ಕೊರಟಗೆರೆ: ತಾಲೂಕಿನ ಜಿ. ನಾಗೇನಹಳ್ಳಿ ಸಮೀಪದ ತಿಮ್ಮಪ್ಪನ ಬೆಟ್ಟದ ತಪ್ಪಲಿನಲ್ಲಿ ಮೇಕೆ ಮೇಲೆ ದಾಳಿ ಮಾಡಲು ಬಂದ ಚಿರತೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸೆರೆ ಹಿಡಿಯುಲ್ಲಿ ಯಶಸ್ವಿಯಾದರು. ಜಿ.ನಾಗೇನಹಳ್ಳಿ ಗ್ರಾಮದ ಸಮೀಪ ಇರುವ ತಿಮ್ಮಪ್ಪನ ಬೆಟ್ಟದಲ್ಲಿ ಅನೇಕ ಬಾರಿ ಕಾಣಿಸಿಕೊಂಡು ಅಲ್ಲಿನ ಜನರಿಗೆ ಆತಂಕ ಸೃಷ್ಟಿಸಿದ ಘಟನೆ ನಡೆದಿತ್ತು. ಅದೇ ಗ್ರಾಮದ ದೇವರಾಜು ಎಂಬ ರೈತರ ಜಮೀನಿನಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಅಲ್ಲಿ ಮೇವು ಮೇಯಿತ್ತಿದ್ದ ಮೇಕೆಗಳ ಮೇಲೆ ಏಕಾ ಏಕಿ ದಾಳಿ ಮಾಡಲು ಚಿರತೆ ಬಂದಿದ್ದು, ಚಿರತೆ ಕಂಡು ಗಾಬರಿಗೊಂಡ ಮೇಕೆಗಳು ಚಲ್ಲಾಪಿಲ್ಲಿಯಾಗಿ ಓಡುತ್ತಿರುವುದನ್ನು ಗಮನಿಸಿದ ರೈತ ದೇವರಾಜು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮಿಂಚಿನ ಕಾರ್ಯಾಚರಣೆ ನಡೆಸಿ ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿಕಾರ್ಜುನಪ್ಪ ವಲಯ ಅರಣ್ಯಾಧಿಕಾರಿ ಹನುಮಂತರಾಜು, ಉಪ ವಲಯ ಅರಣ್ಯಾಧಿಕಾರಿ ಎ. ದಿಲೀಪ್ ಕುಮಾರ್, ಗಸ್ತು ಅರಣ್ಯ ಪಾಲಕರಾದ ಗಂಗಾಧರ್, ಕಾವ್ಯ, ವಿನೋದ್ ರಾಜ್, ಪೃಥ್ವಿ, ವಾಚರ್ಗಳಾದ ನರಸರಾಜು, ಮುತ್ತುರಾಜು, ಪವನ್, ತಿಪ್ಪೇಸ್ವಾಮಿ, ರಾಕೇಶ್, ರವಿ ಹಾಗೂ ಚಾಲಕ ಕೃಷ್ಣಮೂರ್ತಿ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.