ಕನ್ನಡಪ್ರಭ ವಾರ್ತೆ ರಾಮನಗರ
ನಗರದ ಜಾನಪದ ಲೋಕದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಆಯೋಜಿಸಿರುವ ಎರಡು ದಿನಗಳ ವಿದ್ಯಾರ್ಥಿ ಜಾನಪದ ಲೋಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಾನಪದರ ಕಾಶಿ ಎಂದೇ ಕರೆಯಲ್ಪಡುವ ಜಾನಪದ ಲೋಕಕ್ಕೆ ಸರ್ಕಾರದ ಅನುದಾನ ಸಾಕಾಗುತ್ತಿಲ್ಲ. ಕಾರ್ಪೋರೇಟ್ ಸಂಸ್ಥೆಗಳು ಕೋಟ್ಯಂತರ ರುಪಾಯಿ ಸಿಎಸ್ ಆರ್ ಅನುದಾನವನ್ನು ಎಲ್ಲೆಲ್ಲಿಗೋ ಕೊಡುತ್ತವೆ. ಜಾನಪದ ಲೋಕಕ್ಕೆ ಕೊಡಲು ಏಕೆ ಹಿಂದೇಟು ಹಾಕುತ್ತಿವೆಯೊ ಗೊತ್ತಿಲ್ಲ. ಇನ್ನಾದರೂ ಅನುದಾನ ನೀಡಿ ಜಾನಪದ ಲೋಕಕ್ಕೆ ಮತ್ತಷ್ಟು ಶಕ್ತಿ ತುಂಬುವ ಕೆಲಸ ಮಾಡಲಿ ಎಂದರು.ಪ್ರತಿ ವರ್ಷ ರಸ್ತೆ ಮತ್ತು ಕಟ್ಟಡಗಳ ನಿರ್ಮಾಣಗಳಲ್ಲಿ ಅಭಿವೃದ್ಧಿ ಕಾಣುತ್ತಿದ್ದೇವೆ. ಆದರೆ, ಇಡೀ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಪೂರಕವಾಗಿರುವ ಜಾನಪದ ಲೋಕಕ್ಕೆ ಬೇಕಾದ ನೆಲೆಗಟ್ಟನ್ನು ಕಟ್ಟಿಕೊಡುವಲ್ಲಿ ನಾವೆಲ್ಲರೂ ಹಿಂದೆ ಬಿದ್ದಿದ್ದೇವೆ. ಎಲ್ಲಿ ಸಾಂಸ್ಕೃತಿಕ ನೆಲೆಗಟ್ಟು ಗಟ್ಟಿಯಾಗಿರುತ್ತದೆಯೋ ಅಲ್ಲಿ ಸಮಾಜ ಗಟ್ಟಿಯಾಗಿರುತ್ತದೆ. ಅಂತಹ ಸಮಾಜವನ್ನು ರೂಪಿಸುವ ಜಾನಪದ ಲೋಕ ಆರ್ಥಿಕ ಮುಗ್ಗಟ್ಟಿನಿಂದ ಸೊರಗುತ್ತಿದೆ. ಇದರ ಪ್ರಗತಿ ಯಾರಿಗೂ ಅಭಿವೃದ್ಧಿ ಅನ್ನಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಾನಪದ ಕಲಿಕೆಗೆ ಶಿಸ್ತು ಬಹಳ ಮುಖ್ಯ. ನಮ್ಮಲ್ಲಿ ಎರಡು ಬಗೆಯ ಕಲಿಕೆಗಳಿವೆ. ಅದರಲ್ಲಿ ಒಂದಾದ ವೃತ್ತಿಗಾಗಿ ಕಲಿಕೆ. ಇದು ಹೊಟ್ಟೆಪಾಡಿಗಾಗಿ ಸಂಪಾದನೆ ಮಾಡುವ ವೃತ್ತಿ. ಮತ್ತೊಂದು ಬದುಕಿಗಾಗಿ ಪ್ರವೃತ್ತಿಯ ಕಲಿಕೆ. ಪ್ರತಿಯೊಬ್ಬರಲ್ಲೂ ಒಂದೊಂದು ಪ್ರವೃತ್ತಿ ಇರುತ್ತದೆ. ಮನುಷ್ಯ ಸಾಯುವವರೆಗೆ ಪ್ರವೃತಿ ಇರುತ್ತದೆಯೇ ಹೊರತು ವೃತ್ತಿ ಅಲ್ಲ. ಅಂತಹ ಪ್ರವೃತ್ತಿ ಜಾನಪದ ಸಂಸ್ಕೃತಿಯಿಂದ ಬರುತ್ತದೆ ಎಂದು ನಾಗಾಭರಣ ಹೇಳಿದರು.ಸಿಬ್ಬಂದಿಗೆ ವೇತನ ನೀಡಲೂ ಹಣ ಇಲ್ಲ:
ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಮಾತನಾಡಿ, ಜಾನಪದ ಲೋಕದಲ್ಲಿ 30 ಸಿಬ್ಬಂದಿಗೆ ವೇತನ ನೀಡಲೂ ಸಾಧ್ಯವಾಗುತ್ತಿಲ್ಲ. ಬೆಂ- ಮೈ ಎಕ್ಸ್ ಪ್ರೆಸ್ ವೇ ನಿರ್ಮಾಣವಾದ ಮೇಲೆ ಪ್ರವಾಸಿಗರ ಸಂಖ್ಯೆಯೂ ಕ್ಷೀಣಿಸಿದೆ. ಜಾನಪದ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಜಾನಪದ ಲೋಕಕ್ಕೆ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ ಎಂದು ತಿಳಿಸಿದರು.ಸಾನ್ನಿಧ್ಯ ವಹಿಸಿದ್ದ ಚುಂಚನಗಿರಿ ಶಾಖಾ ಮಠದ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ, ಜಾನಪದ ಲೋಕ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಕಾಣುತ್ತಿದ್ದು, ಇದಕ್ಕೆ ಸರ್ಕಾರ ಮತ್ತು ಸಾರ್ವಜನಿಕರ ಸಹಕಾರ ಅಗತ್ಯವಿದೆ. ಲೋಕದಲ್ಲಿ ಗಿರಿಜ ಕುಟೀರಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಡಿಪ್ಲೋಮೊ ಕಾಲೇಜಿಗೂ ಮತ್ತಷ್ಟು ಕೊಡುಗೆ ಬೇಕಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಅನುದಾನಕ್ಕಾಗಿ ಸಿಎಂ ಗಮನ ಸೆಳೆಯುವೆ:ಮುಖ್ಯ ಅತಿಥಿಯಾದ ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಕೆ.ವಿ.ಪ್ರಭಾಕರ್ ಮಾತನಾಡಿ, ಜಾನಪದ ಲೋಕಕ್ಕೆ ರಾಜ್ಯಸರ್ಕಾರ ನೀಡುತ್ತಿರುವ ಅನುದಾನವನ್ನು ಹೆಚ್ಚಿಸಿ, ಬಿಡುಗಡೆ ಮಾಡಿಸುವ ವಿಚಾರದಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.
ಜಾನಪದ ಲೋಕವನ್ನು ಅದ್ಭುತವಾಗಿ ಕಟ್ಟಿದ್ದು, ಇದರಲ್ಲಿ ಕೆ.ಎನ್.ನಾಗೇಗೌಡರ ಪರಿಶ್ರಮ ಸಾಕಷ್ಟಿದೆ. ಮುಂದಿನ ಪೀಳಿಗೆಗೆ ಜಾನಪದ ಲೋಕದ ಉಳಿವು ಅಗತ್ಯವಿದ್ದು, ಇದಕ್ಕಾಗಿ ನಾನೂ ನಿಮ್ಮೊಂದಿಗೆ ಕೈಜೋಡಿಸುತ್ತೇನೆ.ಮುಖ್ಯಮಂತ್ರಿ ಸಿದ್ದರಾಮಯ್ಯರವರು ಹಳ್ಳಿಗಾಡಿನಿಂದ ಬಂದವರು. ಗ್ರಾಮೀಣ ಸೊಗಡು ಎಲ್ಲರಲ್ಲೂ ಬೇರೂರಬೇಕೆಂದು ಬಯಸುವವರು. ಈ ಲೋಕಕ್ಕೆ ಅನುದಾನದ ನೆರವು ಒದಗಿಸುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ಕೆ.ರಾಜು ಕರಕುಶಲ ಮೇಳ ಉದ್ಘಾಟಿಸಿದರು. ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ ಉಪಸ್ಥಿತರಿದ್ದರು.-------
ಜಾನಪದ ಲೋಕದಲ್ಲಿ ಅಲೆಮಾರಿ ಕಲಾ ಪ್ರಕಾರಗಳೂ ಮೇಳೈಸಬೇಕಿದೆ. ಈಗಾಗಲೇ 80 ರಿಂದ 90 ಅಲೆಮಾರಿ ಕಲಾ ಪ್ರಕಾರಗಳು ಅತಂತ್ರ ಸ್ಥಿತಿಯಲ್ಲಿವೆ. ಅವುಗಳನ್ನು ಜಾನಪದ ಕಲೆಯೊಳಗೆ ಸೇರಿಸಿ ಶಿಕ್ಷಣ ರೂಪಕ್ಕೆ ತರಬೇಕಿದೆ. ವಿದ್ಯಾರ್ಥಿಗಳು ಭವಿಷ್ಯದ ಜಾನಪದರು. ಜಾನಪದ ಕಲಾ ಪ್ರಕಾರಗಳನ್ನು ಗಂಭೀರವಾಗಿ ಸ್ವೀಕರಿಸಿ ತಮ್ಮದಾಗಿಸಿಕೊಳ್ಳಬೇಕು. ನಮ್ಮ ಭಾಷೆ , ಸಂಸ್ಕೃತಿ ಜೊತೆಯಲ್ಲಿ ನಮ್ಮ ತನವನ್ನು ಗಟ್ಟಿ ಮಾಡಿಕೊಳ್ಳಬೇಕಿದೆ.- ಟಿ.ಎಸ್.ನಾಗಾಭರಣ , ರಂಗಭೂಮಿ ನಿರ್ದೇಶಕರು.
-----ನಾವೆಲ್ಲರೂ ಹಳ್ಳಿಯ ಜೀವನದಲ್ಲಿ ಕಲೆ - ಸಂಸ್ಕೃತಿಯನ್ನು ಮೖಗೂಡಿಸಿಕೊಂಡು ಬೆಳೆದಿದ್ದೇವೆ.ಈಗಿನ ಆಧುನಿಕ ಯುಗದಲ್ಲಿ ಜಾನಪದ ಕಲೆ, ಗೀತೆಗಳು ಉಳಿಯಲು ಕಲಾವಿದರು ಕಾರಣ. ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ವಹಿಸಿ ಜಾನಪದವನ್ನು ಅಧ್ಯಯನ ಮಾಡುವ ಮೂಲಕ ಮುಂದಿನ ತಲೆ ಮಾರಿಗೆ ಕೊಂಡೊಯ್ಯುವ ಕೆಲಸ ಮಾಡಬೇಕು.
-ಕೆ.ರಾಜು, ಜಿಲ್ಲಾಧ್ಯಕ್ಷರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ. ಬೆಂ.ದಕ್ಷಿಣ