ನಾಲ್ವಡಿ ಜೊತೆ ರೈತರಿಗೆ ಲೆಸ್ಲಿ ಕೋಲ್ಮನ್ ಕೊಡುಗೆಯೂ ಅಪಾರ: ಎಚ್.ಡಿ.ಜಯರಾಂ

KannadaprabhaNewsNetwork |  
Published : Sep 15, 2025, 01:00 AM IST
14ಕೆಎಂಎನ್ ಡಿ11 | Kannada Prabha

ಸಾರಾಂಶ

ಮಂಡ್ಯ ಜಿಲ್ಲೆಯ ಇಂದಿನ ಏಳಿಗೆಯಲ್ಲಿ ಕೋಲ್ಮನ್ ಅವರ ರಚನಾತ್ಮಕ ಪಾತ್ರ, ಅವರು ವಹಿಸಿದ ವಿಶೇಷ ಆಸಕ್ತಿ ಫಲವಾಗಿ ಮಂಡ್ಯ ಸಕ್ಕರೆ ನಗರವಾಯಿತು. ನಂತರ ಅವರು ಸ್ವದೇಶಕ್ಕೆ ತೆರಳಿ ಹಲವು ಸಂಶೋಧನೆಗಳಲ್ಲಿ ತೊಡಗಿಕೊಂಡರು. ಬಳಿಕ ಮೋಟಾರ್ ಅಪಘಾತದಲ್ಲಿ ಅವರು ಇಹಲೋಕ ತ್ಯಜಿಸಿದರು ಎಂದು ವಿವರಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಸೂರು ಸಂಸ್ಥಾನದ ಪ್ರಮುಖರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಜೊತೆಗೆ ರೈತರಿಗೆ ಲೆಸ್ಲಿ ಕೋಲ್ಮನ್ ಅವರ ಕೊಡುಗೆಯೂ ಅಪಾರವಾದದ್ದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ ಬಣ್ಣಿಸಿದರು.

ನಗರದ ಮೈಷುಗರ್ ಆವರಣದಲ್ಲಿ ಲೆಸ್ಲಿ ಕೋಲ್ಮನ್ ಅವರ ಸಂಸ್ಮರಣೆ ದಿನದ ಅಂಗವಾಗಿ ಲೆಸ್ಲಿ ಕೋಲ್ಮನ್ ಪ್ರತಿಮೆಗೆ ಮಾಲಾರ್ಪಣೆ ಮತ್ತು ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ರಾಜ್ಯದ ಪ್ರಮುಖ ಸಕ್ಕರೆ ಕಾರ್ಖಾನೆಗಳಲ್ಲೊಂದಾದ ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಿಸಿ, ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕಬ್ಬನ್ನು ಈ ಪ್ರಾಂತ್ಯದಲ್ಲಿ ಬೆಳೆಯುವಂತೆ ಮಾಡಿದರು ಎಂದು ಹೇಳಿದರು.

ಕೆನಡಾದ ಟೊರಾಂಟೋ ರಾಜ್ಯದ ಆಂಟೇರಿಯೋ ಪಟ್ಟಣದಲ್ಲಿ 1878ರ ಜೂನ್ 16ರಂದು ಜನಿಸಿದ ಕೋಲ್ಮನ್ ಅವರು, ಆಂಟೇರಿಯೋ ವಿಶ್ವವಿದ್ಯಾಲಯದಲ್ಲಿ ಎಂಎ ಪದವಿ ಪಡೆದು ಮೈಸೂರು ಸರ್ಕಾರದ ನೆರವಿನಿಂದ ಜರ್ಮನ್‌ನ ಗಟಿಂಗೆನ್ ವಿವಿಯಲ್ಲಿ ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆದರು. ನಂತರ ಮೈಸೂರು ಸಂಸ್ಥಾನದಲ್ಲಿ ಕೀಟ ಮತ್ತು ಶಿಲೀಂಧ್ರ ವಿಜ್ಞಾನಿಯಾಗಿ, ತರುವಾಯ ವ್ಯವಸಾಯ ಇಲಾಖೆಯ ನಿರ್ದೇಶಕರಾಗಿ ದುಡಿದು 1934ರಲ್ಲಿ ನಿವೃತ್ತರಾದರು ಎಂದರು.

ಈ ಅವಧಿಯಲ್ಲಿ ನಿಷ್ಠಾವಂತ ಮತ್ತು ದಕ್ಷ ಸೇವೆ ಮೂಲಕ ಕೋಲ್ಮನ್ ಅವರು ಮೈಸೂರಿನ ಸ್ಥಿತಿಗತಿಗಳಿಗೆ ತಕ್ಕಂತೆ ಮಾರ್ಪಾಡು ಮಾಡಿ ಜೋಡಿಸುವ ಮೂಲಕ ಇಲ್ಲಿನ ಕೃಷಿ ಪದ್ಧತಿಯನ್ನು ವೈಜ್ಞಾನಿಕ ಬುನಾದಿಯ ಮೇಲೆ ಸ್ಥಾಪಿಸಿ ಆಧುನೀಕರಿಸುವ ಪ್ರಯತ್ನ ಬಹಳ ಮಟ್ಟಿಗೆ ಸಫಲಗೊಂಡಿತು ಎಂದು ವಿವರಿಸಿದರು.

ಮೈಸೂರು ಸರ್ಕಾರದ ಕೃಷಿ ಕ್ಷೇತ್ರದಲ್ಲಿ ಕೋಲ್ಮನ್ ಅವರು ಹಲವು ಪರಿಣಾಮಕಾರಿ ಕೆಲಸಗಳನ್ನು ಮಾಡುವ ಮೂಲಕ ರೈತರಿಗೆ ಸಾಕಷ್ಟು ಅನುಕೂಲಗಳನ್ನು ಮಾಡಿಕೊಟ್ಟಿದ್ದಾರೆ. ಮಲೆನಾಡಿನ ಮುಖ್ಯ ಬೆಳೆ ಅಡಿಕೆಗೆ ತಗಲುವ ಶಿಲೀಂಧ್ರಜನ್ಯ ಕೊಳೆರೋಗದಿಂದ ಬೆಳೆಗಾರರು ಕಂಗಾಲಾಗಿದ್ದಾಗ ಆಳವಾದ ಮತ್ತು ವ್ಯಾಪಕ ಸಂಶೋಧನೆಗಳನ್ನು ನಡೆಸಿದ ಕೋಲ್ಮನ್ ಫೈಟಾಫ್ತೊರ ಅರಕೀ ಎಂಬ ವೈಜ್ಞಾನಿಕ ಹೆಸರಿನ ಆ ಶಿಲೀಂಧ್ರದ ರೂಪರೇಷೆಗಳನ್ನು ವಿವರಿಸಿ ಅದರ ಹಾವಳಿಯನ್ನು ತಡೆಗಟ್ಟಲು ಬೋರ್ಡೋ (ಮೈಲುತುತ್ತ ಮತ್ತು ಸುಣ್ಣದ ತಿಳಿ) ಮಿಶ್ರಣದ ಸಿಂಪಡಿಕೆಯನ್ನು ಅಳವಡಿಸಿಕೊಟ್ಟರು ಎಂದು ತಿಳಿಸಿದರು.

ಮುಂಗಾರು- ಹಿಂಗಾರು ಮಳೆಗಳ ಅವಧಿಯಲ್ಲಿ ಸಮರೋಪಾದಿಯಾಗಿ ವ್ಯವಸ್ಥೆಗೊಳಿಸಿದ್ದ ಕಾರ್ಯಕ್ರಮ ಈಗಲೂ ಸೂಕ್ತ ಮಾರ್ಪಾಡುಗಳೊಂದಿಗೆ ಅಸ್ತಿತ್ವದಲ್ಲಿದೆ. ಕಾಫಿ ಬೆಳೆಗೆ ತಗಲುವ ಎಲೆರೋಗ, ಕೊಳೆರೋಗಗಳ ದೀರ್ಘ ಅಧ್ಯಯನ ನಡೆಸಿ ಅವುಗಳ ಹತೋಟಿಗೆ ಬೋರ್ಡೋ ಮಿಶ್ರಣ ಸಿಂಪಡಿಕೆಯನ್ನು ಅನುಷ್ಠಾನಕ್ಕೆ ತಂದರು ಎಂದು ಹೇಳಿದರು.

ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಖುಷ್ಕಿ ಬೆಳೆಗಳಿಗೆ ಕಂಟಕವಾದ ಆರುಕಾಲು ಚಿಟ್ಟೆ ಅಥವಾ ಕುದುರೆ ಮೂತಿ ಚಿಟ್ಟೆಯ ಸಮಗ್ರ ಅಧ್ಯಯನ ಮಾಡಿ ಸರಳರೀತಿಯ ನಿವಾರಣೋಪಾಯ ಸೂಚಿಸಿದರು. ಇಂತಹ ಹಲವಾರು ರೋಗಗಳ ಹತೋಟಿಗೆ ಕ್ರಮಗಳನ್ನು ಕೈಗೊಂಡರು.

ಮಂಡ್ಯ ಜಿಲ್ಲೆಯ ಇಂದಿನ ಏಳಿಗೆಯಲ್ಲಿ ಕೋಲ್ಮನ್ ಅವರ ರಚನಾತ್ಮಕ ಪಾತ್ರ, ಅವರು ವಹಿಸಿದ ವಿಶೇಷ ಆಸಕ್ತಿ ಫಲವಾಗಿ ಮಂಡ್ಯ ಸಕ್ಕರೆ ನಗರವಾಯಿತು. ನಂತರ ಅವರು ಸ್ವದೇಶಕ್ಕೆ ತೆರಳಿ ಹಲವು ಸಂಶೋಧನೆಗಳಲ್ಲಿ ತೊಡಗಿಕೊಂಡರು. ಬಳಿಕ ಮೋಟಾರ್ ಅಪಘಾತದಲ್ಲಿ ಅವರು ಇಹಲೋಕ ತ್ಯಜಿಸಿದರು ಎಂದು ವಿವರಿಸಿದರು.

ಕರವೇ ಜಿಲ್ಲಾಧ್ಯಕ್ಷ ಮುಖಂಡರಾದ ಎಂ.ಬಿ. ನಾಗಣ್ಣಗೌಡ, ಆಟೋ ವೆಂಕಟೇಶ್, ಮುದ್ದೇಗೌಡ, ಪಾಂಡು, ಮಹೇಂದ್ರ ಇತರರು ಇದ್ದರು.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ