂಹಿಕೆ (ಸಿಆರ್ಪಿಸಿ) ಕುರಿತು ಮಾತನಾಡಿ, ಸಿಆರ್ಪಿಸಿ ಅನ್ನು ಭಾರತೀಯ ನಾಗರಿಕ ಸುರಕ್ಷಾ ನಿಯಮ ಎಂಬುದಾಗಿ ಕರೆಯಲಾಗುತ್ತದೆ. ಇರದಡಿಯಲ್ಲಿ 483 ಕಾನೂನುಗಳು ಇದ್ದವು. ಈ ಸಂಖ್ಯೆಯನ್ನು 531ಕ್ಕೆ ಏರಿಸಲಾಗಿದೆ. ಹಿಂದಿನ 9 ಸಕ್ಷನ್ಗಳು ರದ್ದುಪಡಿಸಿ, ಮತ್ತೆ ಹೊಸದಾಗಿ 9 ಸೆಕ್ಷನ್ ಸೇರ್ಪಡೆಗೊಳಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ ದೃಶ್ಯ ಮಾಧ್ಯಮಗಳ ಜತೆಗೆ ಸೈಬರ್ ಕ್ರೈಂಗಳಿಗೆ ಅನ್ವಯವಾಗುವ ಕಾನೂನುಗಳು ಇವೆ. 1863ರಲ್ಲಿ ಕಾನೂನು ರಚನೆ ಮಾಡುವ ಸಂದರ್ಭದಲ್ಲಿ ಈಗ ಕಂಡು ಬರುತ್ತಿರುವ ಅಪರಾಧಗಳು ಹಿಂದೆ ಇರಲಿಲ್ಲ. ಆಯಾಯ ಪರಿಸ್ಥಿತಿಗೆ ಅನ್ವಯವಾಗುವಂತೆ ಹೊಸ ಕಾನೂನು ಜಾರಿಗೆ ಬರುತ್ತಿದೆ ಎಂದು ಹೇಳಿದರು.ಈ ವೇಳೆ ಸರ್ಕಾರಿ ಅಭಿಯೋಜಕರಾದ ರಾಘವೇಂದ್ರ ರಾಯ್ಕರ್ ಅವರು ಭಾರತೀಯ ಸಾಕ್ಷ್ಯ ಅಧಿನಿಯಮ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿಕ್ಕಮಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ. ರಾಜೇಶ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕೃಷ್ಣಮೂರ್ತಿ, ತರೀಕೆರೆ ಡಿವೈಎಸ್ಪಿ ಹಾಲಮೂರ್ತಿ ರಾವ್ ಇದ್ದರು.
*ಅಪರಾಧ ಕಾನೂನುಗಳಿಗೆ ತಿದ್ದುಪಡಿ
*ಜುಲೈ 1ರಿಂದ ಜಾರಿಗೆ*511 ಕಾನೂನುಗಳಿದ್ದ ಸಂಖ್ಯೆ 358ಕ್ಕೆ ಇಳಿಕೆ
*ಸಾಧಾರಣ ಅಪರಾಧಕ್ಕೆ ಸಮುದಾಯ ಸೇವೆ ಶಿಕ್ಷೆ ಜಾರಿಐಪಿಸಿ ಸೆಕ್ಷನ್ 302 ಕ್ಕೆ ಬದಲಾವಣೆಕೊಲೆ ಅಪರಾಧಕ್ಕೆ ಐಪಿಸಿ 302 ರಡಿ ಪ್ರಕರಣ ದಾಖಲು ಮಾಡಲಾಗುತ್ತಿತ್ತು. ಆದರೆ, ಹೊಸ ಕಾನೂನಿನಲ್ಲಿ ಕಲಂ ಸಂಖ್ಯೆಯನ್ನು 103ಕ್ಕೆ ಬದಲಾವಣೆ ಮಾಡಲಾಗಿದೆ. ಯಾವ ಸ್ವರೂಪದ ಕೊಲೆಯಾಗಿದೆ ಎಂಬುದರ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ ಎಂದು ಭಾವನಾ ತಿಳಿಸಿದರು.