ವಿದ್ಯುತ್‌ ಸ್ಮಾರ್ಟ್‌ ಮೀಟರ್‌ - ಟೆಂಡರ್‌ ವಂಡರ್‌ : ಮೀಟರ್‌ ಗುತ್ತಿಗೆ ನಿಯಮ ಗಾಳಿಗೆ

KannadaprabhaNewsNetwork |  
Published : Mar 23, 2025, 01:34 AM ISTUpdated : Mar 23, 2025, 08:09 AM IST
ಸ್ಮಾರ್ಟ್‌ ಮೀಟರ್‌ ಹಗರಣ | Kannada Prabha

ಸಾರಾಂಶ

ವಿದ್ಯುತ್‌ ಸ್ಮಾರ್ಟ್‌ ಮೀಟರ್‌ ಅಳವಡಿಸಿ ನಿರ್ವಹಿಸಲು ಅಗತ್ಯ ತಾಂತ್ರಿಕ ಹಾಗೂ ಆರ್ಥಿಕ ಸಾಮರ್ಥ್ಯ ಇಲ್ಲದ ಕಂಪನಿಯೊಂದಕ್ಕೆ ಕೆಟಿಟಿಪಿ  ನಿಯಮ ಗಾಳಿಗೆ ತೂರಿ   ಟೆಂಡರ್‌ ನೀಡಲಾಗಿದ್ದು, ಬೃಹತ್‌ ಟೆಂಡರ್ ಅಕ್ರಮ ಬಹಿರಂಗಗೊಂಡಿದೆ ಎಂದು ವಿದ್ಯುತ್‌ ಗುತ್ತಿಗೆದಾರರು ಆರೋಪಿಸಿದ್ದಾರೆ.

 ಬೆಂಗಳೂರು : ವಿದ್ಯುತ್‌ ಸ್ಮಾರ್ಟ್‌ ಮೀಟರ್‌ ಅಳವಡಿಸಿ ನಿರ್ವಹಿಸಲು ಅಗತ್ಯ ತಾಂತ್ರಿಕ ಹಾಗೂ ಆರ್ಥಿಕ ಸಾಮರ್ಥ್ಯ ಇಲ್ಲದ ಕಂಪನಿಯೊಂದಕ್ಕೆ ಕೆಟಿಟಿಪಿ (ಕರ್ನಾಟಕ ಸಾರ್ವಜನಿಕ ಖರೀದಿಯಲ್ಲಿ ಪಾರದರ್ಶಕತೆ ಕಾಯ್ದೆ) ನಿಯಮ ಗಾಳಿಗೆ ತೂರಿ ಬೆಸ್ಕಾಂ ವ್ಯಾಪ್ತಿಯಲ್ಲಿ 4,877 ಕೋಟಿ ರು. ಮೌಲ್ಯದ ಟೆಂಡರ್‌ ನೀಡಲಾಗಿದ್ದು, ಬೃಹತ್‌ ಟೆಂಡರ್ ಅಕ್ರಮ ಬಹಿರಂಗಗೊಂಡಿದೆ ಎಂದು ವಿದ್ಯುತ್‌ ಗುತ್ತಿಗೆದಾರರು ಆರೋಪಿಸಿದ್ದಾರೆ.

ದಾವಣಗೆರೆ ಮೂಲದ ರಾಜಶ್ರೀ ಎಲೆಕ್ಟ್ರಿಕಲ್ಸ್‌ ಕಂಪನಿಗೆ 5 ವರ್ಷದಲ್ಲಿ 20 ಲಕ್ಷ ಸ್ಮಾರ್ಟ್‌ ಮೀಟರ್‌ ಅಳವಡಿಸಿ ನಿರ್ವಹಿಸಲು 4,877 ಕೋಟಿ ರು. ಟೆಂಡರ್‌ ನೀಡಲಾಗಿದೆ. ಆದರೆ, ಕೆಟಿಟಿಪಿ ನಿಯಮಗಳ ಪ್ರಕಾರ ಇಷ್ಟು ದುಬಾರಿ ಟೆಂಡರ್‌ ಪಡೆಯಲು ಆರ್ಥಿಕ ವಹಿವಾಟು, ಲಿಕ್ವಿಡ್‌ ಆಸ್ತಿ ಹಾಗೂ ಭದ್ರತಾ ಠೇವಣಿಯನ್ನೂ ಕಂಪನಿ ಹೊಂದಿಲ್ಲ ಎಂಬುದು ಈ ಗುತ್ತಿಗೆದಾರರ ಆರೋಪ. ಹೀಗಾಗಿ ಟೆಂಡರ್‌ ಮೊತ್ತದ ಒಂದು ವರ್ಷದ ಬಿಲ್‌ ಪಾವತಿ ಮಾತ್ರ (997.23 ಕೋಟಿ ರು.) ಟೆಂಡರ್‌ ಮೊತ್ತ ಎಂದು ಪರಿಗಣಿಸಿ ರಾಜಶ್ರೀ ಎಲೆಕ್ಟ್ರಿಕಲ್ಸ್‌ ಕಂಪನಿಗೆ ಅಕ್ರಮವಾಗಿ ಟೆಂಡರ್ ದೊರೆಯುವಂತೆ ಮಾಡಲಾಗಿದೆ ಎಂದು ಆರೋಪಿಸಲಾಗುತ್ತಿದೆ.

ಸ್ಮಾರ್ಟ್‌ ಮೀಟರ್‌ ಅಳವಡಿಕೆ ಜತೆಗೆ ಎಎಂಐ ಸಾಫ್ಟ್‌ವೇರ್‌ ನಿರ್ವಹಣೆ ಪಡೆದಿರುವ ರಾಜಶ್ರೀ ಎಲೆಕ್ಟ್ರಿಕಲ್ಸ್‌ ಕಂಪನಿಯು ಉತ್ತರ ಪ್ರದೇಶದಲ್ಲಿ ಕಪ್ಪುಪಟ್ಟಿಗೆ ಸೇರಿರುವ ಕಂಪನಿಗೆ ಉಪಗುತ್ತಿಗೆ ನೀಡಿದೆ ಎಂದು ಕರ್ನಾಟಕ ಅನುಮತಿ ಪಡೆದ ಗುತ್ತಿಗೆದಾರರ ಸಂಘದ ಬೆಂಗಳೂರು ವಿಭಾಗದ ಮಾಜಿ ಅಧ್ಯಕ್ಷ ಸುರೇಶ್‌ ಅಪ್ಪಿ ಆರೋಪಿಸಿದ್ದಾರೆ.

ಜತೆಗೆ ಕೆಇಆರ್‌ಸಿಯು 2024ರ ಮಾರ್ಚ್‌ನಲ್ಲಿ ಪ್ರಕಟಿಸಿರುವ ಅಧಿಸೂಚನೆ ಪ್ರಕಾರ, ಪ್ರಾಯೋಗಿಕ ಅಳವಡಿಕೆ ಹಾಗೂ ತಾಂತ್ರಿಕ ಸಾಮರ್ಥ್ಯ ಪರಿಶೀಲನೆ ಬಳಿಕವೇ ಸ್ಮಾರ್ಟ್‌ ಮೀಟರ್‌ ಅಳವಡಿಕೆ ಕಡ್ಡಾಯ ಮಾಡಿ ಟೆಂಡರ್‌ ನೀಡಬೇಕಿತ್ತು. ಆದರೆ ಬೆಸ್ಕಾಂ ಏಕಾಏಕಿ ತಾತ್ಕಾಲಿಕ ಹಾಗೂ ಹೊಸ ಸಂಪರ್ಕಗಳಿಗೆ ಸ್ಮಾರ್ಟ್‌ ಮೀಟರ್‌ ಕಡ್ಡಾಯಗೊಳಿಸಿದ್ದು, ತರಾತುರಿಯಲ್ಲಿ ದುಬಾರಿ ಟೆಂಡರ್‌ ನೀಡಿದೆ ಎಂದು ದೂರಿದ್ದಾರೆ.

ಟೆಂಡರ್‌ ಮೊತ್ತ ಕಡಿಮೆ ತೋರಿಸಿದ್ದು ಹೇಗೆ?:

ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ವರ್ಷ 4 ಲಕ್ಷ ಮೀಟರ್‌ಗಳಂತೆ 5 ವರ್ಷದಲ್ಲಿ 20 ಲಕ್ಷ ಮೀಟರ್‌ಗೆ 1,139 ಕೋಟಿ ರು., ಐಟಿ ವ್ಯವಸ್ಥೆ ನಿರ್ವಹಣೆಗೆ 10 ವರ್ಷಗಳಿಗೆ 3730 ಕೋಟಿ ರು., ಮಾನವ ಸಂಪನ್ಮೂಲ ಒದಗಿಸಲು 5.8 ಕೋಟಿ ರು. ಹಾಗೂ ಮಾರಾಟ ಮಳಿಗೆ ಬಾಡಿಗೆ 2.8 ಕೋಟಿ ರು. ಸೇರಿ 4,877 ಕೋಟಿ ರು. ಟೆಂಡರ್‌ ಮೊತ್ತ ಎಂದು 2024ರ ಸೆ.26ರ ಬೆಸ್ಕಾಂ ಟೆಂಡರ್‌ ದಾಖಲೆಯಲ್ಲಿ ಹೇಳಲಾಗಿದೆ.

ಆದರೆ, ಟೆಂಡರ್‌ ಪರಿಶೀಲನೆ ಹಾಗೂ ಟೆಂಡರ್‌ ಅಂತಿಮಗೊಳಿಸುವ ವೇಳೆ ಟೆಂಡರ್‌ ಮೊತ್ತವನ್ನು 997.23 ಕೋಟಿ ರು. ಎಂದು ತೋರಿಸಲಾಗಿದೆ. ಅಂದರೆ ಮೊದಲ ವರ್ಷದ ಪಾವತಿಗಳನ್ನು ಮಾತ್ರ ಟೆಂಡರ್ ಮೊತ್ತ ಎಂದು ಪರಿಗಣಿಸಿದೆ. ಐದು ವರ್ಷದ ಅವಧಿಯ 4,877 ಕೋಟಿ ರು. ಮೊತ್ತದ ಟೆಂಡರ್‌ಗೆ ಕೇವಲ ಮೊದಲ ವರ್ಷದ ಪಾವತಿ ಮಾತ್ರ ಟೆಂಡರ್‌ ಮೊತ್ತ ಎಂದು ಹೇಗೆ ಪರಿಗಣಿಸಲು ಸಾಧ್ಯ? ಬೇಕಾದವರಿಗೆ ಟೆಂಡರ್‌ ನೀಡಿ ಜೇಬು ತುಂಬಿಸಲೇ ಈ ಅಕ್ರಮ ನಡೆಸಲಾಗಿದೆ ಎಂದು ಬಿಜೆಪಿ ನಾಯಕರು ದೂರಿದ್ದಾರೆ.

ಕೆಟಿಟಿಪಿ ನಿಯಮ ಉಲ್ಲಂಘನೆಗಳೇನು?:

ಇಷ್ಟು ಬೃಹತ್‌ ಮೊತ್ತದ ಟೆಂಡರ್‌ ಅನ್ನು 2024ರ ಸೆ.26ಕ್ಕೆ ಟೆಂಡರ್‌ ಪ್ರಕಟಿಸಿ ಅ.30ಕ್ಕೆ ಮುಕ್ತಾಯ ಮಾಡಲಾಗಿದೆ. ಟೆಂಡರ್‌ ಪ್ರಕ್ರಿಯೆಗೆ ಮೊದಲು ಪತ್ರಿಕಾ ಪ್ರಕಟಣೆಯನ್ನೇ ಹೊರಡಿಸಿಲ್ಲ. ಇನ್ನು 100 ಕೋಟಿ ರು.ಗಿಂತ ಹೆಚ್ಚು ಮೊತ್ತದ ಟೆಂಡರ್‌ನಲ್ಲಿ ಜಂಟಿ ಸಹಭಾಗಿತ್ವಕ್ಕೆ ಜೆವಿ ಕನ್ಸೋರ್ಶಿಯಂಗೆ ಅನುಮತಿಸಬೇಕು. ಆದರೆ ಟೆಂಡರ್‌ ದಾಖಲೆಯಲ್ಲಿ ನಿಯಮ ತೆಗೆಯಲಾಗಿದೆ.

5 ವರ್ಷದ ಟೆಂಡರ್‌ನ ಅಂದಾಜು ಮೊತ್ತ 4,877 ಕೋಟಿ ರು. ಆಗಿದ್ದರೂ ಮೊದಲ ವರ್ಷದ ಪಾವತಿಗಳನ್ನು ಮಾತ್ರ ಪರಿಗಣಿಸಿ 997.23 ಕೋಟಿ ರು. ಎಂದು ನಮೂದು ಮಾಡಲಾಗಿದೆ.

ಈ ಮೂಲಕ ಪಿಕ್ಯೂಆರ್‌ (ಪ್ರಿ ಕ್ವಾಲಿಫಿಕೇಷನ್‌ ರಿಕ್ಯೂರ್‌ಮೆಂಟ್‌) ಪರಿಶೀಲನೆ ವೇಳೆ 4,877 ಕೋಟಿ ರು. ಬದಲು 107 ಕೋಟಿ ರು. ಮೌಲ್ಯಕ್ಕೆ ಮಾತ್ರ ಪರಿಶೀಲನೆ ನಡೆಸಿ ರಾಜಶ್ರೀ ಎಲೆಕ್ಟ್ರಿಕಲ್ಸ್‌ ಕಂಪನಿ ಅರ್ಹ ಎಂದು ಮಾಡಲಾಗಿದೆ. ಜತೆಗೆ ಕೆಟಿಟಿಪಿ ನಿಯಮ ಪ್ರಕಾರ ಯಾವುದೇ ಕಂಪನಿ ಟೆಂಡರ್‌ ಮೊತ್ತದ ದುಪ್ಪಟ್ಟು ಮೊತ್ತದಷ್ಟು ವಹಿವಾಟು ನಡೆಸಿರಬೇಕು. ಅಂದರೆ 4,800 ಕೋಟಿ ರು. ಟೆಂಡರ್‌ ಪಡೆಯಲು 9,600 ಕೋಟಿ ರು. ವಹಿವಾಟು ನಡೆಸಿರಬೇಕು. ಆದರೆ ಈ ಕಂಪನಿಗೆ ಅಷ್ಟು ವಹಿವಾಟು ನಡೆಸಿರುವ ಅನುಭವವೇ ಇಲ್ಲ.

ಇನ್ನು 4877 ಕೋಟಿ ರು.ಗೆ 48 ಕೋಟಿ ರು. ಇಎಂಡಿ ಠೇವಣಿ ಇಡುವ ಬದಲು 1.07 ಕೋಟಿ ರು. ಎಂಎಂಡಿ ಇಡಲಾಗಿದೆ. ಇನ್ನು ಟೆಂಡರ್‌ ಪಡೆಯುವ ಕಂಪನಿ ಗುತ್ತಿಗೆ ಮೊತ್ತದ (4800 ಕೋಟಿ ರು.ಗೆ) ಶೇ.30 ರಷ್ಟು ಲಿಕ್ವಿಡ್‌ ಆಸ್ತಿ ಹೊಂದಿರಬೇಕಿದ್ದರೂ ಕೇವಲ 107 ಕೋಟಿ ರು.ಗೆ ಪರಿಗಣಿಸಿ ಅನರ್ಹ ಕಂಪನಿಗೆ ಟೆಂಡರ್‌ ಸಿಗುವಂತೆ ಮಾಡಲು ಕಮಾಲ್‌ ಮಾಡಲಾಗಿದೆ ಎಂದು ಬಿಜೆಪಿ ನಾಯಕರು ಗಂಭೀರ ಆರೋಪ ಮಾಡಿದ್ದಾರೆ.

ಟೆಂಡರ್‌ನಲ್ಲಿ ಅಕ್ರಮ ಹೇಗೆ?

5 ವರ್ಷದಲ್ಲಿ 20 ಲಕ್ಷ ಸ್ಮಾರ್ಟ್‌ ಮೀಟರ್‌ ಅಳವಡಿಸಿ ನಿರ್ವಹಿಸಲು 4877 ಕೋಟಿ ರು. ಟೆಂಡರ್‌- ಇಷ್ಟು ದುಬಾರಿ ಟೆಂಡರ್‌ ನೀಡುವಾಗ ಕಂಪನಿಯು ಸೂಕ್ತ ವಹಿವಾಟು, ಆಸ್ತಿ, ಠೇವಣಿ ಹೊಂದಿರಬೇಕು- ಆದರೆ ಗುತ್ತಿಗೆ ಪಡೆದ ರಾಜಶ್ರೀ ಎಲೆಕ್ಟ್ರಿಕಲ್ಸ್‌ ಕಂಪನಿ ಅಷ್ಟೊಂದು ವಹಿವಾಟು, ಆಸ್ತಿ ಹೊಂದಿಲ್ಲ- ಒಂದು ವರ್ಷದ ಬಿಲ್‌ ಪಾವತಿಯನ್ನೇ ಟೆಂಡರ್‌ ಮೊತ್ತ ಎಂದು ಪರಿಗಣಿಸಿ ಗುತ್ತಿಗೆ ನೀಡಿರುವ ಆರೋಪ- 2024ರ ಸೆ.26ರಂದು ಟೆಂಡರ್‌ ಪ್ರಕಟಿಸಿ, ಅ.30ಕ್ಕೆ ಮುಗಿಸಲಿದೆ. ಪತ್ರಿಕಾ ಪ್ರಕಟಣೆಯನ್ನೇ ನೀಡಿಲ್ಲ- 100 ಕೋಟಿ ರು.ಗಿಂತ ಹೆಚ್ಚು ಮೊತ್ತ ಟೆಂಡರ್‌ಗೆ ಜಂಟಿ ಸಹಭಾಗಿತ್ವ ಇರಬೇಕು. ಇಲ್ಲಿ ಆ ನಿಯಮ ಪಾಲಿಸಿಲ್ಲ

ಕಪ್ಪು ಪಟ್ಟಿಗೆ ಸೇರಿರುವ ಕಂಪನಿಗೆ ಉಪಗುತ್ತಿಗೆ

ಟೆಂಡರ್‌ ಪಡೆದಿರುವ ರಾಜಶ್ರೀ ಎಲೆಕ್ಟ್ರಿಕಲ್ಸ್‌ ಕಂಪನಿ ಉತ್ತರ ಪ್ರದೇಶದಲ್ಲಿ ಕಪ್ಪುಪಟ್ಟಿಗೆ ಸೇರಿರುವ ಅಪ್ರಾವ್ ಬಿಸಿಐಟಿಎಸ್ ಎಂಬ ಕಂಪನಿಗೆ ಎಎಂಐ ಸಾಫ್ಟ್‌ವೇರ್‌ ನಿರ್ವಹಣೆಯ ಉಪಗುತ್ತಿಗೆ ನೀಡಿದೆ. ಬೆಸ್ಕಾಂನಲ್ಲಿ ಐಟಿ ಘಟಕ ಇದ್ದು 80-100 ಮಂದಿ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಇದ್ದರೂ ಹೊರಗಿನ ಕಪ್ಪು ಪಟ್ಟಿಗೆ ಸೇರಿದ ಕಂಪನಿಗೆ ಸಾವಿರಾರು ಕೋಟಿ ರು. ನೀಡಿ ನಿರ್ವಹಣೆಗೆ ವಹಿಸಲಾಗಿದೆ ಎಂದು ಕರ್ನಾಟಕ ಅನುಮತಿ ಪಡೆದ ಗುತ್ತಿಗೆದಾರರ ಸಂಘದ ಬೆಂಗಳೂರು ವಿಭಾಗದ ಮಾಜಿ ಅಧ್ಯಕ್ಷ ಸುರೇಶ್‌ ಅಪ್ಪಿ ಆರೋಪಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎರಡೂ ಕ್ಷೇತ್ರದಲ್ಲೂ ಕಾಂಗ್ರೆಸ್‌ ಗೆಲ್ಲುತ್ತೆ: ಸುರ್ಜೇವಾಲಾ ವಿಶ್ವಾಸ
ದಾವಣಗೆರೆ ಟಿಕೆಟ್‌ ಘೋಷಣೆ ಮುನ್ನವೇ ಕೈ ನಾಮಪತ್ರ