ರಜೆ ಬಿಟ್ಟು ನಿರಂತರ ಸೇವೆಗೆ ಸಜ್ಜಾಗಿ: ಶಾಸಕ ಆರ್.ವಿ. ದೇಶಪಾಂಡೆ

KannadaprabhaNewsNetwork |  
Published : May 30, 2025, 12:56 AM IST
29ಎಚ್.ಎಲ್.ವೈ-1: ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ಹಿರಿಯ ಶಾಸಕ ಆರ್.ವಿ.ದೇಶಪಾಂಡೆಯವರ ಅಧ್ಯಕ್ಷತೆಯಲ್ಲಿ ಗುರುವಾರ ತಾಪಂ ಸಭಾಭವನದಲ್ಲಿ ಹಳಿಯಾಳ ವಿಧಾನ ಸಭಾ ಕ್ಷೇತ್ರ ಮಟ್ಟದ ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ತಾಲೂಕಗಳ ಮುಂಗಾರು ಪೂರ್ವ ತಯಾರಿ ಸಭೆಯು ನಡೆಯಿತು. | Kannada Prabha

ಸಾರಾಂಶ

ನಾನು ಕೆಲವು ದಿನಗಳ ನಂತರ ಗ್ರಾಮಾಂತರ ಭಾಗಗಳಿಗೆ ಭೇಟಿ ನೀಡುತ್ತೇನೆ.

ಹಳಿಯಾಳ: ಒಂದು ಕಡೆ ಮಳೆ ಆರಂಭವಾಗಿದ್ದು, ಇನ್ನೊಂದೆಡೆ ಕೋವಿಡ್ ಸೋಂಕು ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಸಿಬ್ಬಂದಿ ರಜೆ ಬಿಟ್ಟು, ನಿರಂತರ ಸೇವೆ ನೀಡಲು ಸಜ್ಜಾಗಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಸೂಚಿಸಿದರು.

ಗುರುವಾರ ತಾಪಂ ಸಭಾಭವನದಲ್ಲಿ ಆಯೋಜಿಸಿದ್ದ ಹಳಿಯಾಳ ವಿಧಾನಸಭಾ ಕ್ಷೇತ್ರ ಮಟ್ಟದ ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ತಾಲೂಕುಗಳ ಮುಂಗಾರು ಪೂರ್ವ ತಯಾರಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಾನು ಕೆಲವು ದಿನಗಳ ನಂತರ ಗ್ರಾಮಾಂತರ ಭಾಗಗಳಿಗೆ ಭೇಟಿ ನೀಡುತ್ತೇನೆ. ಆಗ ಗ್ರಾಮಗಳಲ್ಲಿ ಸ್ವಚ್ಛತೆ ಕಂಡು ಬರದಿದ್ದರೆ ಸಂಬಂಧಿತ ಅಧಿಕಾರಿಗಳ ಮತ್ತು ಸಿಬ್ಬಂದಿಯ ತಲೆದಂಡ ನಿಶ್ಚಿತ ಎಂದು ಎಚ್ಚರಿಕೆ ನೀಡಿದರು.

ನಕಲಿ ವೈದ್ಯರು, ಕ್ಲಿನಿಕ್ ನಿಯಂತ್ರಿಸಿ:

ಸಭೆಯಲ್ಲಿ ನಕಲಿ ವೈದ್ಯರು ಮತ್ತು ನಕಲಿ ಕ್ಲಿನಿಕ್‌ಗಳ ವಿಷಯ ಪ್ರಸ್ತಾಪವಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ತಹಸೀಲ್ದಾರರು ಮತ್ತು ತಾಲೂಕು ವೈದ್ಯಾಧಿಕಾರಿಗಳು ಮತ್ತು ಪೊಲೀಸರು ಸೇರಿ ಅವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮ, ಔಷಧ ಮತ್ತು ವಾರ್ಡ್‌ಗಳ ಪರಿಶೀಲನೆಯನ್ನು ತಹಸೀಲ್ದಾರರು ಮಾಡಬೇಕು ಎಂದು ಸೂಚಿಸಿದರು.

ಸರ್ಕಾರಿ ಕಚೇರಿ ಶುಚಿಯಾಗಿರಲಿ:

ಪಿಡಿಒಗಳ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದು, ಪ್ರತಿ ಪಿಡಿಒ ಕೇಂದ್ರ ಸ್ಥಾನದಲ್ಲಿಯೇ ಉಳಿಯಬೇಕು ಎಂದು ದೇಶಪಾಂಡೆ ತಾಕೀತು ಮಾಡಿದರು. ಸರ್ಕಾರಿ ಕಚೇರಿಗಳು, ಗ್ರಾಪಂ ಕಾರ್ಯಾಲಯಗಳು, ಸೊಸೈಟಿಗಳು ಸ್ವಚ್ಛವಾಗಿಡಬೇಕು ಎಂದರು.

ಜೋಯಿಡಾ ತಾಲೂಕಿನಲ್ಲಿ ಗುಡ್ಡ ಕುಸಿತದ ಹಾಗೂ ಮಳೆಯಿಂದ ನದಿ ತುಂಬಿ ಸಂಚಾರಕ್ಕೆ ತೊಂದರೆಯಾಗುವಂತಹ ಪ್ರಕರಣಗಳ ನಿವಾರಣೆಗೆ ಯೋಜನೆಯನ್ನು ರೂಪಿಸಬೇಕು ಎಂದು ಸೂಚಿಸಿದ ಶಾಸಕರು, ಅಪಾಯಕಾರಿ ಮರಗಳಿದ್ದರೆ ತಕ್ಷಣ ತೆರವುಗೊಳಿಸಬೇಕು. ಸರ್ಕಾರಿ ಕಟ್ಟಡಗಳು, ಶಾಲೆಗಳು ಅಂಗನವಾಡಿ ಕಟ್ಟಡಗಳು ಶಿಥಿಲಗೊಂಡಿದ್ದರೆ ಅವುಗಳ ಯಾದಿಯನ್ನು ತಮ್ಮ ಕಚೇರಿಗೆ ಸಲ್ಲಿಸಬೇಕು ಎಂದು ತಿಳಿಸಿದರು.

ಗ್ರಾಮಗಳು ಸ್ವಚ್ಛವಾಗಲಿ:

ಮೂರು ತಾಲೂಕಗಳ ತಹಸೀಲ್ದಾರರು ಮತ್ತು ತಾಪಂ ಇಒಗಳು ಸಭೆ ನಡೆಸಿ, ಜವಾಬ್ದಾರಿ ಹಂಚಿಕೊಳ್ಳಬೇಕು. ಗ್ರಾಮಾಂತರ ಭಾಗದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಿ ಸ್ವಚ್ಛತೆ ಮತ್ತು ಇತರ ಕಾರ್ಯಗಳ ಮೇಲ್ವಿಚಾರಣೆ ನಡೆಸಿರಿ ಎಂದರು.

ಗ್ರಾಮಾಂತರ ಭಾಗದಲ್ಲಿ ಸ್ವಚ್ಛತೆ ಕೊರತೆ ಕಂಡುಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ದೇಶಪಾಂಡೆ, ಗ್ರಾಮೀಣ ಭಾಗದಲ್ಲಿ ಚರಂಡಿ ಸ್ವಚ್ಛತೆ ನಡೆಸಿ, ರಸ್ತೆಯ ಪಕ್ಕ ಬೆಳೆದು ನಿಂತ ಹುಲ್ಲು ಮತ್ತು ಸಸಿಗಳನ್ನು ಮೊದಲು ತೆಗೆಯಿರಿ. ಗ್ರಾಮ ಪ್ರವೇಶಿಸುವ ಮಾರ್ಗದಲ್ಲಿ ಎಲ್ಲೆಂದರಲ್ಲಿ ಘನತ್ಯಾಜ್ಯ ಎಸೆಯುವುದನ್ನು ನಿಯಂತ್ರಿಸಬೇಕು. ಸೊಳ್ಳೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು. ಕಸ ತ್ಯಾಜ್ಯ ಎಸೆಯುವರಿಗೆ ದಂಡ ವಿಧಿಸಿ ಆದಷ್ಟು ಗ್ರಾಮಗಳು ಸ್ವಚ್ಛವಾಗಿಡಲು ಆದ್ಯತೆ ನೀಡಬೇಕು ಎಂದರು.

ಸಭೆಯಲ್ಲಿ ಭಾಗವಹಿಸಿದ ಮೂರು ತಾಲೂಕಗಳ ಪಿಡಿಒಗಳು ತಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಈವರೆಗೆ ಕೈಗೊಂಡಿರುವ ಮಳೆಗಾಲದ ಪೂರ್ವ ತಯಾರಿ ಕಾರ್ಯಗಳನ್ನು ಶಾಸಕರ ಮುಂದೆ ಮಂಡಿಸಿದರು. ಹಳಿಯಾಳ ಮತ್ತು ದಾಂಡೇಲಿ ನಗರ ಮಟ್ಟದಲ್ಲಿ ಕೈಗೊಂಡಿರುವ ಕಾರ್ಯಗಳ ಬಗ್ಗೆ ಪೌರ ಸಂಸ್ಥೆಗಳ ಅಧಿಕಾರಿಗಳು ತಿಳಿಸಿದರು. ಮೂರು ತಾಲೂಕುಗಳ ತಹಸೀಲ್ದಾರರು ಮತ್ತು ತಾಪಂ ಇಒಗಳು ಮುಂಗಾರು ಪೂರ್ವ ತಯಾರಿಯ ಬಗ್ಗೆ ಮಾಹಿತಿ ನೀಡಿದರು.

ಪುರಸಭಾ ಅಧ್ಯಕ್ಷೆ ದ್ರೌಪದಿ ಅಗಸರ, ಹಳಿಯಾಳ, ದಾಂಡೇಲಿ, ಜೋಯಿಡಾ ತಾಲೂಕಿನ ತಹಸೀಲ್ದಾರರು, ತಾಪಂ ಇಒಗಳು, ಪಿಡಿಒಗಳು ಮತ್ತು ತಾಲೂಕು ಮಟ್ಟದ ಇಲಾಖಾ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ