ಮಕ್ಕಳು ವಿವೇಕರ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಲಿ

KannadaprabhaNewsNetwork | Published : Jan 15, 2025 12:45 AM

ಸಾರಾಂಶ

ಮನುಷ್ಯ ಪರಿಪೂರ್ಣತೆ ಹೊಂದಬೇಕಾದರೆ ಅಸೂಯೆ, ಅನುಮಾನ ದೂರಿಕರಿಸಬೇಕು, ಒಳ್ಳೆಯ ವ್ಯಕ್ತಿಗಳೊಂದಿಗೆ ಒಡನಾಟ ಇಟ್ಟುಕೊಂಡು ಅಂತವರನ್ನು ಬೆಂಬಲಿಸಬೇಕು

ಮುಂಡರಗಿ: ದೇಶದ ಅಭಿವೃದ್ಧಿ ಜನರ ಮೇಲೆ ನಿಂತಿದ್ದು. ಆದ್ದರಿಂದ ಮನುಷ್ಯರು ಮನುಷ್ಯರಾಗಿ ಬದುಕಬೇಕು ಎಂದು ಸ್ವಾಮಿ ವಿವೇಕಾನಂದರು ಕರೆಕೊಟ್ಟಿದ್ದಾರೆ. ಮಕ್ಕಳು ಸ್ವಾಮಿ ವಿವೇಕಾನಂದರ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಶ್ರಾಂತ ಮುಖ್ಯೋಪಾಧ್ಯಾಯ ಎಸ್.ಆರ್. ರಿತ್ತಿ ಹೇಳಿದರು.

ಸೋಮವಾರ ಪಟ್ಟಣದ ಶ್ರೀಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 162ನೇ ಜಯಂತಿ ಮತ್ತು ಯುವ ರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಮನುಷ್ಯ ಪರಿಪೂರ್ಣತೆ ಹೊಂದಬೇಕಾದರೆ ಅಸೂಯೆ, ಅನುಮಾನ ದೂರಿಕರಿಸಬೇಕು, ಒಳ್ಳೆಯ ವ್ಯಕ್ತಿಗಳೊಂದಿಗೆ ಒಡನಾಟ ಇಟ್ಟುಕೊಂಡು ಅಂತವರನ್ನು ಬೆಂಬಲಿಸಬೇಕು ಎಂದರು.

ಶಾಲೆಯ ಆಡಳಿತಾಧಿಕಾರಿ ಪ್ರೊ. ಸಿ.ಎಸ್. ಅರಸನಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಶುದ್ಧತೆ, ತಾಳ್ಮೆ ಮತ್ತು ಪರಿಶ್ರಮದಿಂದ ಕೆಲಸ ಮಾಡಿದರೆ ನಮ್ಮ ಬಾಳಲ್ಲಿರುವ ಅಡತಡೆಗಳು ಮಾಯವಾಗಿ ಕೆಲಸದಲ್ಲಿ ಯಶಸ್ವಿ ಸಿಗುತ್ತದೆ ಎಂದು ಸ್ವಾಮಿ ವಿವೇಕಾನಂದರು ಧರ್ಮದ ಜತೆ ರಾಷ್ಟ್ರೀಯತೆ ಬೆರೆಸಿ ದೇಶದ ಬಗ್ಗೆ ಪ್ರೀತಿ ಹುಟ್ಟುವಂತೆ ಮಾಡಿರುವುದು ಗುರಿಯಾಗಿತ್ತು. ಜೀವನ ಎಂಬುದು ಕಠಿಣ ಸತ್ಯ ಅದನ್ನು ಎದುರಿಸಿ. ನಿಮ್ಮ ಮಾರ್ಗದಲ್ಲಿ ಮುಂದುವರೆಯಿರಿ. ಅದು ಅಭೇದ್ಯವಾಗಿರಬಹುದು. ಆದರೆ ಆತ್ಮ ಅದಕ್ಕಿಂತ ಬಲಯುತವಾದುದು. ಹೇಡಿಗಳು, ಬಲಹೀನರು ಮಾತ್ರ ಪಾಪ ಮಾಡುವುದು ಮತ್ತು ಸುಳ್ಳನ್ನು ಹೇಳುವುದು ಎಂಬುದನ್ನು ನೆನಪಿನಲ್ಲಿಡಿ. ಧೀರರು ಯಾವಾಗಲೂ ನೀತಿವಂತರಾಗಿರುತ್ತಾರೆ. ಧೀರರಾಗಿ, ಸಹಾನುಭೂತಿಯುಳ್ಳವರಾಗಿ ಬದುಕುವುದನ್ನು ರೂಢಿ ಮಾಡಿ ಕೊಳ್ಳಬೇಕು ಎಂದು ವಿವೇಕಾನಂದರು ಹೇಳಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಗುರಿ ಮುಟ್ಟುವವರೆಗೂ ಸತತವಾಗಿ ಪ್ರಯತ್ನ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ದೇವರಡ್ಡಿ ಇಮ್ರಾಪೂರ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪರಮೇಶ ನಾಯಕ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅನೇಕ ಮಕ್ಕಳು ಸ್ವಾಮಿ ವಿವೇಕಾನಂದರ ತತ್ವಾದರ್ಶಗಳ ಕುರಿತು ಮಾತನಾಡಿದರು. ಪಿ.ಎಸ್. ಗೌಡರ ಸ್ವಾಗತಿಸಿ, ಕೊಟ್ರೇಶ ಕಟಗಿ ನಿರೂಪಿಸಿದರು. ಚಿಲವಾಡಗಿ ವಂದಿಸಿದರು.

Share this article