ಗಜೇಂದ್ರಗಡ: ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿ ಬರೆದ ಕಿತ್ತೂರು ರಾಣಿ ಚೆನ್ನಮ್ಮಳ ಶೌರ್ಯ ಹಾಗೂ ಸಾಹಸ ಯುವ ಸಮೂಹಕ್ಕೆ ಪ್ರೇರಣೆಯಾಗಬೇಕು ಎಂದು ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಹೇಳಿದರು.ಸ್ಥಳೀಯ ಡಾ.ಬಾಬು ಜಗಜೀವನರಾಮ್ ಸಮುದಾಯ ಭವನದಲ್ಲಿ ತಾಲೂಕಾಡಳಿತ, ತಾಪಂ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಉತ್ಸವ ಸಮಿತಿಯ ಸಂಯುಕ್ತಾಶ್ರಯದಲ್ಲಿ ಗುರುವಾರ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮ, ಸಿಪಾಯಿ ದಂಗೆಯ ಪೂರ್ವದಲ್ಲಿ ತನ್ನ ಕುಟುಂಬವನ್ನು ಕಳೆದುಕೊಂಡರೂ ಸಹ ಎದೆಗುಂದದೇ ನಾಡಿನ ರಕ್ಷಣೆಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಚೆನ್ನಮ್ಮನ ಧೈರ್ಯವನ್ನು ಜಾನಪದರು ಲಾವಣಿ ಮತ್ತು ಗೀಗಿ ಪದಗಳ ರೂಪದಲ್ಲಿ ನಾಯಕಿ ಎಂದು ಕರೆದಿರುವುದು ವೀರಗಾಥೆಗೆ ಸಾಕ್ಷಿ ಎಂದರು.
ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ. ರುದ್ರೇಶ ಮೇಟಿ ಮಾತನಾಡಿ, ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮ ಬಾಲ್ಯದಲ್ಲೆ ಕುದುರೆ ಸವಾರಿ, ಕತ್ತಿವರಸೆ ಸೇರಿ ಬಿಲ್ಲುಗಾರಿಕೆಯಲ್ಲಿ ತರಬೇತಿ ಪಡೆದಿದ್ದರು. ಶಸ್ತ್ರಾಭ್ಯಾಸ ಜತೆಗೆ ರಾಮಾಯಣ, ಮಹಾಭಾರತ ಅಧ್ಯಯನ ಹಾಗೂ ಧಾರ್ಮಿಕ ವಿಚಾರಗಳು ಚೆನ್ನಮ್ಮಳನ್ನು ವೀರ ವನಿತೆಯನ್ನಾಗಿ ಮಾಡಿತು. ಗಂಡನ ಮರಣದ ನಂತರ ರಾಜ್ಯವನ್ನು ಮುನ್ನಡೆಸುತ್ತಾ ದತ್ತು ಮಗುವನ್ನು ಪಡೆದ ವಿಚಾರವು ಬ್ರಿಟಿಷರು ಸಿಟ್ಟಿಗೆ ಕಾರಣವಾಗಿ ಸಾಮ್ರಾಜ್ಯದ ಮೇಲೆ ದಾಳಿ ನಡೆಸಿದ ಬ್ರಿಟಿಷರು ಖಜಾನೆಯಲ್ಲಿದ್ದ ಸಂಪತ್ತಿನ ಭಂಡಾರಕ್ಕೆ ಬೀಗ ಜಡಿದಿದ್ದರು ಎಂದರು.ಪುರಸಭೆ ಸದಸ್ಯ ಸುಭಾಸ ಮ್ಯಾಗೇರಿ, ತಾ.ಪಂ ಇಒ ಡಾ.ಡಿ. ಮೋಹನ, ಮುಖಂಡರಾದ ಮುತ್ತಣ್ಣ ಮ್ಯಾಗೇರಿ, ಚಂಬಣ್ಣ ಚವಡಿ, ಬಿ.ಎಸ್. ಬಸನಗೌಡ್ರ, ಪ್ರಭು ಚವಡಿ, ಅಮರೇಶ ಮಾರನಬಸರಿ, ವೀರೇಶ ಸಂಗಮದ ಸೇರಿ ಇತರರು ಇದ್ದರು.