ಸಹೋದರನ ಮೇಲಿನ ವ್ಯಾಮೋಹ ಸಾಬೀತುಪಡಿಸಿದ ಶಾಸಕರು

KannadaprabhaNewsNetwork | Published : May 30, 2025 12:54 AM
ಸಿಂದಗಿ ನಗರವನ್ನು ಸೌಂದರ್ಯೀಕರಣ ಮಾಡಬೇಕು ಎನ್ನುವ ಮಹದಾಸೆ ಇಟ್ಟುಕೊಂಡ ನನಗೆ ಇದರಿಂದ ಅಸಮಧಾನವಾಗಿದೆ.

ಕನ್ನಡಪ್ರಭ ವಾರ್ತೆ ಸಿಂದಗಿ

ಸಂದೀಪ ಚೌರ ಅವರು ಪುರಸಭೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ದಲಿತ ಸಮುದಾಯಕ್ಕೆ ನ್ಯಾಯ ಒದಗಿಸಿದ ಹಾಗೇ ಆಗಿದೆ. ಆದರೆ ಜೆಡಿಎಸ್ ಬಿ-ಪಾರಂ ಮೇಲೆ ಚುನಾಯಿತರಾದವರನ್ನು ಪುರಸಭೆ ಅಧ್ಯಕ್ಷರನ್ನಾಗಿ ಮಾಡಿ ಸಹೋದರನ ಮೇಲಿರುವ ವ್ಯಾಮೋಹವನ್ನು ಶಾಸಕರು ಸಾಬೀತುಪಡಿಸಿದ್ದಾರೆ ಎಂದು ಪುರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಶಾಂತವೀರ ಬಿರಾದಾರ ಕಿಡಿಕಾರಿದರು.

ಪಟ್ಟಣದ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಂದಗಿ ನಗರವನ್ನು ಸೌಂದರ್ಯೀಕರಣ ಮಾಡಬೇಕು ಎನ್ನುವ ಮಹದಾಸೆ ಇಟ್ಟುಕೊಂಡ ನನಗೆ ಇದರಿಂದ ಅಸಮಧಾನವಾಗಿದೆ. ನನ್ನ ಅವಧಿಯಲ್ಲಿ ಪುರಸಭೆಗೆ ₹2 ಕೋಟಿ ವಿಶೇಷ ಅನುದಾನ ಬಂದಿತ್ತು. ಈ ಅನುದಾನವನ್ನು ಪುರಸಭೆ ಮುಂಭಾಗದಲ್ಲಿರುವ ಬ್ರಿಡ್ಜ್ ಮತ್ತು ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಫೇವರ್ಸ್‌ ಹಾಕುವುದಾಗಿ ಶಾಸಕರ ಜೊತೆಗೆ ಚರ್ಚೆ ಮಾಡಿದ್ದೆ. ಆದರೆ ಈ ಅನುದಾನದಲ್ಲಿ ₹1ಕೋಟಿ ನೂತನ ತಹಸೀಲ್ದಾರ್ ಕಚೇರಿ ಉಪಯೋಗಕ್ಕೆ ಶಾಸಕರು ಬಳಸಿಕೊಂಡರು. ಇದರಿಂದ ಅಭಿವೃದ್ಧಿ ಕುಂಠಿತವಾಯಿತು. ಒಟ್ಟಾರೆ ಶಾಸಕರಿಂದ ನಗರವನ್ನು ಅಭಿವೃದ್ಧಿ ಮಾಡುವಲ್ಲಿ ಯಾವುದೇ ರೀತಿಯ ಸಹಕಾರ ದೊರಕಿಲ್ಲ ಎಂದು ಆರೋಪಿಸಿದ್ದಾರೆ.

ಪುರಸಭೆಯ ಆಡಳಿತ ಯಂತ್ರದ ಹಲವು ಉಪಕರಣಗಳು ಹಾಗೂ ಲಾಗಿನ್‌ಗಳು ಖಾಸಗಿ ವ್ಯಕ್ತಿಯೊಬ್ಬರ ಮನೆಯಲ್ಲಿರುವುದನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ, ಯೋಜನಾಧಿಕಾರಿ ಹಾಗೂ ಪೊಲೀಸ್ ಇಲಾಖೆಯವರ ಗಮನಕ್ಕೆ ತಂದಾಗ್ಯೂ ಯಾವುದೇ ಕ್ರಮಕೈಗೊಳ್ಳದಿರುವುದರ ಹಿಂದೆ ಶಾಸಕರ ಹಾಗೂ ಅವರ ಸಹೋದರರ ನೇರ ಹಸ್ತಕ್ಷೇಪವಿದೆ. ಅಧಿಕಾರಿಗಳನ್ನು ಕೈಗೊಂಬೆಯಂತೆ ಇವರು ಆಡಿಸುವಲ್ಲಿ ನಿಸ್ಸೀಮರು. ತಾಲೂಕಿನಲ್ಲಿ ಮೂಲ ಕಾಂಗ್ರೆಸ್ಸಿಗರನ್ನು ಶಾಸಕ ಅಶೋಕ ಮನಗೂಳಿ ಅವರು ಕಡೆಗಣಿಸಿ ವಲಸಿಗರಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಸರಿಯಲ್ಲ ಎಂದರು.

ಕೇವಲ ಒಂದು ಉತಾರಿ ತೆಗೆದುಕೊಂಡಿದ್ದೇನೆ ಎನ್ನುವ ನೆಪ ಮಾಡಿ ಅದರ ತನಿಖೆಗೆ ನಾಲ್ಕು ಜನ ಅಧಿಕಾರಿಗಳ ಸಮಿತಿ ರಚಿಸುತ್ತಾರೆ. ಆದರೆ ಪುರಸಭೆಯಲ್ಲಿ ಆಗುತ್ತಿರುವ ಅವ್ಯವಹಾರದ ಬಗ್ಗೆ ಜಾಣಮೌನ ವಹಿಸುತ್ತಿರುವುದರ ಹಿಂದಿನ ಮರ್ಮ ಸಾರ್ವಜನಿಕರಿಗೆ ತಿಳಿದಿದೆ. ಶಾಸಕರ 2 ಅವಧಿಯ ಚುನಾವಣೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಗೆಲುವಿಗಾಗಿ ಶ್ರಮಿಸಿದ್ದೇನೆ ಎಂದ ಅವರು ಮುಂದೆ ಬರುವ ಚುನಾವಣೆಗಳಲ್ಲಿ ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗಿಕೊಂಡು ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ರಾಜಕೀಯ ಭವಿಷ್ಯ ರೂಪಿಸಿಕೊಳ್ಳಲಿದ್ದೇನೆ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡ ಯೋಗಪ್ಪಗೌಡ ಪಾಟೀಲ ಮಾತನಾಡಿ, ಎರಡು ಚುನಾವಣೆ ಅಂದರೆ ಉಪಚುನಾವಣೆ ಮತ್ತು ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಅಶೋಕ ಮನಗೂಳಿ ಅವರಿಗೆ ಟಿಕೆಟ್ ದೊರಕಿಸಿ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಇದೇ ಶಾಂತವೀರ ಬಿರಾದಾರ. ಟಿಕೆಟ್ ಪಡೆದು ಅಧಿಕಾರ ಹಿಡಿದ ಮೇಲೆ ಕನಿಷ್ಠ ಪಕ್ಷ ಸೌಜನ್ಯಕ್ಕಾರದೂ ಶಾಂತವೀರ ಬಿರಾದಾರ ಅವರ ಬೆಂಬಲಕ್ಕೆ ಶಾಸಕರು ನಿಲ್ಲದೇ ಇರುವುದು ವಿಪರ್ಯಾಸ ಎಂದು ಹೇಳಿದ್ದಾರೆ.