ಶಿವಕುಮಾರ ಕುಷ್ಟಗಿ
ಜಿಲ್ಲೆಯ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕ ಬೀದಿದೀಪಗಳನ್ನು ತೆಗೆದು ಅವುಗಳ ಬದಲಿಗೆ ಅತ್ಯಾಧುನಿಕ ಎಲ್ಇಡಿ ಬೀದಿದೀಪಗಳನ್ನು ಅಳವಡಿಸಲು ಗದಗ- ಬೆಟಗೇರಿ ನಗರಸಭೆ, ಗಜೇಂದ್ರಗಡ, ಲಕ್ಷ್ಮೇಶ್ವರ, ಮುಂಡರಗಿ, ನರಗುಂದ, ರೋಣ ಪುರಸಭೆಗಳು ಹಾಗೂ ಮುಳಗುಂದ, ನರೇಗಲ್ಲ ಮತ್ತು ಶಿರಹಟ್ಟಿ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಬೇಕಿತ್ತು. ಬೀದಿದೀಪಗಳ ನಿರ್ವಹಣೆಯನ್ನು ಸುಗಮಗೊಳಿಸಲು ಕೇಂದ್ರೀಕೃತ ನಿರ್ವಹಣೆ ಹಾಗೂ ನಿಗಾ ವ್ಯವಸ್ಥೆ ತಂತ್ರಜ್ಞಾನವನ್ನು ಅಳವಡಿಸಬೇಕಾಗಿದೆ.
ಯಾರೂ ಗಮನ ಹರಿಸಿಲ್ಲ: 2019ರಲ್ಲಿಯೇ ಈ ಯೋಜನೆಗೆ ತರಲಾಗಿದ್ದರೂ 2 ವರ್ಷಗಳ ಕಾಲ ಕೋವಿಡನಲ್ಲಿ ಅದರ ನಂತರದ ಒಂದು ವರ್ಷ ಆಡಳಿತ ಸುಧಾರಣೆಯಲ್ಲಿ ಕಳೆದು ಹೋಗಿದೆ. ಆದಾದ ನಂತರ 2023ರಿಂದ ಗದಗ- ಬೆಟಗೇರಿ ನಗರಸಭೆಯಲ್ಲಿ ಆಡಳಿತ ಮಂಡಳಿ ಅಧಿಕಾರದಲ್ಲಿದ್ದರೂ ಇಲ್ಲದಂತಿದೆ.ಹಲವಾರು ರೀತಿಯ ವ್ಯಾಜ್ಯಗಳು, ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಗೊಂದಲ, ಕಾನೂನು ಹೋರಾಟಗಳಿಗೆ ಸಾಕ್ಷಿಯಾಗಿದ್ದು, ಸದಸ್ಯರು ಸರಿಯಾಗಿ ಅಧಿಕಾರ ನಡೆಸಿಲ್ಲ, ಸಾಮಾನ್ಯ ಸಭೆಗಳು ನಡೆದಿಲ್ಲ, ಅವಳಿ ನಗರದ ಬೀದಿದೀಪಗಳ ನಿರ್ವಹಣೆಯ ಬಗ್ಗೆ ಯಾರೂ ಕಿಂಚಿತ್ತು ಗಮನ ಹರಿಸಿಲ್ಲ. ಈಗಲೂ ಅದೇ ಪರಿಸ್ಥಿತಿ ಮುಂದುವರಿದಿದೆ.
ಗಮನಹರಿಸದ ಅಧಿಕಾರಿಗಳು
ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳನ್ನು ಕೇಳಿದರೆ ಈ ಬಗ್ಗೆ ಈಗಾಗಲೇ 2 ಬಾರಿ ಟೆಂಡರ್ ಕರೆಯಲಾಗಿದೆ. ಪ್ರತಿ ಬಾರಿಯೂ ಸಿಂಗಲ್ ಟೆಂಡರ್ ಆದ ಹಿನ್ನೆಲೆ ವಿಳಂಬವಾಗಿದೆ ಎನ್ನುತ್ತಾರೆ.
ಹೊಸ ಕಂಬ: ಸಿಸಿಎಂಎಸ್ ಮೂಲಕ ಎಲ್ಲ ಕಂಬಗಳಿಗೆ ಪಾರಂಪರಿಕ ಬಲ್ಬ್ ಗಳನ್ನು ಬದಲಿಸಿ ಎಲ್ಇಡಿ ಅಳವಡಿಸುವುದಕ್ಕಾಗಿ ಸಮೀಕ್ಷೆ ಆದೇಶ ಮಾಡಿದ್ದಾರೆ. ಈಗಾಗಲೇ ನಮ್ಮ ಬಳಿ ಇರುವ ವಿದ್ಯುತ್ ಕಂಬಗಳ ಮಾಹಿತಿ(14786) ನೀಡಲಾಗಿದೆ. ಹೊಸ ಕಂಬಗಳನ್ನು ಅಳವಡಿಸಲಾಗಿದ್ದರೆ, ಇನ್ನು ಯಾವ ಯಾವ ಹೊಸ ಏರಿಯಾಗಳಲ್ಲಿ ಬೀದಿದೀಪಗಳ ಅಳವಡಿಕೆ ಅವಶ್ಯಕತೆ ಇದೆ. ಈ ಕುರಿತು ಸಮೀಕ್ಷಾ ತಂಡಕ್ಕೆ ನಮ್ಮ ಸಿಬ್ಬಂದಿ ಮಾಹಿತಿ ನೀಡುತ್ತಿದ್ದಾರೆ ಎಂದು ನಗರಸಭೆ ಅಭಿಯಂತರ ಲಕ್ಷ್ಮಣ ಎ.ಜೆ. ತಿಳಿಸಿದರು.ಸಮೀಕ್ಷೆ ಪೂರ್ಣಗೊಳಿಸಿ: ಬೀದಿದೀಪಗಳ ವಿಷಯವಾಗಿ ಹಲವಾರು ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಾರ್ವಜನಿಕರು ಹಲವಾರು ಬಾರಿ ದೂರು ನೀಡಿದರೂ ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುವ ಸಿದ್ಧ ಉತ್ತರ ನೀಡುತ್ತಿದ್ದಾರೆ. ಕೂಡಲೇ ಸಮೀಕ್ಷೆ ಪೂರ್ಣಗೊಳಿಸಿ ಅವಳಿ ನಗರದ ಎಲ್ಲ ಕಡೆಗಳಲ್ಲಿಯೂ ಎಲ್ಇಡಿ ಬಲ್ಬ್ ಗಳನ್ನು ಅಳವಡಿಸಬೇಕು. ಸಾರ್ವಜನಿಕರ ತೆರಿಗೆ ಹಣವನ್ನು ಉಳಿಸಬೇಕು ಎಂದರು ಜೆಡಿಎಸ್ ರಾಜ್ಯ ವಕ್ತಾರ ವಿ.ಆರ್. ಗೋವಿಂದಗೌಡ್ರ ತಿಳಿಸಿದರು.