ಕೊಟ್ಟೂರು: ರಾಜ್ಯ ಶಕ್ತಿ ಸೌಧವಾಗಿರುವ ವಿಧಾನಸೌಧದಲ್ಲಿಯೇ ಕೇಳಿ ಬಂದಿರುವ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕುರಿತಂತೆ ಪ್ರಕರಣವನ್ನು ಸರ್ಕಾರ ಎನ್ಐಗೆ ವಹಿಸಬೇಕು ಎಂದು ಮಾಜಿ ಸಚಿವ ಬಿ. ಶ್ರೀರಾಮಲು ಒತ್ತಾಯಿಸಿದರು.
134 ಸ್ಥಾನ ಪಡೆದಿರುವ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸರ್ಕಾರ ಕಳೆದುಕೊಳ್ಳುವ ಭೀತಿ ಇದೆ. ಇದೇ ಕಾರಣಕ್ಕಾಗಿ ಶಾಸಕರಿಗೆ ₹೫೦ ಕೋಟಿ ಆಮಿಷ ತೋರಿಸುತ್ತಿದ್ದಾರೆಂದು ಆರೋಪಿಸುತ್ತಿರುವುದು ಅವರ ಘನತೆಗೆ ತಕ್ಕುದಲ್ಲ. ಅವರಿಗೆ ಈ ರೀತಿಯ ಸಂಶಯವಿದ್ದರೆ ತಕ್ಷಣವೇ ಇದನ್ನು ಸಿಬಿಐಗೆ ವಹಿಸಿ ತನಿಖೆ ನಡೆಸಿ ಸತ್ಯಾಂಶ ಹೊರಬರುವಂತೆ ಮಾಡಲಿ. ಕಾಂಗ್ರೆಸ್ ಪೂರ್ಣಾವಧಿ ಸರ್ಕಾರ ನಡೆಸಲಿ ಎಂಬುದೇ ನಮ್ಮ ಆಶಯ. ಆದರೆ ಅವರಲ್ಲಿರುವ ಗೊಂದಲ, ಆತಂಕದಿಂದಾಗಿ ಮಹಾರಾಷ್ಟ್ರದಲ್ಲಿಯಂತೆ ನಮ್ಮ ರಾಜ್ಯದಲ್ಲಿಯೂ ಮತ್ತೊಬ್ಬ ಅಜಿತ್ ಪವಾರ್ ಹುಟ್ಟಿಕೊಂಡರೆ ಆಶ್ಚಯವಿಲ್ಲ. ನಾವು ಯಾವುದೇ ಶಾಸಕರ ಖರೀದಿಗೆ ಯತ್ನಿಸಿಲ್ಲ. ಅದರ ಅವಶ್ಯಕತೆಯೂ ಇಲ್ಲ ಎಂದರು.ಬಿಜೆಪಿ ನಗರ ಘಟಕ ಅಧ್ಯಕ್ಷ ಪಿ. ಭರಮನಗೌಡ ಪಾಟೀಲ, ಮಂಡಲ ಉಪಾಧ್ಯಕ್ಷ ಪಂಪಾಪತಿ ಅಂಗಡಿ, ಜಿಲ್ಲಾ ಕೋಷ್ಟಾಧಿಕಾರಿ ರಾಜೇಶ್ ಕರ್ವಾ, ಪಪಂ ಸದಸ್ಯ ಜಿ. ಸಿದ್ದಯ್ಯ, ಮುಖಂಡ ಮೂಗಪ್ಪ ಇತರರು ಇದ್ದರು.ಮೋದಿ ಹವಾದ ಮೇಲೆ ಎಷ್ಟು ವರ್ಷ ಗೆಲ್ತಿರಿ?
ಬಳ್ಳಾರಿ: ಪಕ್ಷದ ನಾಯಕರು ಸ್ವಂತ ವರ್ಚಸ್ಸು ಬೆಳೆಸಿಕೊಳ್ಳಬೇಕು ಎಂದು ಪಕ್ಷ ಸೂಚಿಸಿದೆ. ಮೋದಿ ಹವಾದ ಮೇಲೆ ಎಷ್ಟು ವರ್ಷ ಗೆಲ್ಲುತ್ತೀರಿ. ಸ್ವಂತ ಶಕ್ತಿಯನ್ನು ಮೈಗೂಡಿಸಿಕೊಳ್ಳಬೇಕು. ಪಕ್ಷದ ಸಂಘಟನೆಯನ್ನು ಗಟ್ಟಿಗೊಳಿಸಬೇಕೆಂದು ಹೇಳಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿ, ಮೋದಿ ಹವಾ ಶೇ. 80ರಷ್ಟು ಇದ್ದರೂ ಸ್ವಂತ ಶೇ. 20ರಷ್ಟು ವರ್ಚಸ್ಸು ಇರಬೇಕಾಗುತ್ತದೆ ಎಂದರು.ಬಳ್ಳಾರಿ ಲೋಕಸಭಾ ಚುನಾವಣೆಯಿಂದ ನಾನು ಸ್ಪರ್ಧಿಸಬೇಕು ಎಂದು ಜನರು ನಿರೀಕ್ಷಿಸುತ್ತಿದ್ದಾರೆ ಎಂದು ತಿಳಿಸಿದ ಬಿ. ಶ್ರೀರಾಮುಲು ಅವರು, ಹಾಲಿ ಸಂಸದ ವೈ. ದೇವೇಂದ್ರಪ್ಪ ಅವರು ಸ್ಪರ್ಧೆಗೆ ಇಚ್ಛಿಸಿದ್ದಾರೆ. ಹೈಕಮಾಂಡ್ ಅವರಿಗೆ ಟಿಕೆಟ್ ನೀಡಿದರೂ ಗೆಲ್ಲಿಸುವ ಕೆಲಸ ಮಾಡುತ್ತೇನೆ ಎಂದರು.ಬಳ್ಳಾರಿ ಲೋಕಸಭೆಗೆ ನಾನು ಆಕಾಂಕ್ಷಿಯಾಗಿರುವೆ ಎಂದು ಪಕ್ಷದ ಗಮನಕ್ಕೆ ತಂದಿದ್ದೇನೆ. ದೇವೇಂದ್ರಪ್ಪ ಅವರಿಗೂ ನನ್ನ ಮೇಲೆ ಅಪಾರ ಅಭಿಮಾನವಿದೆ. ನಾನು ರಾಜಕೀಯದಲ್ಲಿ ಮತ್ತಷ್ಟೂ ಬೆಳೆಯಬೇಕು ಎಂದು ಅವರು ಆಶಿಸಿದ್ದಾರೆ ಎಂದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಾಗ ಸಾಕಷ್ಟು ಜನರು ನೋವುಪಟ್ಟರು. ದೊಡ್ಡ ಮನುಷ್ಯನನ್ನು ಕಳೆದುಕೊಂಡಿದ್ದೇವೆ ಎಂದರು. ಜನಪರ ಹೋರಾಟಕ್ಕೆ ನಾನು ಬೇಕು ಎಂಬುದು ಜನರ ಆಸೆಯಾಗಿದೆ. ಈ ಬಾರಿ ಚುನಾವಣೆಯಲ್ಲಿ ಟಿಕೆಟ್ ನೀಡುವಂತೆ ಪಕ್ಷದ ನಾಯಕರಲ್ಲಿ ಕೋರಿರುವುದು ನಿಜ. ಆದರೆ, ಪಕ್ಷ ಯಾರಿಗೇ ಟಿಕೆಟ್ ನೀಡಿದರೂ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುವೆ ಎಂದರು.