ಕೆ.ಎಂ. ಮಂಜುನಾಥ್
ಬಳ್ಳಾರಿ: ತೀವ್ರ ಕುತೂಹಲಕ್ಕೆಡೆ ಮಾಡಿರುವ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಅನೇಕರು ಕಸರತ್ತು ನಡೆಸುತ್ತಿರುವ ನಡುವೆ ಅಚ್ಚರಿ ಬೆಳವಣಿಗೆಯಲ್ಲಿ ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರ ಹೆಸರು ಅಂತಿಮವಾಗುವ ಸಾಧ್ಯತೆಯಿದೆ.ಲೋಕಸಭಾ ಚುನಾವಣೆ ಸನಿಹಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡ ಹಾಗೂ ಸರಳ ಸಜ್ಜನಿಕೆಯಿಂದ ಎಲ್ಲ ಕಾರ್ಯಕರ್ತರಿಗೂ ಹೆಚ್ಚು ಸ್ನೇಹಮಯಿಯಾಗಿರುವ ವೈ.ಎಂ. ಸತೀಶ್ ಅವರನ್ನೇ ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಅನೇಕ ಪ್ರಮುಖ ಕಾರ್ಯಕರ್ತರು ಹಾಗೂ ಪಕ್ಷದ ಎರಡನೇ ಹಂತಹದ ಜಿಲ್ಲಾ ಪ್ರಮುಖರು ರಾಜ್ಯ ನಾಯಕರಿಗೆ ಮನವಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ವೈ.ಎಂ. ಸತೀಶ್ ಅವರಿಗೆ ಕಮಲ ಪಕ್ಷಕ್ಕೆ ಜಿಲ್ಲಾ ಸಾರಥ್ಯ ವಹಿಸುವ ಸಾಧ್ಯತೆಯಿದೆ.
ತೀವ್ರ ಪೈಪೋಟಿಯಿತ್ತು: ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ, ಪಕ್ಷದ ಜಿಲ್ಲಾ ಕಾರ್ಯದರ್ಶಿ ಅನಿಲ್ನಾಯ್ಡು ಮೋಕಾ, ಬಿಜೆಪಿ ರೈತ ಮೋರ್ಚಾದ ಮಾಜಿ ಜಿಲ್ಲಾಧ್ಯಕ್ಷ ಗಣಪಾಲ್ ಐನಾಥ ರೆಡ್ಡಿ, ಪಾಲಿಕೆ ಸದಸ್ಯ ಎಸ್. ಮಲ್ಲನಗೌಡ, ಸಿರುಗುಪ್ಪ ತಾಲೂಕಿನ ಆರ್.ಸಿ. ಪಂಪನಗೌಡ, ಕೊಂಚಗೇರಿ ನಾಗರಾಜಗೌಡ, ಸಂಡೂರಿನ ಜಿ.ಟಿ. ಪಂಪಾಪತಿ ಅವರು ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಇವರಲ್ಲದೆ ಕೆಲವರು ನೇರವಾಗಿ ರಾಜ್ಯ ಮುಖಂಡರನ್ನು ಭೇಟಿ ಮಾಡಿ ತಮಗೆ ಪಕ್ಷದ ಜಿಲ್ಲಾಧ್ಯಕ್ಷ ಪಟ್ಟ ಕಟ್ಟುವಂತೆ ಕೋರಿಕೊಂಡಿದ್ದರು.
ಜಿಲ್ಲಾಧ್ಯಕ್ಷ ನೇಮಕಕ್ಕೆ ಸಂಬಂಧಿಸಿದಂತೆ ಕಳೆದ ಡಿ. 30ರಂದು ನಗರಕ್ಕೆ ಪಕ್ಷದ ವೀಕ್ಷಕರಾಗಿ ಆಗಮಿಸಿದ್ದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮೈಸೂರಿನ ಎಂ. ರಾಜೇಂದ್ರ ಅವರು ಇಲ್ಲಿನ ವಾಜಪೇಯಿ ಬಡಾವಣೆಯಲ್ಲಿರುವ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸಭೆ ನಡೆಸಿ, ಪಕ್ಷದ ಪ್ರಮುಖ ಮುಖಂಡರು, ಕೋರ್ ಕಮಿಟಿ ಸದಸ್ಯರು ಹಾಗೂ ಮಂಡಲ ಅಧ್ಯಕ್ಷರ ಅಭಿಪ್ರಾಯ ಸಂಗ್ರಹಿಸಿದ್ದರು. ನಾನು ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ. ಆದರೆ, ಸ್ಥಳೀಯ ಪಕ್ಷದ ಕಾರ್ಯಕರ್ತರ ಒತ್ತಾಸೆಯಿದೆ. ಒಂದು ವೇಳೆ ಪಕ್ಷ ಜವಾಬ್ದಾರಿ ಕೊಟ್ಟರೆ ಖಂಡಿತವಾಗಿ ನಿಭಾಯಿಸುವೆ ಎಂದು ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಹೇಳುತ್ತಾರೆ.ಇನ್ನೆರಡು ದಿನಗಳಲ್ಲಿ ಪಕ್ಷದ ಜಿಲ್ಲಾಧ್ಯಕ್ಷರ ನೇಮಕವಾಗಲಿದ್ದು, ಯಾರನ್ನು ನೇಮಕ ಮಾಡಿದರೂ ಅವರ ಜತೆಗೂಡಿ ಪಕ್ಷದ ಸಂಘಟನೆ ಮಾಡುತ್ತೇವೆ. ಪಕ್ಷದ ರಾಜ್ಯ ನಾಯಕರ ತೀರ್ಮಾನಕ್ಕೆ ನಾವು ಬದ್ಧ ಎಂದು ಬಳ್ಳಾರಿ ಬಿಜೆಪಿ ಜಿಲ್ಲಾಧ್ಯಕ್ಷ ಮುರಹರಗೌಡ ಗೋನಾಳ್ ಹೇಳುತ್ತಾರೆ.