ಶಿರಸಿ: ಗಂಗಾಮಾತೆ ಸ್ಮರಣೆ, ಸೂರ್ಯ ನಮಸ್ಕಾರ, ಭಗವದ್ಗೀತೆ ಪಠಣ, ಭಜನೆ ನಮ್ಮ ದಿನಚರಿಯಾಗಬೇಕು. ಭಗವದ್ಗೀತೆ ಮತ್ತು ಭಜನೆ ನಮ್ಮ ಶಕ್ತಿಯನ್ನು ಜಾಗ್ರತಗೊಳಿಸುತ್ತದೆ ಎಂದು ಸ್ವರ್ಣವಲ್ಲೀಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ಮನುಕುಲದ ಪಾಪ ತೊಳೆಯುವ ಪಾಪವಿನಾಶಿನಿ ಗಂಗಾ ಮಾತೆ ಪ್ರತಿಯೊಬ್ಬರ ಪ್ರಾತಃಸ್ಮರಣೀಯವಾಗಿದೆ. ಗಂಗೆಯನ್ನು ನೆನಯುವ ಮೂಲಕ ದಿನವನ್ನು ಪ್ರಾರಂಭಿಸಬೇಕು. ಸೂರ್ಯ ನಮಸ್ಕಾರ, ಭಗವದ್ಗೀತಾ ಪಠಣ, ಭಜನೆಯಂಥ ಒಳ್ಳೆಯ ಅಭ್ಯಾಸಗಳಿಂದ ಜೀವನದಲ್ಲಿ ಅತ್ಯುತ್ತಮ ಪರಿರ್ತನೆ ಹೊಂದಲು ಸಹಾಯಕವಾಗಿದೆ. ದೇವರಲ್ಲಿ ಭಕ್ತಿ ಬೆಳೆಸಿಕೊಂಡಷ್ಟು ಪರಿಪೂರ್ಣವಾಗಲು ಸಾಧ್ಯ ಎಂದರು.
ಸಂಘಟನೆ ಜಾಗ್ರತಿಯಿದ್ದಾಗ ಎಲ್ಲವನ್ನೂ ಎದುರಿಸಲು ಸಾಧ್ಯ. ಮಕ್ಕಳಿಗೆ ತಡವಾಗಿ ವಿವಾಹ ಮಾಡುತ್ತಿರುವುದು, ವಿವಾಹ ವಿಚ್ಛೇದನದಿಂದ ಕುಟುಂಬ ಪದ್ಧತಿ ಶಿಥಿಲವಾಗುತ್ತಿದೆ. ಸಂತತಿ ಅತಿಯಾದ ನಿಯಂತ್ರಣದಿಂದ ಹಿಂದೂ ಸಮಾಜ ಶಿಥಿಲವಾಗುತ್ತಿದೆ. ಹಿಂದೂ ಸಮಾಜದ ಜನಸಂಖ್ಯೆ ಹೆಚ್ಚಬೇಕಾಗಿದೆ. ಹಿಂದೂ ಸಮಾಜ ಹಿಂದೇ ಹೋಗದೇ, ಹಿಂದುಸ್ತಾನವಾಗಿ ಉಳಿಸಬೇಕು ಎಂದು ಹೇಳಿದರು. ಸೋಂದಾ ಜೈನ ಮಠದ ಭಟ್ಟಾಕಳಂಕ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಅರಿಷಡ್ ವರ್ಗಗಳಾದ ಕಾಮ, ಕ್ರೋಧ, ಮೋಹ, ಲೋಭ, ಮದ, ಮಾತ್ಸರ್ಯಗಳನ್ನು ತೊರೆದು, ಉತ್ತಮ ಜೀವನಕ್ಕೆ ಮುಂದಡಿಯಿಡಲು ಯುಗಾದಿಯ ಪರ್ವಕಾಲ ಸಕಾಲವಾಗಿದೆ ಎಂದರು.ಬಣ್ಣದಮಠದ ಶಿವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚ ನೀಡಿ, ನಮ್ಮ ಮೂಲ ಬೇರನ್ನು ಮರೆತು ಉಳಿದೆಡೆ ಕೈ ಚಾಚುತ್ತಿದ್ದೇವೆ. ಪಾಶ್ಚಾತ್ಯ ಸಂಸ್ಕೃತಿಯಿಂದ ನಮ್ಮ ಮೂಲ ಶಿಕ್ಷಣ ಪದ್ಧತಿಯೇ ಕಣ್ಮರೆಯಾಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಪಾಶ್ಚಾತ್ಯರು ನಮ್ಮ ಸಂಸ್ಕೃತಿಯತ್ತ ಮುಖ ಮಾಡುತ್ತಿದ್ದಾರೆ. ನಮ್ಮವರು ವಿಮುಖರಾಗುತ್ತಿರುವುದು ವಿಷಾದನೀಯ ಸಂಗತಿ ಎಂದರು.
ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ರಮೇಶ್ ದುಭಾಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುಗಾದಿ ಉತ್ಸವ ಸಮಿತಿ ಗೌರವಾಧ್ಯಕ್ಷ ಶ್ರೀನಿವಾಸ ಹೆಬ್ಬಾರ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಮತ್ತಿತರರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಆನಂತರ ಬೃಹತ್ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ೫೦ಕ್ಕೂ ಹೆಚ್ಚಿನ ವಿವಿಧ ವಿನ್ಯಾಸದ ಸ್ತಬ್ಧಚಿತ್ರಗಳು ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿದವು.