ಕನ್ನಡಪ್ರಭ ವಾರ್ತೆ ಮದ್ದೂರು
ವಕೀಲರ ಸಂಘದ ಉಪಾಧ್ಯಕ್ಷ ಎ.ಎಂ.ಪುಟ್ಟರಾಜು ನೇತೃತ್ವದಲ್ಲಿ ಸಭೆ ನಡೆಸಿದ ವಕೀಲರು, ಕಾವೇರಿ ನದಿ ನೀರಿನ ರಕ್ಷಣೆಗಾಗಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಲು ಸರ್ವಾನುಮತದ ತೀರ್ಮಾನ ಕೈಗೊಂಡರು.
ನಂತರ ವಕೀಲರ ಸಂಘದ ಆವರಣದಲ್ಲಿ ಕೆಲಕಾಲ ಮೌನ ಪ್ರತಿಭಟನೆ ನಡೆಸಿದ ವಕೀಲರು ನಂತರ ಪಾದಯಾತ್ರೆ ಮೂಲಕ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಶಿವಕುಮಾರ ಬಿರಾದಾರ ಅವರ ಮೂಲಕ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಸರ್ಕಾರ ಯಾವುದೇ ಕಾರಣಕ್ಕೂ ಕೆ ಆರ್ ಎಸ್ ಜಲಾಶಯದಿಂದ ತಮಿಳುನಾಡಿಗೆ ಹನಿ ನೀರು ಸಹ ಬಿಡಬಾರದು ಎಂದು ಆಗ್ರಹ ಪಡಿಸಿದರು. ನಂತರ ನ್ಯಾಯಾಲಯದ ಆವರಣದಿಂದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಿದ ವಕೀಲರು ರೈತರ ಹೋರಾಟಕ್ಕೆ ಬೆಂಬಲ ನೀಡಿದರು.
ಪ್ರತಿಭಟನೆಯಲ್ಲಿ ವಕೀಲರ ಸಂಘದ ಖಜಾಂಚಿ ಪ್ರಸನ್ನ, ಕ್ರೀಡಾ ಕಾರ್ಯದರ್ಶಿ ಯಶವಂತ್, ಸಂಘದ ಸದಸ್ಯರಾದ ಯದುನಂದನ, ವಿ .ಟಿ. ರವಿಕುಮಾರ,ಸಿದ್ದಪ್ಪಾಜಿ, ಮಹೇಶ್, ಪ್ರಶಾಂತ್, ವೆಂಕಟೇಶ್, ಮನು, ಕಮಲಮ್ಮ, ಪಾವನ, ಮೈತ್ರಿ, ಕದಲೂರು ಯೋಗಾ ನಂದ, ಕೆ. ಶಿವಣ್ಣ, ವಿ.ಎಸ್. ನಾಗರಾಜು, ಮಧು, ನಾಗೇಶ್, ಎಚ್. ರವಿ, ರಾಜಮ್ಮಾಜಿ, ಅನಿಲ್ ಮತ್ತಿತರರು ಭಾಗವಹಿಸಿದ್ದರು.