ಕನ್ನಡಪ್ರಭ ವಾರ್ತೆ ಮದ್ದೂರು
ವಕೀಲರ ಸಂಘದ ಅಧ್ಯಕ್ಷ ಎಂ.ಎನ್.ಶಿವಣ್ಣ ನೇತೃತ್ವದಲ್ಲಿ ತುರ್ತು ಸಭೆ ನಡೆಸಿದ ವಕೀಲರು ವಕೀಲ ಸದಾಶಿವ ರೆಡ್ಡಿ ಮೇಲೆ ದುಷ್ಕರ್ಮಿಗಳು ನಡೆಸಿದ ಹಲ್ಲೆಯನ್ನು ತೀವ್ರವಾಗಿ ಖಂಡಿಸಿದರು.
ನಂತರ ಬಲಕೈ ತೋಳಿಗೆ ಕೆಂಪು ಪಟ್ಟಿ ಧರಿಸಿ ಸಂಘದ ಆವರಣದಿಂದ ತಾಲೂಕ ಕಚೇರಿವರೆಗೆ ಮೌನ ಮೆರವಣಿಗೆ ನಡೆಸಿದರು. ತಹಸೀಲ್ದಾರ್ ಮೂಲಕ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸರ್ಕಾರ ಮತ್ತು ಗೃಹ ಇಲಾಖೆಗೆ ಮನವಿ ಸಲ್ಲಿಸಿದರು.ಕಾಣದ ಕೈಗಳ ಕೈವಾಡದಿಂದ ಕೇಸು ಕೊಡುವ ನೆಪದಲ್ಲಿ ವಕೀಲ ಸದಾಶಿವ ರೆಡ್ಡಿ ಕಚೇರಿಗೆ ಬಂದ ಇಬ್ಬರು ದುಷ್ಕರ್ಮಿಗಳು ರೆಡ್ಡಿಯವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಸರ್ಕಾರ ಮತ್ತು ಗೃಹ ಇಲಾಖೆ ಘಟನೆ ಕುರಿತಂತೆ ಸಮಗ್ರತನಿಖೆ ನಡೆಸುವ ಮೂಲಕ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ಯಾವುದೇ ವಕೀಲರು ತಪ್ಪಿತಸ್ಥರ ವಿರುದ್ಧ ವಕಾಲತ್ತು ವಹಿಸಬಾರದು ಎಂದು ಮನವಿ ಮಾಡಿದರು.
ನಾಳೆ ವಿದ್ಯುತ್ ವ್ಯತ್ಯಯ
ಮಂಡ್ಯ:ತಾಲೂಕಿನ ಚಿಕ್ಕಮಂಡ್ಯ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ಕಾರ್ಯನಿರ್ವಹಣೆ ಹಮ್ಮಿಕೊಂಡಿರುವುದರಿಂದ ಏಪ್ರಿಲ್ 23ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ನಗರ ಪ್ರದೇಶಗಳಾದ ಶಂಕರಪುರ, ಜೈನ ಸ್ಟ್ರೀಟ್, ಬೀಡಿ ಕಾಲೋನಿ, ಜಬರ್ ಸರ್ಕಲ್, ಹೊಳಲು ವೃತ್ತ, ವಿನಾಯಕನಂದ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಗ್ರಾಮಾಂತರ ಪ್ರದೇಶಗಳಾದ ಗೋಪಾಲಪುರ, ಚಿಕ್ಕಮಂಡ್ಯ. ಸಾತನೂರು, ಕೊಮ್ಮೇರಹಳ್ಳಿ, ಹುಲಿವಾನ, ಕೆ.ಗೌಡಗೆರೆ. ಹೆಚ್. ಮಲ್ಲಿಗೆರೆ, ಎಸ್.ಐ.ಕೋಡಿಹಳ್ಳಿ, ಹೆಚ್. ಕೋಡಿಹಳ್ಳಿ, ಸಂಪಹಳ್ಳಿ, ಗೊರವಾಲೆ, ಬಿ. ಹೊಸಹಳ್ಳಿ, ಬೀರಗೌಡನಹಳ್ಳಿ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕಂಪನಿಯ ಕಾರ್ಯ ನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.