ಜನರ ಸ್ವಾವಲಂಬಿ ಬದುಕಿಗೆ ಸಹಕಾರಿ ಸಂಘಗಳು ನೆರವಾಗಲಿ: ಅಮರೇಶ್ವರ ಸ್ವಾಮೀಜಿ

KannadaprabhaNewsNetwork | Published : May 16, 2024 12:53 AM

ಸಾರಾಂಶ

ಸೊರಬ ಪಟ್ಟಣದಲ್ಲಿ ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ ೧೭ನೇ ಶಾಖೆಯನ್ನು ಜಡೆ ಹಿರೆಮಠದ ಘನಬಸವ ಅಮರೇಶ್ವರ ಸ್ವಾಮೀಜಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಸೊರಬ

ಸಹಕಾರಿ ಸಂಘಗಳ ಸಂಖ್ಯೆ ಹೆಚ್ಚು ಮಾಡುವ ದೃಷ್ಟಿಯಿಂದ ಶಾಖೆ ತೆರೆಯಬಾರದು. ಬದಲಾಗಿ ಗ್ರಾಹಕರಿಗೆ ಆರ್ಥಿಕ ನೆರವು ನೀಡುವ ಮೂಲಕ ಸ್ವಾವಲಂಬಿ ಬದುಕಿಗೆ ನೆರವಾಗಬೇಕು. ಇದು ಸಂಘಗಳ ಉದ್ದೇಶವಾಗಬೇಕು ಎಂದು ಜಡೆ ಹಿರೇಮಠದ ಘನಬಸವ ಅಮರೇಶ್ವರ ಸ್ವಾಮೀಜಿ ನುಡಿದರು.

ಸೊರಬ ಪಟ್ಟಣದಲ್ಲಿ ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ ೧೭ನೇ ಶಾಖೆಗೆ ಚಾಲನೆ ನೀಡಿ ಮಾತನಾಡಿ, ಅನೇಕರಿಗೆ ಉದ್ಯೋಗ ನೀಡುವ ಕಾರ್ಯ ಸಹಕಾರಿ ಸಂಸ್ಥೆಗಳಿಂದ ಆಗುತ್ತಿದೆ. ಆದ್ದರಿಂದ ಗ್ರಾಹಕರು ವಿವಿಧ ಉದ್ದೇಶಗಳಿಗೆ ಪಡೆದ ಸಾಲವನ್ನು ಅಷ್ಟೇ ಪ್ರಾಮಾಣಿಕವಾಗಿ ಮತ್ತು ನಿಷ್ಠೆಯಿಂದ ಮರು ಪಾವತಿಸಬೇಕು ಎಂದರು.

ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘ ₹೨.೫೭ ಕೋಟಿ ವ್ಯವಹಾರ ನಡೆಸಿರುವುದು ದೊಡ್ಡ ಸಾಧನೆ. ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ವ್ಯವಹಾರ ನಡೆಸಲು ಜನ ಸಮಾನ್ಯರು ಕಷ್ಟಪಡುತ್ತಿರುವಾಗ ಅದಕ್ಕೆ ಪೂರಕವಾಗಿ ಸಹಕಾರಿ ಸಂಘಗಳು ಆರ್ಥಿಕ ಸೇವೆ ನೀಡುತ್ತಿವೆ. ಪ್ರೀತಿ, ವಿಶ್ವಾಸಗಳಿದ್ದಾಗ ಎಲ್ಲಾ ಕ್ಷೇತ್ರಗಳ್ಲೂ ಅಭಿವೃದ್ಧಿ ಕಾಣಲು ಸಾಧ್ಯ. ಅಂತಹ ಪ್ರೀತಿ ವಿಶ್ವಾಸದ ಸೇವೆ ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘದಲ್ಲಿ ಎದ್ದು ಕಾಣುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಜಿ.ಜಿ. ಶಂಕರ್ ಪ್ರಾಸ್ತವಿಕವಾಗಿ ಮಾತನಾಡಿ, ಅನೇಕರಿಗೆ ಉದ್ಯೋಗ ಅವಕಾಶದೊಂದಿಗೆ ಆರ್ಥಿಕ ಸೇವೆ ನೀಡುವ ಉದ್ದೇಶದೊಂದಿಗೆ ಸಂಘ ಸ್ಥಾಪಿಸಲಾಗಿದೆ. ಯಶಸ್ವಿ ೧೩ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಈಗಾಗಲೇ ಸೊರಬ ತಾಲೂಕು ಸೇರಿ ೧೭ ಶಾಖೆ ತೆರೆದು ರಾಜ್ಯ ಮಟ್ಟದಲ್ಲೂ ಶಾಖೆ ವಿಸ್ತಾರಗೊಳಿಸಲು ತೀರ್ಮಾನಿಸಲಾಗಿದೆ. ಪ್ರಸ್ತುತ ಸಂಘ ₹೨.೫೭ ಕೋಟಿ ನಿವ್ವಳ ಲಾಭಗಳಿಸಿದ್ದು ₹೧೫೯ ಕೋಟಿ ಲಾಭ ಗಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ನಾಗರಾಜ ಇಂದ್ರ, ಎಜಿಎಂ ಮಹೇಶ್, ಹಿರಿಯ ಸಹಕಾರಿ ಧುರೀಣ ಎಚ್.ಎಸ್. ಮಂಜಪ್ಪ, ಗಂಗಾಧರ, ಟಿ. ಅಣ್ಣಾಜಿಗೌಡ, ಮೊದಲಾದವರಿದ್ದರು.

Share this article