ಕನ್ನಡಪ್ರಭ ವಾರ್ತೆ ಮುಂಡಗೋಡ
ನಾನು ಎಂಬ ಅಹಂಕಾರ ದ್ವೇಶ, ಆವೇಶ, ಉದ್ವೇಗ ಭಾವದಿಂದಾಗಿ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ಯಾವಾಗ ಏನುಬೇಕಾದರೂ ಸಂಭವಿಸಬಹುದು. ಅಹಂಕಾರ ತೊಡೆದುಹಾಕಿ ಸಿಕ್ಕ ಕ್ಷಣಗಳನ್ನು ಎಲ್ಲರೊಂದಿಗೆ ಪ್ರೀತಿ, ಸಂತೋಷದಿಂದ ಅನುಭವಿಸಬೇಕು. ಈ ನಶ್ವರ ಬದುಕಿನಲ್ಲಿ ಶಾಂತಿ ಮತ್ತು ಶಿಸ್ತು ಸಮಾಧಾನ ಮತ್ತು ಸಂಯಮ ಹೊಂದಬೇಕು. ತಾಳಿದವನು ಬಾಳಿಯಾನು ಎಂಬ ಮಾತು ಪ್ರತಿಯೊಬ್ಬರು ಅಳವಡಿಸಿಕೊಳ್ಳಲು ಕರೆ ನೀಡಿದರು.ಶ್ರೀ ಸುಜ್ಞಾನೇಶ್ವರ ಭಾರತೀ ಶ್ರೀಗಳು ಮಾತನಾಡಿ, ಜೀವನದಲ್ಲಿ ಏನಾದರೂ ಪ್ರಾಪ್ತಿ ಮಾಡಿಕೊಳ್ಳಬೇಕಾದರೆ ಜ್ಞಾನ ಮತ್ತು ತಾಳ್ಮೆ ಅತ್ಯಗತ್ಯ. ತಾಳ್ಮೆಯಿಂದ ಜ್ಞಾನಶಕ್ತಿ ಹೆಚ್ಚುತ್ತದೆ. ಸಾಕಷ್ಟು ತಪಸ್ಸಿನ ಫಲವಾಗಿ ಪ್ರಾಪ್ತಿಯಾಗಿರುವ ಮಾನವ ಜೀವನ ಪಾವನವಾಗಬೇಕಾದರೆ. ಸಮಾಜದಲ್ಲಿ ಗೌರವ ಪಡೆದುಕೊಳ್ಳಬೇಕು. ಯೋಗ್ಯ ಮತ್ತು ಅಯೋಗ್ಯ ಎಂಬುವುದನ್ನು ಗುರುತಿಸಿ ಸನ್ಮಾರ್ಗ ಸನ್ನಡತೆಯಿಂದ ಸಾಗಬೇಕು. ಹಿರಿಯರಿಗೆ ನಮಸ್ಕಾರ, ತಿಳುವಳಿಕೆಗೆ ಪ್ರಶ್ನೆ ಮತ್ತು ಸೇವೆ ಮಾಡುವ ಮೂಲಕ ಜ್ಞಾನವನ್ನು ಸಂಪಾದನೆ ಮಾಡಬಹುದು. ಯೋಗ್ಯ ವ್ಯಕ್ತಿಗಳ ಸಂಘ ಸಹವಾಸ ಮಾಡಬೇಕು ಎಂದು ಸಲಹೆ ನೀಡಿದರು.ಮುಂಡಗೋಡ ತಾಲೂಕು ದೈವಜ್ಞ ಸಮಾಜ ಸೇವಾ ಸಂಘದ ಅಧ್ಯಕ್ಷ ಮಂಜುನಾಥ ಅಣವೇಕರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶ್ರೀಕಾಂತ ಸಾನು, ಕಾರ್ಯದರ್ಶಿ ನಾಗೇಶ ರೇವಣಕರ, ಕೋಶಾಧ್ಯಕ್ಷ ರಾಕೇಶ ರಾಯ್ಕರ ಮುಂತಾದವರಿದ್ದರು. ಕಾರ್ಯದರ್ಶಿ ನಾಗೇಶ ರೇವಣಕರ ಸ್ವಾಗತಿಸಿದರು. ದಿನೇಶ ವೆರ್ಣೇಕರ ನಿರೂಪಿಸಿದರು. ವಿನಾಯಕ ಶೇಟ್ ವಂದಿಸಿದರು. ಇದೇ ಸಂದರ್ಭ ಹಲವು ಗಣ್ಯರನ್ನು ಸನ್ಮಾನಿಸಲಾಯಿತು.ದೈವಜ್ಞ ಸಮಾಜ ಸೇವಾ ಸಂಘ, ಮಹಿಳಾ ಹಿತರಕ್ಷಣಾ ಸಮಿತಿ, ಜ್ಞಾನೇಶ್ವರ ಮಹಿಳಾ ಮಂಡಳ, ಯುವಕ ಮಂಡಳ ಹಾಗೂ ಸುವರ್ಣಕಾರ ಸರಾಫ್ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ಬೈಕ್ ರ್ಯಾಲಿ, ಕುಂಭ ಮೇಳ ಮೆರವಣಿಗೆ:
ಇದಕ್ಕೂ ಮುನ್ನ ಬೆಳಗ್ಗೆ ಇಲ್ಲಿಯ ಪ್ರವಾಸಿ ಮಂದಿರದಿಂದ ಬೈಕ್ ರ್ಯಾಲಿ ಹೊರಟು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ಶ್ರೀ ಮಾರಿಕಾಂಬಾ ದೇವಾಲಯ ಪ್ರವೇಶಿಸಿ ಗ್ರಾಮದೇವಿಗೆ ಪೂಜೆ ಸಲ್ಲಿಸಿದ ಬಳಿಕ ಮಹಿಳೆಯರಿಂದ ಪೂರ್ಣ ಕುಂಭ, ಚಂಡೆ ವಾದ್ಯ, ಕೋಲಾಟ ಸಮೇತ ತೆರೆದ ವಾಹನದಲ್ಲಿ ಶಂಕರಾಚಾರ್ಯ ಸಂಸ್ಥಾನದ ದೈವಜ್ಞ ಬ್ರಾಹ್ಮಣ ಮಠಾಧೀಶ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿ ಹಾಗೂ ಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮಿಗಳ ಭವ್ಯ ಮೆರವಣಿಗೆ ಹೊರಟು ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ದೈವಜ್ಞ ಸಭಾ ಭವನ ತಲುಪಿತು. ತದನಂತರ ಗಣಹೋಮ, ಪೂರ್ಣಾಹುತಿ ಹಾಗೂ ವಿವಿಧ ಧಾರ್ಮಿಕ ವಿಧಿ ವಿಧಾನದೊಂದಿಗೆ ಪೂಜೆ ಕಾರ್ಯಕ್ರಮ ನಡೆದವು.