ಲಕ್ಷ್ಮೇಶ್ವರ: ಪ್ರತಿಯೊಬ್ಬ ಮನುಷ್ಯನಿಗೆ ಬದುಕಿನ ಬೆಲೆ ಗೊತ್ತಿರಬೇಕು. ಅಂದಾಗ ಮಾತ್ರ ಉತ್ತಮ ಬದುಕು ನಡೆಸಲು ಸಾಧ್ಯ. ಸಮಾಜದಲ್ಲಿ ಬದುಕಿನ ಬೆಲೆ ತಿಳಿಯದ ವ್ಯಕ್ತಿ ಎಂದಿಗೂ ಒಳ್ಳೆಯ ಬದುಕು ಸಾಗಿಸಲು ಸಾಧ್ಯವಿಲ್ಲ. ಲೋಕಕ್ಕೆ ಉಪಯೋಗಿಗಳಾಗಿ ಯಾರು ಇರುತ್ತಾರೆ, ಅವರೇ ನಿಜವಾದ ಯೋಗಿಗಳು ಎಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಶ್ರೀಗಳು ನುಡಿದರು.
ಮನುಷ್ಯ ಜೀವಂತವಿದ್ದಾಗ ಸ್ವಾರ್ಥಕ್ಕಾಗಿ ಬದುಕಬಾರದು, ಸಮಾಜಕ್ಕಾಗಿ ಬದುಕಬೇಕು. ಅನ್ನದ ಬೆಲೆ ಕೈ ತುಂಬಾ ಬಂಗಾರವಿದ್ದವನಿಗೆ ಗೊತ್ತಾಗುವುದಿಲ್ಲ. ಹಸಿದವನಿಗೆ ಚಿನ್ನಕ್ಕಿಂತ ಅನ್ನದ ಬೆಲೆ ಬಹಳ ದೊಡ್ಡದು ಅಂತಾ ತಿಳಿದಿರುತ್ತಾನೆ. ಅದರಂತೆ ಕತ್ತಲೆಯೊಳಗಿದ್ದರೆ ಮಾತ್ರ ಬೆಳಕಿನ ಬೆಲೆ ಗೊತ್ತಾಗುತ್ತದೆ. ಮನುಷ್ಯ ಜೀವನವನ್ನು ಅರ್ಥೈಸಿಕೊಳ್ಳಬೇಕು ಎಂದ ಶ್ರೀಗಳು, ಭಕ್ತಿಯ ಶಕ್ತಿ ಕೂಡಿದ್ದಕ್ಕಾಗಿ ಇಂತಹ ಸಮುದಾಯ ಭವನ ನಿರ್ಮಿಸಲು ಸಾಧ್ಯವಾಗಿದೆ ಎಂದು ಶ್ಲಾಘಿಸಿದರು.ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಎಸ್ಎಸ್ಕೆ ಸಮಾಜ ಧೈರ್ಯ, ಸ್ಥೈರ್ಯಕ್ಕೆ ಹೆಸರು ಮಾಡಿದೆ. ಧಾರ್ಮಿಕವಾಗಿ, ಸಾಮಾಜಿಕವಾಗಿ ಸಂಘಟನೆಯಲ್ಲಿ ಹೆಚ್ಚು ಕ್ರಿಯಾಶೀಲವಾಗಿರುವ ಈ ಸಮಾಜ ಒಗ್ಗಟ್ಟಿನಿಂದ ಎಲ್ಲವನ್ನು ಸಾಧಿಸಬಹುದು ಎನ್ನುವುದಕ್ಕೆ ಈ ಬೃಹತ್ ಸಮುದಾಯ ಭವನ ಸಾಕ್ಷಿಯಾಗಿದೆ ಎಂದರು.
ಮಾಜಿ ಶಾಸಕರಾದ ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ, ಅಶೋಕ ಕಾಟವೆ, ರಾಜ್ಯ ಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ಎಸ್ಎಸ್ಕೆ ಸಮಾಜದವರು ತಮ್ಮ ಸಾಮರ್ಥ್ಯದ ಬಲದೊಂದಿಗೆ ಎಲ್ಲ ಸಮಾಜಗಳೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳುವ ರೀತಿ ಮಾದರಿಯಾಗಿದ್ದು, ಸಮಾಜಕ್ಕೆ ಎಸ್ಎಸ್ಕೆ ಸಮಾಜದ ಕೊಡುಗೆ ಅಪಾರವಾಗಿದೆ ಎಂದರು.ಎಸ್ಎಸ್ಕೆ ಸಮಾಜದ ರಾಜ್ಯಾಧ್ಯಕ್ಷ ಡಾ. ಶಶಿಕುಮಾರ ಮೆಹರವಾಡೆ, ವಿಶ್ವನಾಥ ಮಹಾಂತಶೆಟ್ಟರ ಮಾತನಾಡಿದರು. ಎಸ್ಎಸ್ಕೆ ಸಮಾಜ ಸೇವಾ ಸಮಿತಿ ಅಧ್ಯಕ್ಷ ಪರಶುರಾಮ ಬದಿ ವಹಿಸಿದ್ದರು. ಪುಲಿಕೇಶಿ ಉಪನಾಳ, ಶ್ರೀನಿವಾಸ ಖೋಡೆ, ರಾಮಚಂದ್ರಸಾ ಕಬಾರಿ, ಸತ್ಯನಾರಾಯಣಸಾ ಡಮಾಮ್, ಟಿ.ಎಂ. ಮೆಹರವಾಡೆ, ಸತೀಶ ಮೆಹರವಾಡೆ ಸೇರಿದಂತೆ ಸಮಾಜದ ಅನೇಕ ಮುಖಂಡರು ಉಪಸ್ಥಿತರಿದ್ದರು. ಎಸ್ಎಸ್ಕೆ ಸಮಾಜದ ಲಕ್ಷಣಸಾ ರಾಜೋಳಿ, ತುಕಾರಾಮಸಾ ಬದಿ, ವಿಠ್ಠಲಸಾ ಸಿದ್ಲಿಂಗ್, ಯಲ್ಲಪ್ಪ ಬದಿ, ಪರಶುರಾಮಸಾ ಬದಿ, ತಿಪ್ಪಣಸಾ ಬಾಕಳೆ, ಪಾಂಡುಸಾ ಬದಿ, ಗಣಪತಸಾ ಪೂಜಾರ, ಮಹಿಳಾ ಮಂಡಳದ ಗೌರವಾಧ್ಯಕ್ಷೆ ಇಂದುಬಾಯಿ ಬದಿ, ಅಧ್ಯಕ್ಷೆ ಸರೋಜಾಬಾಯಿ ಬದಿ, ತರುಣ ಸಂಘದ ಅಧ್ಯಕ್ಷ ಭರತ ಬಾಕಳೆ ಹಾಗೂ ಎಲ್ಲ ಕಮಿಟಿಗಳ ಪದಾಧಿಕಾರಿಗಳು ಇದ್ದರು. ಈಶ್ವರ ಮೆಡ್ಲೇರಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ದೇವಸ್ಥಾನ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಸಹಕರಿಸಿದ, ದಾನಿಗಳನ್ನು ಸನ್ಮಾನಿಸಲಾಯಿತು.