ಪರೀಕ್ಷೆ ಬಂದರೂ ಪೂರ್ಣವಾಗದ ಪಾಠ: ವಿದ್ಯಾರ್ಥಿಗಳಿಂದ ಪ್ರತಿಭಟನೆ

KannadaprabhaNewsNetwork |  
Published : Mar 13, 2024, 02:08 AM IST
೧೨ಕೆಎಂಎನ್‌ಡಿ-೩ಮಂಡ್ಯ ತಾಲೂಕಿನ ಕೀಲಾರ ಗ್ರಾಮದಲ್ಲಿ ಪಠ್ಯ ಪೂರ್ಣಗೊಳಿಸುವಂತೆ ಒತ್ತಾಯಿಸಿ ಶಾಲಾ ಮಕ್ಕಳು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಶಾಲೆ ಉಳಿವಿಗೆ ಏನೆಲ್ಲಾ ಬೇಕೋ ಆ ವ್ಯವಸ್ಥೆಯನ್ನು ಮಾಡಿದ್ದೇವೆ, ಇಲ್ಲಿಯ ತನಕ ಸುಮಾರು ೨೦ ಲಕ್ಷ ರುಪಾಯಿಗಿಂತಲೂ ಹೆಚ್ಚು ಸೌಲಭ್ಯ ನೀಡಿದ್ದೇವೆ, ನಿತ್ಯ ಸಚಿವರ ತವರೂರು ಎಂಬ ಕಾರಣಕ್ಕಾಗಿ ನಮ್ಮೂರಿನ ಹೆಸರು ಉಳಿವಿಗೆ ಸಹಕರಿಸಿದ್ದೇವೆ, ಆದರೂ ಮಕ್ಕಳಿಗೆ ಪಾಠಗಳನ್ನು ಪೂರ್ಣಗೊಳಿಸಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯಪರೀಕ್ಷೆಗಳು ಸಮೀಪಿಸಿವೆ, ಇನ್ನೂ ಪೂರ್ಣಗೊಳ್ಳದ ಪಾಠ, ಪಠ್ಯ ಬೋಧಿಸಬೇಕಾದದ ಶಿಕ್ಷಕರನ್ನು ತರಬೇತಿಗೆ ನಿಯೋಜಿಸುವುದು ಇನ್ನೂ ನಿಂತಿಲ್ಲ. ಪಠ್ಯ ವಿಷಯಗಳು ಪೂರ್ಣಗೊಳ್ಳದೆ ವಿದ್ಯಾರ್ಥಿಗಳು ಆತಂಕಗೊಂಡಿದ್ದು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.

ತಾಲೂಕಿನ ಕೀಲಾರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪಾಠಗಳನ್ನು ಪೂರ್ಣವಾಗಿ ಮುಗಿಸದೆ ಪರೀಕ್ಷೆ ಬರೆಸುತ್ತಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದಾರೆ.

ಶಾಲಾ ಆವರಣದ ರಂಗ ಮಂದಿರದಲ್ಲಿ ಪ್ರತಿಭಟನೆ ಕುಳಿತಿರುವ ವಿದ್ಯಾರ್ಥಿಗಳು ಮತ್ತು ಪೋಷಕರು, ಮೊದಲು ಪರಿಪೂರ್ಣವಾಗಿ ಪಾಠ ಮುಗಿಸಿ ಆ ನಂತರ ಪರೀಕ್ಷೆ ಬರೆಸಿ ಎಂದು ಒತ್ತಾಯಿಸಿದ್ದಾರೆ. ಮಕ್ಕಳ ಹೋರಾಟಕ್ಕೆ ಪೋಷಕರು ಕೂಡ ಸಾಥ್ ನೀಡಿದ್ದಾರೆ.

ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಮಾತನಾಡಿ, ಶಾಲೆ ಉಳಿವಿಗೆ ಏನೆಲ್ಲಾ ಬೇಕೋ ಆ ವ್ಯವಸ್ಥೆಯನ್ನು ಮಾಡಿದ್ದೇವೆ, ಇಲ್ಲಿಯ ತನಕ ಸುಮಾರು ೨೦ ಲಕ್ಷ ರುಪಾಯಿಗಿಂತಲೂ ಹೆಚ್ಚು ಸೌಲಭ್ಯ ನೀಡಿದ್ದೇವೆ, ನಿತ್ಯ ಸಚಿವರ ತವರೂರು ಎಂಬ ಕಾರಣಕ್ಕಾಗಿ ನಮ್ಮೂರಿನ ಹೆಸರು ಉಳಿವಿಗೆ ಸಹಕರಿಸಿದ್ದೇವೆ, ಆದರೂ ಮಕ್ಕಳಿಗೆ ಪಾಠಗಳನ್ನು ಪೂರ್ಣಗೊಳಿಸಿಲ್ಲ ಎಂದು ಆರೋಪಿಸಿದರು.

ಶಿಕ್ಷಣ ಇಲಾಖೆ ಅಧಿಕಾರಿಗಳು ಪಾಠ ಮಾಡಬೇಕಾದ ಶಿಕ್ಷಕರನ್ನು ಪರೀಕ್ಷೆ ಸಮಯದಲ್ಲೂ ತರಬೇತಿಗೆ ಕಳುಹಿಸುತ್ತಿದ್ದಾರೆ. ಪರೀಕ್ಷೆ ಸಮಯದಲ್ಲಿ ತರಬೇತಿ ನೀಡುವ ಅಗತ್ಯವೇನು. ಮಕ್ಕಳಿಗೆ ಪಠ್ಯ ಬೋಧನೆ ಮಾಡುವುದಕ್ಕಿಂತ ಶಿಕ್ಷಕರಿಗೆ ನೀಡುವ ತರಬೇತಿಯೇ ಅಧಿಕಾರಿಗಳಿಗೆ ಮುಖ್ಯವೇ ಎಂದು ಪ್ರಶ್ನಿಸಿದರು.

ಬಹುತೇಕ ಪಠ್ಯ ವಿಷಯಗಳಲ್ಲಿ ಮೂರರಿಂದ ನಾಲ್ಕು ಪಾಠಗಳು ಬಾಕಿ ಉಳಿದಿವೆ. ಪಾಠವನ್ನೇ ಮಾಡದೆ ಮಕ್ಕಳು ಪರೀಕ್ಷೆ ಬರೆಯುವುದಾದರೂ ಹೇಗೆ. ೧ ರಿಂದ ೮ನೇ ತರಗತಿ ಮಕ್ಕಳಿಗೆ ಜೂನ್‌ನಲ್ಲಿ ಬರಬೇಕಿದ್ದ ಕಲಿಕಾ ಬಲವರ್ಧನೆ ಪುಸ್ತಕ ಡಿಸೆಂಬರ್‌ನಲ್ಲಿ ಬಂದಿದೆ. ಮುಂದೆ ಅಂತಿಮ ಪರೀಕ್ಷೆ ಇದೆ, ಕಲಿಕಾ ಬಲವರ್ಧನೆ ಪುಸ್ತಕವನ್ನು ಸರಿಯಾಗಿ ಬೋಧಿಸಿಲ್ಲ. ಗಣಿತ, ಕನ್ನಡ ಪುಸ್ತಕಗಳ ಪಾಠಗಳೂ ಮುಗಿದಿಲ್ಲ. ಪಠ್ಯ ಪೂರ್ಣಗೊಳ್ಳದಿರುವ ವಿಷಯವನ್ನು ಬಿಇಒ ಗಮನಕ್ಕೆ ತಂದರೆ ಹಾರಿಕೆಯ ಉತ್ತರ ನೀಡುತ್ತಾರೆ ಎಂದು ದೂಷಿಸಿದರು.

ಈ ಶಾಲೆಯಲ್ಲಿ ಏಳು ಜನ ಶಿಕ್ಷಕರಿದ್ದು, ಒಬ್ಬರು ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಶೈಕ್ಷಣಿಕ ವರ್ಷ ಮುಗಿಯುವವರೆಗೆ ಶಿಕ್ಷಕರಿಗೆ ಯಾವುದೇ ತರಬೇತಿ ಬೇಡ ಎಂದು ಹೇಳಿದ್ದೇವೆ. ಈಗ ಮಕ್ಕಳು ಶಾಲೆಯಿಂದ ಹೊರಗಡೆ ಕುಳಿತು ಮೊದಲು ಪಾಠ ಮಾಡಿಕೊಡಿ ಎಂದು ಕೇಳುತ್ತಿದ್ದಾರೆ, ಇಲ್ಲಿವರೆಗೆ ಯಾವ ಅಧಿಕಾರಿಗಳೂ ಸಹ ಈ ಶಾಲೆಯ ಬಳಿ ಬಂದಿಲ್ಲ, ಹೀಗಾದರೇ ಎಲ್ಲಿ ಸರ್ಕಾರಿ ಶಾಲೆ ಉಳಿವು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಪೋಷಕರಾದ ಭವ್ಯ ಮಾತನಾಡಿ, ಸರ್ಕಾರಿ ಶಾಲೆಯ ಶಿಕ್ಷಕರಿಗೆ ಅವರ ಮಕ್ಕಳ ಕ್ಷೇಮವೇ ಮುಖ್ಯ ಏಕೆಂದರೆ, ಅವರ ಮಕ್ಕಳು ಖಾಸಗಿ ಶಾಲೆಗೆ ಹೋಗುತ್ತಿದ್ದಾರೆ. ಹಾಗಾಗಿ ಸರ್ಕಾರ ಬಡವರ ಮಕ್ಕಳು ಓದುತ್ತಿರುವ ಸರ್ಕಾರಿ ಶಾಲೆಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಶಾಲೆಯಲ್ಲಿ ಮೊಟ್ಟೆ, ಊಟ ಕೊಟ್ಟರೆ ಸಾಕೇ ಪಾಠಗಳನ್ನೂ ಪರಿಪೂರ್ಣವಾಗಿ ಮಾಡಬೇಕಲ್ಲವೇ, ಬಿಇಒ ಅವರಿಗೆ ಹಲವು ಬಾರಿ ದೂರು ನೀಡಿದರೂ ಸಹ ಪ್ರಯೋಜನಕ್ಕೆ ಬಂದಿಲ್ಲ, ಮೊದಲು ಸಮಸ್ಯೆ ಬಗೆಹರಿಸಿ ನಂತರ ಮಕ್ಕಳಿಗೆ ಪರೀಕ್ಷೆ ಕೊಡಲಿ ಎಂದು ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೈಬ್ರರಿ ಮೇಲ್ವಿಚಾರಕರಿಗೆ ವರ್ಷದಿಂದ ಅರ್ಧ ವೇತನ!
ಕುರಿಗಾಹಿ ಸಿಎಂ ಆಗಿದ್ದಕ್ಕೆ ಹೊಟ್ಟೆಕಿಚ್ಚು : ಸಿದ್ದು ಕಿಡಿ