ಗಗನಕ್ಕೇರಿದ ಲಿಂಬೆಹಣ್ಣಿನ ದರ, ಬೆಳೆಗಾರರು ಖುಷ್‌

KannadaprabhaNewsNetwork | Published : Mar 23, 2025 1:38 AM

ಕಳೆದ ಒಂದು ವಾರದ ಹಿಂದಷ್ಟೆ ಒಂದು ಲಿಂಬೆಹಣ್ಣಿಗೆ ₹ 5ರಿಂದ ₹ 6 ಇತ್ತು. ಈ ವಾರ ದಿಢೀರ್‌ನೆ ಬೆಲೆ ಏರಿಕೆ ಕಂಡಿದ್ದು ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ಸಣ್ಣ ಲಿಂಬೆಹಣ್ಣಿನ ದರವು ₹ 7ರಿಂದ ₹ 8 ಇದೆ. ದೊಡ್ಡ ಗಾತ್ರದ ಲಿಂಬೆಹಣ್ಣು ₹ 10 ತಲುಪಿದೆ. ಜತೆಗೆ ಬೇಸಿಗೆ ಇರುವುದರಿಂದ ಬೇಡಿಕೆಯೂ ಬಂದಿದೆ.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ:

ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಲಿಂಬೆ ಹಣ್ಣಿನ ದರ ಗಗನಮುಖಿಯಾಗಿ ಗ್ರಾಹಕರ ಜೇಬು ಸುಡುತ್ತಿದೆ. ಈಗ ಮಾರುಕಟ್ಟೆಯಲ್ಲಿ ಒಂದು ಹಣ್ಣು ₹ 10ಗೆ ಮಾರಾಟವಾಗುತ್ತಿದ್ದು, ಗ್ರಾಹಕರಿಗೆ ಹುಳಿಯಾದರೆ ಬೆಳೆಗಾರರಿಗೆ ಸಂತಸ ತಂದಿದೆ.

ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ನಿಂಬೆ ಹಣ್ಣುಗಳನ್ನು ಕಡಿಮೆ ಪ್ರದೇಶದಲ್ಲಿ ಬೆಳೆಯುತ್ತಿರುವುದು, ನೀರಿನ ಕೊರತೆ ಹಾಗೂ ವಾತಾವರಣದ ಏರುಪೇರುವಿನಿಂದಾಗಿ ಇಳುವರಿ ಕಡಿಮೆಯಾಗಿದೆ. ಹೀಗಾಗಿ ದರವು ಏರಿಕೆಯಾಗಿದೆ.

ಕಳೆದ ಒಂದು ವಾರದ ಹಿಂದಷ್ಟೆ ಒಂದು ಲಿಂಬೆಹಣ್ಣಿಗೆ ₹ 5ರಿಂದ ₹ 6 ಇತ್ತು. ಈ ವಾರ ದಿಢೀರ್‌ನೆ ಬೆಲೆ ಏರಿಕೆ ಕಂಡಿದ್ದು ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ಸಣ್ಣ ಲಿಂಬೆಹಣ್ಣಿನ ದರವು ₹ 7ರಿಂದ ₹ 8 ಇದೆ. ದೊಡ್ಡ ಗಾತ್ರದ ಲಿಂಬೆಹಣ್ಣು ₹ 10 ತಲುಪಿದೆ. ಜತೆಗೆ ಬೇಸಿಗೆ ಇರುವುದರಿಂದ ಬೇಡಿಕೆಯೂ ಬಂದಿದೆ.

ಹೋಲ್‌ಸೇಲ್ ಮಾರುಕಟ್ಟೆಯಲ್ಲೇ ದರ ಏರಿಕೆಯಾಗಿದ್ದರಿಂದ ಚಿಲ್ಲರೆ ಮಾರಾಟದಲ್ಲೂ ದರ ಹೆಚ್ಚಳವಾಗಿದೆ. ಮೇ ತಿಂಗಳ ಬರುವಷ್ಟರಲ್ಲೆ ನಿಂಬೆ ಹಣ್ಣಿನ ದರ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಗಳು ಇದೆ ಎನ್ನುತ್ತಾರೆ ಲಿಂಬೆ ಹಣ್ಣಿನ ವ್ಯಾಪಾರಸ್ಥ ಮರಿಯಪ್ಪ ಕೊರವರ.

ಶರಬತ್, ಸೋಡಾ ದರವೂ ಹೆಚ್ಚಳ:

ಲಿಂಬೆ ಹಣ್ಣಿನ ದರ ಏರಿಕೆಯಾದ ಹಿನ್ನೆಲೆ ಶರಬತ್, ನಿಂಬು ಸೋಡಾ ಬೆಲೆಯಲ್ಲೂ ವ್ಯತ್ಯಾಸವಾಗಿದೆ. ಹಲವು ತಂಪು ಪಾನೀಯ ಮಳಿಗೆಗಳಲ್ಲಿ ಲಿಂಬೆ ಪಾನೀಯಗಳ ಬೆಲೆ ₹ 15ರ ಬದಲಾಗಿ ₹ 20ರಿಂದ 25ಕ್ಕೆ ಏರಿಕೆ ಮಾಡಲಾಗಿದೆ. ದೊಡ್ಡ ಗಾತ್ರದ, ಹೆಚ್ಚು ರಸವಿರುವ ಲಿಂಬೆಹಣ್ಣು ಮಾರುಕಟ್ಟೆಯಲ್ಲಿ ಸಿಗುವುದು ಕಡಿಮೆಯಾಗಿದೆ. ಚಿಕ್ಕ ಚಿಕ್ಕ ನಿಂಬೆ ಹಣ್ಣಿಗೂ ದರ ಹೆಚ್ಚಳವಾಗಿದೆ. ತಂಪು ಪಾನೀಯಕ್ಕೆ ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಕುಷ್ಟಗಿಯ ಕೂಲಡ್ರಿಂಕ್ಸ್ ವ್ಯಾಪಾರಿ ಪ್ರಭಾಕರ ಸಿಂಗ್ರಿ.

ರೈತ ಸಂತಸ:

ಲಿಂಬೆಹಣ್ಣು ಬೆಳೆದ ರೈತರ ಹೊಲಕ್ಕೆ ವ್ಯಾಪಾರಸ್ಥರು ಹೋಗಿ ಲೋಡ್ ಗಟ್ಟಲೇ ಖರೀದಿಸುತ್ತಿದ್ದಾರೆ. ಕೆಲ ರೈತರು ಮಾರುಕಟ್ಟೆಗೆ ತಂದು ವ್ಯಾಪಾರ ಮಾಡಿದರೆ, ಕೆಲವರು ಮಾರುಕಟ್ಟೆಯಲ್ಲಿ ಹರಾಜು ಇಡುತ್ತಿದ್ದಾರೆ. ಒಟ್ಟಿನಲ್ಲಿ ರೈತರು ಸಂತಸದಲ್ಲಿದ್ದಾರೆ.ಮೂರ್ನಾಲ್ಕು ಲಿಂಬೆಹಣ್ಣಿನ ತೋಟ ಗುತ್ತಿಗೆ ಪಡೆದುಕೊಂಡಿದ್ದು ಇಳುವರಿ ಕುಂಠಿತವಾಗಿದೆ. ಒಂದು ಚೀಲಕ್ಕೆ (1000 ಹಣ್ಣುಗಳು) ₹ 4500 ದರವಿದೆ. ಮಾರುಕಟ್ಟೆಯಲ್ಲಿ ₹ 8ರಿಂದ ₹10 ರುಪಾಯಿಗೆ ಮಾರಾಟ ಮಾಡುವುದು ಅನಿವಾರ್ಯ.

ಹನಮಪ್ಪ ಭಜಂತ್ರಿ, ಮೌನೇಶ ಭಜಂತ್ರಿ ವ್ಯಾಪಾರಿಗಳು ಕೇಸೂರು ಬಿಸಿಲ ಝಳದಿಂದ ಪಾರಾಗಲು ಹಾಗೂ ದೇಹ ತಂಪಾಗಿಟ್ಟುಕೊಳ್ಳಲು ಲಿಂಬೆ ಹಣ್ಣಿನ ಪಾನೀಯಗಳ ಸೇವನೆಗೆ ಆದ್ಯತೆ ನೀಡಬೇಕಾಗುತ್ತಿದೆ. ಅಡುಗೆಯಲ್ಲೂ ಲಿಂಬೆಹಣ್ಣು ಬಳಕೆ ಮಾಡಬೇಕಾಗಿರುವುದು ಅನಿವಾರ್ಯವಾಗಿದ್ದು ಹೆಚ್ಚಿನ ಬೆಲೆ ಖರೀದಿಸಬೇಕಿದೆ.

ಶಾರದಾ ಶೆಟ್ಟರ್, ಗೃಹಿಣಿ ಕುಷ್ಟಗಿ