ಕನ್ನಡಪ್ರಭ ವಾರ್ತೆ ವಿಜಯಪುರ
ಬಸವಣ್ಣನವರನ್ನು ಒಂದು ಜಾತಿಗೆ ಸೀಮಿತಗೊಳಿಸದೆ, ವಿಶಾಲತೆಯಿಂದ ಕಾಣಬೇಕು. ಬಸವಣ್ಣ ಮಹಿಳೆಯರಿಗೆ ಘನತೆಯ ಬದುಕು ದೊರಕಿಸಿಕೊಟ್ಟವರು. ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು ಅಭಿನಂದನೀಯ. ಇಂಗ್ಲಿಷ್ ಸಂಸ್ಕೃತಿಯ ಬಳಕೆಯಿಂದ ನಮ್ಮ ಸಂಸ್ಕೃತಿಗೆ ಧಕ್ಕೆಯಾಗುತ್ತಿದ್ದು, ನಾವೆಲ್ಲರೂ ಬಸವ ಸಂಸ್ಕೃತಿಯ ಕಡೆಗೆ ಬರಬೇಕಾಗಿದೆ ಎಂದು ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ ಹೇಳಿದರು.ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಅಮ್ಮ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಬಸವ ಸಂಸ್ಕೃತಿ ಉತ್ಸವ-2025 ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ನಿಟ್ಟಿನಲ್ಲಿ ಅಮ್ಮ ಫೌಂಡೇಶನ್ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವುದು ಸಂತಸದ ಸಂಗತಿ ಎಂದರು.
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಬಸವಣ್ಣನವರ ವಿಚಾರಧಾರೆಗಳು ಸಮರ್ಥ ರೀತಿಯಲ್ಲಿ ಸಮಾಜವನ್ನು ತಲುಪದಿರುವುದು ವಿಷಾದನೀಯ ಸಂಗತಿ. ಅಸಮಾನತೆ ಇನ್ನೂ ನಮ್ಮನ್ನು ಕಾಡುತ್ತಿದ್ದು, ಅಂಬೇಡ್ಕರ, ಬಸವಣ್ಣನವರ ಸಿದ್ಧಾಂತ ಅರ್ಥೈಸಿಕೊಳ್ಳಬೇಕು ಎಂದು ತಿಳಿಸಿದರು.ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ವಿಶ್ವ ಕಂಡ ಅಪರೂಪದ ನಾಯಕ ಬಸವಣ್ಣನವರು ನಮ್ಮೆಲ್ಲರಿಗೂ ಆರಾಧ್ಯ ದೈವರಾಗಿದ್ದಾರೆ. ಇಂತಹ ಮಹನೀಯರ ನಾಡಿನಲ್ಲಿ ಜನಿಸಿರುವುದು ನಮ್ಮೆಲ್ಲರ ಪುಣ್ಯ. ನಾವೆಲ್ಲ ಯುಗಪುರುಷನನ್ನು ಗೌರವಿಸಿ ಅವರ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಂಡಾಗ ಜೀವನ ಪಾವನವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಬಸವಾದಿ ಶರಣರ ವಚನಗಳು ಸರ್ವಕಾಲಿಕ ಪ್ರಸ್ತುತವಾಗಿವೆ. ಪ್ರಭುತ್ವದ ವಿರುದ್ದ ಹೋರಾಡಿ, ಅನುಭವ ಮಂಟಪ ನಿರ್ಮಿಸಿ ಪ್ರಜಾಪ್ರಭುತ್ವ ಸ್ಥಾಪಿಸಿದವರು ಬಸವಾದಿ ಶರಣರು. ಬಸವಣ್ಣನವರನ್ನು ಹಾಗೂ ಬಸವಾದಿ ಶರಣರ ವಚನಗಳನ್ನು ಕರ್ನಾಟಕಕ್ಕೆ ಸಿಮೀತಗೊಳಿಸದೆ, ವಚನಗಳು ಬೇರೆ ಬೇರೆ ಭಾಷಗಳಿಗೆ ಅನುವಾದ ಆಗುವುದರ ಮೂಲಕ ಬಸವ ಚಿಂತನೆ, ಸಿದ್ದಾಂತ ವಿಶ್ವದ ಇತರೆ ಭಾಷೆಗಳಲ್ಲಿ ಪ್ರಚಾರ ಪಡಿಸುವ ಅಗತ್ಯವಿದೆ ಎಂದು ಹೇಳಿದರು.ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮ ಸಂಘಟಕ ಅಮ್ಮ ಫೌಂಡೇಶನ್ ಸಂಚಾಲಕ ಕಬೂಲ್ ಕೊಕಟನೂರ ಪ್ರಾಸ್ತಾವಿಕವಾಗಿ ಮಾತನಾಡಿರು. ಅಕ್ಕಮಹಾದೇವಿ ಮಹಿಳಾ ವಿವಿ ಕುಲಪತಿ ಡಾ.ವಿಜಯಾ ಕೋರಿಶೆಟ್ಟಿ, ಶಿಕ್ಷಕರ ಸಂಘದ ಅಧ್ಯಕ್ಷ ವೀರಭದ್ರಪ್ಪ ಮಾತನಾಡಿದರು. ಸಮಾರಂಭದಲ್ಲಿ ಡಾ.ಪ್ರಭುಗೌಡ ಲಿಂಗದಳ್ಳಿ, ಉಮೇಶ ಕಾರಜೋಳ, ಎಸ್.ಎಂ.ಪಾಟೀಲ ಗಣಿಹಾರ, ಡಾ.ಆರ್.ಎಸ್. ಪಾಟೀಲ, ಎಂ.ಸಿ.ಮುಲ್ಲಾ, ಎ.ಎಂ.ತಾಂಬೋಳಿ, ಹಣಮಂತ ಕೊಣದಿ, ಅಲ್ಲಾಬಕ್ಷ ವಾಲಿಕಾರ, ಎ.ಬಿ.ನಾಯಿಕ, ಜಗದೀಶ ಬೋಳಸೂರ, ಡಿವೈಎಸ್ಪಿ ಬಸವರಾಜ ಯಲಿಗಾರ, ಸಿಪಿಐ ರವಿ ಯಡವನ್ನವರ, ಯು.ಐ.ಶೇಖ ವೇದಿಕೆ ಮೇಲಿದ್ದರು. ಕಾರ್ಯಕ್ರಮದಲ್ಲಿ ಸಾಧಕರಿಗೆ ಬಸವಚೇತನ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ನಡೆಯಿತು.
-----ಕೋಟ್
ಬಸವಣ್ಣನವರ ತತ್ವ ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕು ಸಾಗಿಸಬೇಕು. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ, ಬಸವ ತತ್ವವನ್ನು ಆಡಳಿತದಲ್ಲಿ ತಂದ ಕೆಲವೇ ಕೆಲವು ರಾಜ್ಯದ ಮುಖ್ಯಮಂತ್ರಿಗಳಲ್ಲಿ ಸಿಎಂ ಸಿದ್ದರಾಮಯ್ಯ ಕೂಡ ಒಬ್ಬರು. ದೇವರಾಜ ಅರಸರ ನಂತರ ಸಾಮಾಜಿಕ ಚಿಂತನೆ, ಬಡವರು, ಶೋಷೀತರು, ಮಹಿಳೆಯರು, ದಲಿತ, ಅಲ್ಪಸಂಖ್ಯಾತರ ಪರ ಅಭಿವೃದ್ಧಿ ಚಿಂತನೆ ಹೊಂದಿದವವರು ಸಿದ್ದರಾಮಯ್ಯ.- ಯಶವಂತರಾಯಗೌಡ ಪಾಟೀಲ, ಇಂಡಿ ಶಾಸಕ--------
ಕನ್ನಡಪ್ರಭ ವಾರ್ತೆ ವಿಜಯಪುರಬಸವಣ್ಣನವರನ್ನು ಒಂದು ಜಾತಿಗೆ ಸೀಮಿತಗೊಳಿಸದೆ, ವಿಶಾಲತೆಯಿಂದ ಕಾಣಬೇಕು. ಬಸವಣ್ಣ ಮಹಿಳೆಯರಿಗೆ ಘನತೆಯ ಬದುಕು ದೊರಕಿಸಿಕೊಟ್ಟವರು. ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು ಅಭಿನಂದನೀಯ. ಇಂಗ್ಲಿಷ್ ಸಂಸ್ಕೃತಿಯ ಬಳಕೆಯಿಂದ ನಮ್ಮ ಸಂಸ್ಕೃತಿಗೆ ಧಕ್ಕೆಯಾಗುತ್ತಿದ್ದು, ನಾವೆಲ್ಲರೂ ಬಸವ ಸಂಸ್ಕೃತಿಯ ಕಡೆಗೆ ಬರಬೇಕಾಗಿದೆ ಎಂದು ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ ಹೇಳಿದರು.