ಕಲೆ, ಸಾಹಿತ್ಯ, ಸಂಗೀತಕ್ಕೆ ಯಾವತ್ತೂ ಸಾವಿಲ್ಲ: ಸಂಗಮೇಶ ಬಬಲೇಶ್ವರ

KannadaprabhaNewsNetwork | Published : Mar 23, 2025 1:38 AM

ಸಾರಾಂಶ

ತಾಯಿ ಸ್ವರೂಪದ ಮಹಿಳೆಯನ್ನು ನಾವಿಂದು ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಗೌರವಿಸಿರುವುದು ಭಾರತೀಯ ತಾಯಿಗೆ ನೀಡುವ ಬಹುದೊಡ್ಡ ಗೌರವ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.

ಧಾರವಾಡ: ಕಲೆ, ಸಾಹಿತ್ಯ, ಸಂಗೀತಕ್ಕೆ ಯಾವತ್ತೂ ಸಾವಿಲ್ಲ. ಸಂಗೀತ, ನೃತ್ಯ, ಕಲೆಗಳು ಮಾತ್ರ ಮನುಷ್ಯನ ಮನಸ್ಸನ್ನು ಅರಳಿಸಬಲ್ಲವು ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.

ಧಾರವಾಡದ ಫ್ರೆಂಡ್ಸ್ ಸೋಶಿಯಲ್ ಕ್ಲಬ್ ಕೇಂದ್ರ ಸಂಸ್ಕೃತಿ ಮಂತ್ರಾಲಯದ ಸಹಕಾರದಲ್ಲಿ ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಲಾ ಪ್ರತಿಭೋತ್ಸವ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.ತಾಯಿ ಸ್ವರೂಪದ ಮಹಿಳೆಯನ್ನು ನಾವಿಂದು ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಗೌರವಿಸಿರುವುದು ಭಾರತೀಯ ತಾಯಿಗೆ ನೀಡುವ ಬಹುದೊಡ್ಡ ಗೌರವ ಎಂದರು. ಹಿರಿಯ ನಟ, ನಿರ್ದೇಶಕ ಡಾ. ಶಶಿಧರ ನರೇಂದ್ರ ಮಾತನಾಡಿ, ನಾವಿಂದು ಸಂಭ್ರಮದಲ್ಲಿದ್ದೇವೆ. ಭಾರತ ಸಂಜಾತೆ ಸುನಿತಾ ವಿಲಿಯಮ್ಸ್ ವಿಶ್ವ ಭೂಗರ್ಭದಾಚೆ ಸುಮಾರು ಒಂಭತ್ತು ತಿಂಗಳುಕಾಲ ನೆಲೆಸಿ, ಮರಳಿ ಭೂಮಿಗೆ ಯಶಸ್ವಿಯಾಗಿ ಆಗಮಿಸಿದ್ದು ಪ್ರಶಂಸನೀಯ ಎಂದರು.

ಸವಿತಾ ಅಮರಶೆಟ್ಟಿ, ಸಾವಿತ್ರಿ ಕಡಿ, ಶಂಕರ ಹಲಗತ್ತಿ ಮಾತನಾಡಿದರು. ಮಲ್ಲಿಕಾರ್ಜುನ ಚಿಕ್ಕಮಠ ನಿರೂಪಿಸಿದರು. ಮಲ್ಲಿಕಾರ್ಜುನ ಸೊಲಗಿ ಪ್ರಾಸ್ತಾವಿಕ ಮಾತನಾಡಿದರು. ವಿನೋದ ಕುಸುಗಲ್ ಸ್ವಾಗತಿಸಿದರು. ಪ್ರಕಾಶ ಬಾಳಿಕಾಯಿ ವಂದಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಡಾ. ಪೂರ್ಣಿಮಾ ಮುಕ್ಕುಂದಿ-ಸಂಗೀತ, ವಿದುಷಿ ನಾಗರತ್ನ ಹಡಗಲಿ-ನೃತ್ಯ, ಡಾ. ವೀಣಾ ಬಿರಾದಾರ-ಸಾಮಾಜಿಕ, ಅನ್ನಪೂರ್ಣ ಲಿಂಬಿಕಾಯಿ-ಲಲಿತಕಲೆ, ಅನನ್ಯ ಶಂಬಯ್ಯ ಹಿರೇಮಠ- ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಅನುಪಮ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ನಂತರ ಜರುಗಿದ ಸಾಂಸ್ಕೃತಿಕ ಕಲಾ ಪ್ರತಿಭೋತ್ಸವದಲ್ಲಿ ಡಾ. ಪೂರ್ಣಿಮಾ ಮುಕ್ಕುಂದಿ ಅವರ ಸುಗಮ ಸಂಗೀತ, ಸಿರಿಗಂಧ ಜಾನಪದ ಕಲಾ ಬಳಗದ ಪ್ರಕಾಶ ಕಂಬಳಿ ಮತ್ತು ಸಂಗಡಿಗರಿಂದ ಜೋಗತಿ ನೃತ್ಯ, ಹರ್ಲಾಪೂರದ ಶರೀಫ ದೊಡ್ಡಮನಿ ಮತ್ತು ತಂಡದಿಂದ ಜಾನಪದ ಗಾಯನ, ವಿದುಷಿ ನಾಗರತ್ನಾ ಹಡಗಲಿ ಮತ್ತು ತಂಡದಿಂದ ವಚನ ನೃತ್ಯ, ಡಾ. ಗುರುಬಸವ ಮಹಾಮನೆ ಮತ್ತು ತಂಡದಿಂದ ವಯೋಲಿನ್ ವಾದನ, ಯುವ ಡಾನ್ಸ್ ಅಕಾಡೆಮಿಯ ರಮೇಶ ಪಾಟೀಲ ಮತ್ತು ತಂಡದಿಂದ ಜಾನಪದ ನೃತ್ಯ, ಡಾ. ಪರಶುರಾಮ ಕಟ್ಟಿಸಂಗಾವಿ, ಸ್ವರಸಂವಾದಿನಿ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಸಮೂಹ ಗಾಯನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು. ತಬಲಾದಲ್ಲಿ ದಯಾನಂದ ಸುತಾರ ಹಾಗೂ ಹಾರ್ಮೊನಿಯಂದಲ್ಲಿ ಡಾ. ಪರಶುರಾಮ ಕಟ್ಟಿಸಂಗಾವಿ ಸಾಥ್ ಸಂಗತ ನೀಡಿದರು.

Share this article