ಬ್ಯಾಡಗಿ: ತಾಲೂಕಿನ ಕಲ್ಲೇದೇವರು, ಅಳಲಗೇರಿ, ಕನವಳ್ಳಿ, ಮೋಟೆಬೆನ್ನೂರು ಬಳಿ ಚಿರತೆ ಹೆಜ್ಜೆಗಳು ಪ್ರತ್ಯಕ್ಷವಾಗಿದ್ದು, ಕಳೆದ ನಾಲ್ಕು ದಿನಗಳಿಂದ ರೈತರಲ್ಲಿ ಆತಂಕ ಮನೆಮಾಡಿದ್ದು, ಅರಣ್ಯಾಧಿಕಾರಿಗಳ ಕೂಡಲೇ ಭೇಟಿ ನೀಡಿ, ಮುಂಜಾಗೃತಾ ಕ್ರಮ ಕೈಗೊಂಡು ಗ್ರಾಮಸ್ಥರಲ್ಲಿರುವ ಆತಂಕ ದೂರ ಮಾಡಬೇಕಿದೆ.
ಚಿರತೆ ಎಲ್ಲಿ ಅಡಗಿದೆ ಎನ್ನುವ ಭಯ:
ರಾತ್ರಿ ಹೊತ್ತಲ್ಲಿ ಹೊಲಗಳಿಗೆ ರೈತರು ತೆರಳಲು ಸ್ವಲ್ಪ ಹಿಂದೇಟು ಹಾಕುತ್ತಿದ್ದು, ಕೂಲಿಕಾರ್ಮಿಕರು ಅಂಜಿಕೆಯಿಂದ ತೆರಳುತ್ತಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಚಿರತೆ ಈ ಪ್ರದೇಶದಿಂದ ಹೊರಹೋಗಿದೆ ಎನ್ನುವ ಸ್ಪಷ್ಟ ಸಂದೇಶ ಸಿಗುವವರೆಗೂ ರೈತರಲ್ಲಿ ಆತಂಕ ದೂರವಾಗಲು ಸಾಧ್ಯವಿಲ್ಲ. ಇನ್ನಾದರೂ ಅರಣ್ಯಾಧಿಕಾರಿಗಳು ಎಚ್ಚೆತ್ತು ಕಾರ್ಯನಿರ್ವಹಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.ಹೆಜ್ಜೆಗುರ್ತಿನ ವಿಡಿಯೋ ವೈರಲ್: ಮೋಟೆಬೆನ್ನೂರು, ಅಳಲಗೇರಿ, ಕಾಕೋಳ ಸುತ್ತಮುತ್ತ ಚಿರತೆ ಹೆಜ್ಜೆ ಹಾಗೂ ಕುರಿ, ನಾಯಿಯನ್ನುತಿಂದು ಹಾಕಿರುವ ಕುರಿತು ವಿಡಿಯೋ ತುಣುಕು ಓಡಾಡುತ್ತಿದೆ. ಇದನ್ನು ಆಧರಿಸಿ ಎಚ್ಚೆತ್ತುಕೊಂಡ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಧಾವಿಸಿ ಮುನ್ನೆಚ್ಚರಿಕೆ ಕೈಗೊಂಡಿದ್ದು, ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಚಿರತೆ ಸೆರೆಹಿಡಿಯಲು ಕಲ್ಲೆದೇವರ, ಮೋಟೆಬೆನ್ನೂರು ಹಾಗೂ ಅಳಲಗೇರಿ ಬಳಿ ಬೋನು ಅಳವಡಿಸಲಾಗಿದೆ. ಸಾರ್ವಜನಿಕರು ಭಯಪಡದೆ, ಚಿರತೆ ಓಡಾಟ ಕಂಡಲ್ಲಿ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಸಹಕಾರ ನೀಡಬೇಕು. ಪ್ರಾಣಿಗಳನ್ನು ತಿಂದು ಹಾಕಿರುವುದು ಕಂಡುಬಂದಲ್ಲಿ ಸಿಬ್ಬಂದಿಗಳಿಗೆ ಗಮನಕ್ಕೆ ತನ್ನಿ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ಎಂ. ಅಣ್ಣಪ್ಪ ಮನವಿ ಮಾಡಿಕೊಂಡಿದ್ದಾರೆ.
ಜಿಲ್ಲಾಧಿಕಾರಿಗೆ ದೂರು: ವರ್ಷದ ಹಿಂದೆ ಇಲ್ಲಿನ ವಲಯ ಅರಣ್ಯಾಧಿಕಾರಿಗಳು ವರ್ಗಾವಣೆಯಾಗಿದ್ದು, ಇವರ ಸ್ಥಾನಕ್ಕೆ ಬೇರೊಬ್ಬ ಅಧಿಕಾರಿ ವರ್ಗಾವಣೆಯಾಗಿದ್ದು ಈವರೆಗೂ ಬಂದು ಹಾಜರಾಗಿಲ್ಲ. ಹೀಗಾಗಿ ಸಾರ್ವಜನಿಕರು ಕಚೇರಿಗೆ ಓಡಾಡುವುದು ತಪ್ಪಿಲ್ಲ. ಈಗ ರಾಣಿಬೆನ್ನೂರಿನ ಸಾಮಾಜಿಕ ವಲಯ ಅರಣ್ಯಾಧಿಕಾರಿಯನ್ನು ನಿಯೋಜಿಸಲಾಗಿದೆ. ಅಧಿಕಾರಿಗಳು ಸಮರ್ಪಕವಾಗಿ ಸಾರ್ವಜನಿಕರಿಗೆ ಲಭ್ಯವಾಗುತ್ತಿಲ್ಲವೆಂದು ರೈತರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಅಲ್ಲದೆ ಹಲವಾರು ಪ್ರತಿಭಟನೆಗಳಲ್ಲಿ ಒತ್ತಾಯಿಸಿದರೂ ಸಮಸ್ಯೆಗೆ ಉತ್ತರ ಸಿಕ್ಕಿಲ್ಲ ಹಾಗೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.