ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸಂವಿಧಾನವನ್ನು ಆಳವಾಗಿ ಅಧ್ಯಯನ ಮಾಡಿದಾಗ ಮಾತ್ರ ಕಾನೂನಿನ ಅರಿವಾಗುತ್ತದೆ ಎಂದು ಜಂಬೂದ್ವೀಪ ಕರ್ನಾಟಕ ರಾಜ್ಯಾಧ್ಯಕ್ಷ ರಾಮಣ್ಣ ತಿಳಿಸಿದರು.ಕರ್ನಾಟಕ ವಿದ್ಯಾರ್ಥಿ ಒಕ್ಕೂಟ, ಜಂಬೂದ್ವೀಪ ಕರ್ನಾಟಕ ಜಿಲ್ಲಾ ಘಟಕ ಮಹಾತ್ಮ ಜ್ಯೋತಿ ಭಾಪುಲೆ ಅಧ್ಯಯನ ಕೇಂದ್ರದಲ್ಲಿ ನವಯಾನ ಬುದ್ಧಧಮ್ಮ, ಎಸ್ಸಿ,ಎಸ್ಟಿ, ನೌಕರರ ಸಂಘ, ಅಂಬೇಡ್ಕರ್ ವಿಚಾರ ವೇದಿಕೆ, ಜಂಬೂದ್ವಿಪ ಕರ್ನಾಟಕ ಜಿಲ್ಲಾ ಘಟಕ, ಬೌದ್ಧ ಧಮ್ಮ ಸಾಹಿತ್ಯ ಸಂಘ, ಸಾಮಾಜಿಕ ಸಂಘರ್ಷ ಸಮಿತಿ ಸಹಯೋಗದೊಂದಿಗೆ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಇಂಗ್ಲಿಷ್ ವ್ಯಾಕರಣ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾನೂನು ಅರ್ಥಮಾಡಿಕೊಳ್ಳಬೇಕಾದರೆ ಇಂಗ್ಲಿಷ್ ಜ್ಞಾನ ಬೇಕು. 60 ದಿನಗಳ ತರಬೇತಿ ಕೊಡುವ ಚಿಂತನೆಯಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರೆ ಹೆಚ್ಚಾಗಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಶಿಕ್ಷಣ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಹೆಚ್ಚಿನ ಪ್ರಾಬಲ್ಯ ಹೊಂದಬೇಕಾದರೆ ಆಂಗ್ಲ ಭಾಷೆಯ ಜ್ಞಾನ ಅತಿ ಮುಖ್ಯ ಎಂದು ಹೇಳಿದರು.ಒಬ್ಬ ಶಿಕ್ಷಣವಂತನಾದರೆ ಒಂದು ಕುಟುಂಬವೇ ಅಭಿವೃದ್ಧಿಯಾದಂತೆ. ಆಗ ನೊಂದವರಿಗೆ ನ್ಯಾಯ ಒದಗಿಸಲು ಸಾಧ್ಯ ಎಂದರು.
ನಿವೃತ್ತ ಉಪ ವಿಭಾಗಾಧಿಕಾರಿ ಮಲ್ಲಿಕಾರ್ಜುನ್ ಮಾತನಾಡಿ, ವಿದ್ಯಾರ್ಥಿಗಳನ್ನು ಸಮರ್ಥರನ್ನಾಗಿ ಮಾಡಬೇಕೆಂಬುದು ಕರ್ನಾಟಕ ವಿದ್ಯಾರ್ಥಿ ಒಕ್ಕೂಟದ ಉದ್ದೇಶ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಲ್ಲಿ ಬದ್ಧತೆ, ಕಠಿಣ ಪರಿಶ್ರಮವಿತ್ತು. ಓದಿನ ದಾಹ ಅವರದಾಗಿತ್ತು. ಇಂದಿನ ವಿದ್ಯಾರ್ಥಿಗಳಲ್ಲಿ ಅಂತಹ ಓದಿನ ದಾಹವಿರಬೇಕೆಂದು ತಿಳಿಸಿದರು.ನಿವೃತ್ತ ಎಂಜಿನಿಯರ್ ಪಾತಪ್ಪ ಮಾತನಾಡಿ, ಪ್ರತಿಯೊಬ್ಬರೂ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು.
ಬಹು ಸಂಖ್ಯಾತರಿಗೆ ಕಡಿಮೆ ಮೀಸಲಾತಿ. ಕಡಿಮೆ ಜನಸಂಖ್ಯೆಯಿರುವವರು ಹೆಚ್ಚು ಮೀಸಲಾತಿ ಪಡೆಯುತ್ತಿದ್ದಾರೆ. ದೇಶದಸಂಪನ್ಮೂಲ ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕು. ಅಂಬೇಡ್ಕರ್ ಅವರ ವಿಚಾರಗಳು ಭಾಷಣಕ್ಕಷ್ಟೆ ಸೀಮಿತವಾಗಿದೆ.
ಪಾಲನೆ ಮಾಡುವವರು ತುಂಬಾ ಕಮ್ಮಿ. ನಿರುದ್ಯೋಗ ಜಾಸ್ತಿಯಾಗುತ್ತಿದೆ. ಶಿಕ್ಷಣದ ಮೂಲಕ ಉನ್ನತ ಹುದ್ದೆ ಏರಬಹುದು ಎಂದುಕಾನೂನು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕರ್ನಾಟಕ ವಿದ್ಯಾರ್ಥಿ ಒಕ್ಕೂಟದ ರಾಜ್ಯಾಧ್ಯಕ್ಷ ನ್ಯಾಯವಾದಿ ರಮೇಶ್ ವೇದಿಕೆಯಲ್ಲಿದ್ದರು. ಡಾ.ಪ್ರದೀಪ್ ಎಸ್, ನಟರಾಜ್ ಅವರುಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.