- ಕೇಂದ್ರ, ರಾಜ್ಯ ಸರ್ಕಾರಗಳ ತಪ್ಪು ನೀತಿ, ಭ್ರಷ್ಟರ ಕಾಟ ಅಸಹನೀಯ: ಲಾರಿ ಮಾಲೀಕರ ಸಂಘ ಆಕ್ರೋಶ - - -
ಕೇಂದ್ರ, ರಾಜ್ಯ ಸರ್ಕಾರಗಳ ತಪ್ಪು ನೀತಿಗಳು, ಪೊಲೀಸ್- ಪ್ರಾದೇಶಿಕ ಸಾರಿಗೆ ಇಲಾಖೆಗಳ ಭ್ರಷ್ಟ ಅಧಿಕಾರಿ, ಸಿಬ್ಬಂದಿ ಕಿರುಕುಳ ಸೇರಿದಂತೆ ನಾನಾ ಸಮಸ್ಯೆಗಳಿಂದ ಇಡೀ ಲಾರಿ ಉದ್ಯಮವೇ ಸಂಕಷ್ಟದಲ್ಲಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಲಾರಿ ಮಾಲೀಕರು, ಚಾಲಕರು ದೇಶದ ಬೆನ್ನೆಲುಬಾದ ಲಾರಿ ಉದ್ಯಮವನ್ನೇ ತೊರೆಯಬೇಕಾಗುತ್ತದೆ ಎಂದು ಜಿಲ್ಲಾ ಲಾರಿ ಮಾಲೀಕರು ಮತ್ತು ಟ್ರಾನ್ಸ್ಪೋರ್ಟ್ ಏಜೆಂಟ್ಸ್ ಅಸೋಸಿಯೇಷನ್ ಎಚ್ಚರಿಸಿದೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ, ಕರ್ನಾಟಕ ರಾಜ್ಯ ಲಾರಿ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ಸೈಯದ್ ಸೈಫುಲ್ಲಾ, ಲಾರಿ ಮಾಲೀಕರು ಮತ್ತು ಚಾಲಕರು ಇಂದು ಒಂದಲ್ಲ, ಹತ್ತಾರು ಸಮಸ್ಯೆಗಳ ಸುಳಿಗೆ ಸಿಲುಕಿದ್ದು, ಈ ವೃತ್ತಿ, ಉದ್ಯಮದ ಜೀವನ ಸಾಗಿಸುವುದಿರಲಿ, ನೆಮ್ಮದಿಯಿಂದ ನಿದ್ದೆ ಮಾಡಲೂ ಆಗದಂತಹ ಪರಿಸ್ಥಿತಿಯನ್ನು ಕೇಂದ್ರ, ರಾಜ್ಯ ಸರ್ಕಾರಗಳ ತಪ್ಪು ನೀತಿಗಳು, ಭ್ರಷ್ಟ ಅಧಿಕಾರಿ, ಸಿಬ್ಬಂದಿ ತಂದೊಡ್ಡಿದ್ದಾರೆ ಎಂದರು.ಪ್ರಸ್ತುತ ಸಾರಿಗೆ ಉದ್ಯಮ ವಿಶೇಷವಾಗಿ ಸರಕು ಸಾಗಾಣಿಕೆಯ ಆಧಾರವಾದ ಲಾರಿ ಉದ್ಯಮ ನಡೆಸುವುದೇ ಕಷ್ಟವಾಗಿದೆ. ಸರಕು ಸಾಗಾಣಿಕೆ ಉದ್ಯಮ ಮೊದಲಿನಂತೆ ಈಗ ಇಲ್ಲ. ಹೆದ್ದಾರಿ, ಟೋಲ್ಗಳಲ್ಲಿ ಲಾರಿ ಚಾಲಕರಿಗೆ ಸುರಕ್ಷತೆ ಇಲ್ಲ, ಶೌಚಾಲಯ, ರೆಸ್ಟ್ ರೂಂ ಯಾವುದೂ ಇಲ್ಲ. ಈಗಾಗಲೇ ಲಾರಿಗಳಲ್ಲಿ ಕ್ಲೀನರ್ ಕೆಲಸಕ್ಕೆ ಯಾರೂ ಬರುತ್ತಿಲ್ಲ. ಸರಕು ಹೊತ್ತ ಲಾರಿಯಲ್ಲಿ ಚಾಲಕನೊಬ್ಬನೇ ಇರುವ ಸ್ಥಿತಿ ಇದೆ ಎಂದರು.
ಕೇಂದ್ರ ಸರ್ಕಾರದ ಜಿಎಸ್ಟಿ ಆದೇಶ ಬಂದ ನಂತರ ಚೆಕ್ ಪೋಸ್ಟ್ಗಳ ಅವಶ್ಯಕತೆಯೇ ಇಲ್ಲ. ಆದರೂ, ಗಡಿಭಾಗದ ಚೆಕ್ ಪೋಸ್ಟ್ ಹಾಗೂ ರಸ್ತೆಯುದ್ದಕ್ಕೂ ಹೋಗುವ ವಾಹನಗಳಿಗೆ ಅಧಿಕಾರಿಗಳು ಅನಾವಶ್ಯಕವಾಗಿ ತೊಂದರೆ ನೀಡುತ್ತಿದ್ದಾರೆ. ಅದನ್ನು ಪ್ರಶ್ನಿಸಿದರೆ ಲಾರಿ ಚಾಲಕರ ಲೈಸೆನ್ಸ್ ಅಮಾನತು, ರದ್ದುಪಡಿಸುವ ಬೆದರಿಕೆ ಹಾಕುತ್ತಾರೆ. ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ ಸುತ್ತೋಲೆ ಪ್ರಕಾರ ಎಪಿಎಂಸಿ ಪ್ರಾಂಗಣ ಸೇರಿದಂತೆ ಇತರೆ ಸಂಸ್ಥೆಗಳಿಂದ ವಾಹನ ಲೋಡಿಂಗ್, ಅನ್ ಲೋಡಿಂಗ್ ಮೊತ್ತವನ್ನು ಸರಕಿನ ಮಾಲೀಕರೇ ಪಾವತಿಸಬೇಕು. ಇದನ್ನು ಉಲ್ಲಂಘಿಸಿ, ಲಾರಿ ಮಾಲೀಕರಿಂದ ವಸೂಲು ಮಾಡುತ್ತಿರುವುದು ಕಾನೂನು ಬಾಹಿರ. ಈ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.
ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಲಾರಿ ಖರೀದಿಗೆ ಸಾಲ ಸಿಗದ ಕಾರಣಕ್ಕೆ ಮೈಕ್ರೋ ಫೈನಾನ್ಸ್ಗಳಲ್ಲಿ ಸಾಲ ಮಾಡಿರುತ್ತೇವೆ. ಆದರೆ, ಆರ್ಬಿಐ ನಿಯಮಾವಳಿಗೆ ವಿರುದ್ಧವಾಗಿ ರೌಡಿಗಳಂತಿರುವ ಸೀಜ್ ಮಾಡುವ ಸಿಬ್ಬಂದಿಯಿಂದ ಗಲಾಟೆ, ಹಲ್ಲೆ ಮಾಡಿಸಿ, ಲಾರಿ ಜಪ್ತಿ ಮಾಡಲಾಗುತ್ತಿದೆ. ಇಂಧನ ದರ, ಲಾರಿಗಳ ಬಿಡಿ ಭಾಗಗಳ ಬೆಲೆ ಏರಿಕೆ, ಸಾರಿಗೆ ಶುಲ್ಕಗಳು ಸಹ ಸಾಕಷ್ಟು ಆರ್ಥಿಕ ಪೆಟ್ಟನ್ನು ಲಾರಿ ಮಾಲೀಕರಿಗೆ ನೀಡುತ್ತಿವೆ. ಹೀಗೆ ಹಲವಾರು ಸಮಸ್ಯೆಗಳ ಮಧ್ಯೆ ಮುಂದೆ ಯಾರೂ ಲಾರಿ ಉದ್ಯಮಕ್ಕೆ ಕಾಲಿಡದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಎಲ್ಲ ಅಂಶಗಳ ಬಗ್ಗೆ ಉಭಯ ಸರ್ಕಾರಗಳು ಗಂಭೀರವಾಗಿ ಆಲೋಚಿಸಿ, ಕ್ರಮ ಕೈಗೊಳ್ಳಲಿ ಎಂದು ಸೈಯದ್ ಸೈಫುಲ್ಲಾ ಒತ್ತಾಯಿಸಿದರು.
- - -
* ಲಾರಿಗೆ ಹಾನಿ ಮಾಡ್ಬೇಡಿ, ಚಾಲಕರಿಗೆ ತೊಂದ್ರೆ ಕೊಡ್ಬೇಡಿ
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕಾವೇರಿ ವಿಚಾರದ ಕರ್ನಾಟಕ ಬಂದ್ಗೆ ನಮ್ಮ ಬೆಂಬಲವಿತ್ತು. ಕಾವೇರಿ ಗಲಾಟೆ ವೇಳೆ ತಮಿಳುನಾಡಿನಲ್ಲಿ ನಮ್ಮ ರಾಜ್ಯದ ಹಲವಾರು ಲಾರಿಗಳನ್ನು ಸುಟ್ಟಿದ್ದರು. ಅದಕ್ಕೆ ಇನ್ಷೂರೆನ್ಸ್ ಹಣಕ್ಕಾಗಿ ಲಾರಿ ಮಾಲೀಕರು ತೀವ್ರ ಪರದಾಡಬೇಕಾಯಿತು ಎಂದರು.
ಸ್ಥಳೀಯರಾಗಿ ನಾವು ಹೋರಾಟಕ್ಕೆ ಸಂಪೂರ್ಣ ಬೆಂಬಲ ಕೊಟ್ಟೇ ಕೊಡುತ್ತೇವೆ. ಆದರೆ, ರಾಜ್ಯ ರಾಜ್ಯದಿಂದ ಲಾರಿ ತಂದಂತಹ ಲಾರಿ ಚಾಲಕರಿಗೆ ಇಲ್ಲಿನ ಬಂದ್ ವಿಚಾರ ಗೊತ್ತಿರುವುದಿಲ್ಲ. ಹಾಗಾಗಿ ಹೆದ್ದಾರಿಯಲ್ಲಿ ಸಾಗುವಂತಹ ಲಾರಿಗಳನ್ನು ತಡೆಯುವುದು, ಚಾಲಕರಿಗೆ ತೊಂದರೆ ಕೊಡುವುದು, ಹಲ್ಲೆ ಮಾಡುವುದು, ಲಾರಿ ಗಾಜು, ಹೆಡ್ ಲೈಟ್ ಒಡೆಯುವುದು, ಟೈರ್ಗಳಲ್ಲಿನ ಗಾಳಿ ಬಿಡುವುನ್ನು ಮಾಡಬೇಡಿ ಎಂದು ಸೈಯದ್ ಸೈಫುಲ್ಲಾ ತಿಳಿಸಿದರು.
- - --12ಕೆಡಿವಿಜಿ2, 3:
ದಾವಣಗೆರೆಯಲ್ಲಿ ಬುಧವಾರ ರಾಜ್ಯ ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷ ಸೈಯದ್ ಸೈಫುಲ್ಲಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.