ಹಾನಗಲ್ಲ: ತಾಲೂಕಿನ ಕೃಷಿ ಭೂಮಿಯಲ್ಲಿ ಸುತ್ತಾಡುತ್ತಿರುವ ಚಿರತೆಯನ್ನು ಬೋನಿಗೆ ಕೆಡವಲು ಅರಣ್ಯ ಇಲಾಖೆ ಹರಸಾಹಸ ಮಾಡುತ್ತಿದೆ, ಚಿರತೆ ಬೋನಿಗೆ ಬೀಳುತ್ತಿಲ್ಲ. ರೈತರ ಆತಂಕಕ್ಕೆ ಪರಿಹಾರ ಸಿಗುತ್ತಿಲ್ಲ.
ದಿನಕ್ಕೆ 30 ಕಿಮೀ ಸುತ್ತ ಚಿರತೆ ಓಡಾಡುತ್ತದೆ ಎಂಬ ಮಾಹಿತಿ ಇದೆ. ಊರ ಹತ್ತಿರದ, ಹೊಲ ಗದ್ದೆಗಳಲ್ಲಿರುವ ನಾಯಿಗಳನ್ನು ಹಿಡಿದು ತಿನ್ನುತ್ತಿದೆ. ನಾಯಿಯೊಂದಿಗೆ ಚಿಕ್ಕ ಪ್ರಾಣಿಗಳನ್ನು ಹಿಡಿದು ತಿನ್ನುತ್ತಿದೆ. ಅಲ್ಲದೆ ಕಾಡಿನಿಂದ ನಾಡಿಗೆ ಬರುತ್ತಿರುವ ಚಿರತೆಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ ಎನ್ನಲಾಗಿದೆ.
ಆನೆಗಳು: ಪ್ರತಿವರ್ಷ ದೀಪಾವಳಿ ಹೊತ್ತಿಗೆ ಹಾನಗಲ್ಲ ತಾಲೂಕಿನಲ್ಲಿ ಬಂದು ಬೀಡು ಬಿಡುತ್ತಿದ್ದ ಆನೆಗಳು ಈ ವರ್ಷ ಇನ್ನು ಬಂದಿಲ್ಲ. ಈಗಾಗಲೇ ಹಾನಗಲ್ಲ ತಾಲೂಕಿನ ಗಡಿ ಭಾಗದಲ್ಲಿ ಆನೆಗಳು ಕಾಣಿಸಿಕೊಂಡಿದ್ದು, ಹಾನಗಲ್ಲ ತಾಲೂಕಿಗೂ ಪ್ರವೇಶಿಸಬಹುದೆಂದು ನಿರೀಕ್ಷಿಸಲಾಗಿದೆ. ಆನೆಗಳು ಬಂದರೆ ಅವುಗಳನ್ನು ನಿಯಂತ್ರಿಸಿ ಕಾಡಿಗಟ್ಟುವ ಸಿದ್ಧತೆಗೆ ಅರಣ್ಯ ಇಲಾಖೆ ಮುಂದಾಗಿದೆ.ಕಾಡಿಗೆ ಮರಳಿಸುವ ಯತ್ನ: ಚಿರತೆ ಓಡಾಡುತ್ತಿರುವ ಬಗ್ಗೆ ಮಾಹಿತಿ ಇದೆ. ಚಿರತೆ ಹಿಡಿಯಲು ಎರಡು ಬೋನುಗಳನ್ನು ಇಡಲಾಗಿದೆ. ನಮ್ಮ ಸಿಬ್ಬಂದಿ ದಿನ ನಿತ್ಯ ಚಿರತೆಯ ಚಲನವಲನಗಳನ್ನು ಗಮನಿಸುತ್ತಿದ್ದಾರೆ. ಆದರೆ ಚಿರತೆ ಬೋನಿಗೆ ಬೀಳುತ್ತಿಲ್ಲ. ಒಂದಕ್ಕಿಂತ ಹೆಚ್ಚು ಚಿರತೆಗಳಿವೆ ಎಂಬ ಮಾಹಿತಿಯೂ ಇದೆ. ಇದೆಲ್ಲವನ್ನೂ ಇಲಾಖೆ ಗಮನಿಸಿ ಚಿರತೆ ಹಿಡಿಯುವ ಅಥವಾ ಕಾಡಿಗೆ ಮರಳಿಸುವ ಪ್ರಯತ್ನ ನಡೆದಿದೆ ಎಂದು ಹಾನಗಲ್ಲ ವಲಯ ಅರಣ್ಯಾಧಿಕಾರಿ ಗಣೇಶಪ್ಪ ಶೆಟ್ಟರ ಹೇಳಿದರು.