ಕನ್ನಡಪ್ರಭ ವಾರ್ತೆ ಬೀದರ್
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು ನಮ್ಮ ಹೃದಯ ಹಾಗೂ ದೇವಾಲಯದಂತಿರುವ ಶಕ್ತಿ ಭವನದಲ್ಲಿಯೇ ಶತ್ರು ರಾಷ್ಟ್ರದ ಪರ ಘೋಷಣೆ ಕೂಗಿದವರವನ್ನು ಈ ಸರ್ಕಾರ ರಕ್ಷಣೆ ಮಾಡುತ್ತಿದೆ ಎಂದು ಮಾಜಿ ಸಚಿವ ಶಾಸಕ ಪ್ರಭು ಚವ್ಹಾಣ್ ಆರೋಪಿಸಿದರು.ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ರಾಜ್ಯದ ಇತಿಹಾಸದಲ್ಲಿಯೇ ಇಂತಹ ಘಟನೆ ನಡೆದಿಲ್ಲ. ರಾಜ್ಯಸಭಾ ಸದಸ್ಯರ ಬೆಂಬಲಿಗರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ. ಆದರೂ ಕೂಡ ಸರ್ಕಾರ ಕಣ್ಣು ಹಾಗೂ ಕಿವಿ ಮುಚ್ಚಿಕೊಂಡಂತಾಗಿದೆ ಎಂದರು.
ಎಫ್ಎಸ್ಎಲ್ ವರದಿ ಬಂದಿದ್ದರೂ ಇನ್ನುವರೆಗೂ ಯಾರನ್ನು ಬಂಧಿಸಿಲ್ಲ. ಇನ್ನು ವರದಿಯೇ ಬಂದಿಲ್ಲ ಎಂದು ಸಂಬಂಧಪಟ್ಟವರು ಹೇಳುತ್ತಿರುವುದು ಸರಿಯಾ ಎಂದ ಅವರು, ರಾಜ್ಯ ಸರ್ಕಾರ ಕೇವಲ ಒಂದು ಸಮುದಾಯಕ್ಕೆ ಸಂತೋಷ ಪಡಿಸಲು ಮುಂದಾಗಿದೆ ಎಂದರು.ರಾಜ್ಯ ಹಾಗೂ ದೇಶದ ಅನ್ನ ತಿಂದು, ನೀರು ಕುಡಿದು ಪಾಕಿಸ್ತಾನ ಪರ ಘೋಷಣೆ ಕೂಗುವವರು ಪಾಕಿಸ್ತಾನಕ್ಕೆ ಹೋಗಲಿ ನಮ್ಮ ಅಭ್ಯಂತರವಿಲ್ಲ. ರಾಜ್ಯದಲ್ಲಿ ಬರಗಾಲ ಇದ್ದು ಇಲ್ಲಿಯವರೆಗೆ ಬರ ಕಾಮಗಾರಿಗಾಗಿ ಯಾವ ಕ್ಷೇತ್ರದ ಶಾಸಕರಿಗೂ ನಯಾ ಪೈಸೆ ಬಂದಿಲ್ಲ. ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಬರಗಾಲದ ಹಣ ಜಾರಿ ಮಾಡಲಿ ಎಂದರು.
ನಮ್ಮ ಗುರಿ ಬಿಜೆಪಿ ಅಭ್ಯರ್ಥಿ ಗೆಲವು: ಲೋಕಸಭಾ ಕ್ಷೇತ್ರದ ಐದು ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಮಾಜಿ ಶಾಸಕರದ್ದು, ಒಂದೆ ಗುರಿ ಬಿಜೆಪಿ ಅಭ್ಯರ್ಥಿಯ ಗೆಲುವು ಆಗಿದೆ. ಪಕ್ಷದ ಟಿಕೆಟ್ಗಾಗಿ ಇಲ್ಲಿಯವರೆಗೆ 32 ಅರ್ಜಿಗಳು ಬಂದಿವೆ. ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆ ಅವರ ಪರವಾಗಿ ಎಲ್ಲರು ಒಗ್ಗಟ್ಟಾಗಿ ಕೆಲಸ ಮಾಡುವ ಮೂಲಕ 2 ಲಕ್ಷ ಮತಗಳ ಅಂತರದಿಂದ ಗೆಲುವು ನಮ್ಮದೆ ಎಂದು ಸ್ಪಷ್ಟಪಡಿಸಿದರು.ಪಕ್ಷದ ಟಿಕೆಟ್ಗಾಗಿ ಶಕ್ತಿ ಕೇಂದ್ರ, ಮಂಡಲ ಸೇರಿದಂತೆ ಎಲ್ಲ ಕಡೆಗಳಿಂದ ಅಭಿಪ್ರಾಯ ಸಂಗ್ರಹಿಸಿ ಪಕ್ಷದ ವರಿಷ್ಠರು ನೀಡುತ್ತಾರೆ. ಹೀಗಾಗಿ ಟಿಕೆಟ್ ಇವರಿಗೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಶಾಸಕರಾದ ಶರಣು ಸಲಗರ, ಡಾ.ಸಿದ್ದು ಪಾಟೀಲ್, ಡಾ. ಅವಿನಾಶ ಜಾಧವ, ರಘುನಾಥರಾವ ಮಲ್ಕಾಪೂರೆ, ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ಸುಭಾಷ ಗುತ್ತೆದಾರ, ವಿಭಾಗೀಯ ಪ್ರಮುಖರಾದ ಈಶ್ವರಸಿಂಗ ಠಾಕೂರ, ವಕ್ತಾರ ಸದಾನಂದ ಜೋಶಿ, ಬಸವರಾಜ ಪವಾರ, ಶ್ರೀನಿವಾಸ ಚೌಧರಿ ಇದ್ದರು.