ಮತದಾರರ ಪಟ್ಟಿಗೆ ಪ್ರತಿಯೊಬ್ಬ ಅರ್ಹ ಸೇರ್ಪಡೆಯಾಗಲಿ

KannadaprabhaNewsNetwork |  
Published : Jun 17, 2026, 02:45 AM IST
ಪೋಟೊ15.12: ಕೊಪ್ಪಳ ನಗರದ  ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಬೂತ್ ಮಟ್ಟದ ಏಜೆಂಟರುಗಳಿಗೆ (ಬಿ.ಎಲ್.ಎ) ವಿಶೇಷ ಸಮಗ್ರ ಪರಿಷ್ಕರಣೆ ಎಸ್.ಐ.ಆರ್-2026ರ ಮಾಹಿತಿ ಕಾರ್ಯಾಗಾರ ನಡೆಯಿತು. | Kannada Prabha

ಸಾರಾಂಶ

2002ರ ಮಾತದಾರರ ಪಟ್ಟಿಯಲ್ಲಿರುವವರನ್ನು ಅರ್ಹ ಮತದಾರರೆಂದು ಪರಿಗಣಿಸಲಾಗುತ್ತಿದೆ

ಕೊಪ್ಪಳ: ಎಸ್.ಐ.ಆರ್. ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಹಿನ್ನೆಲೆಯಲ್ಲಿ ಬಿ.ಎಲ್.ಒ.ಗಳು ಮನೆ ಮನೆಗೆ ಭೇಟಿ ನೀಡಲಿದ್ದು, ಈ ವೇಳೆ ಪ್ರತಿಯೊಬ್ಬ ಅರ್ಹ ಮತದಾರರಿಗೆ ಎನ್ಯುಮರೇಷನ್ ಫಾರಂ (ಎಣಿಕೆ ನಮೂನೆ) ಸಿಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ನಡೆದ ಬೂತ್ ಮಟ್ಟದ ಏಜೆಂಟರಿಗೆ (ಬಿ.ಎಲ್.ಎ.) ವಿಶೇಷ ಸಮಗ್ರ ಪರಿಷ್ಕರಣೆ ಎಸ್.ಐ.ಆರ್.-2026ರ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಭಾರತದಲ್ಲಿ ಇದುವರೆಗೂ ಒಟ್ಟು 7 ಬಾರಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್.) ಆಗಿದೆ. ಕಳೆದ ಬಾರಿ ಕರ್ನಾಟಕದಲ್ಲಿ 2002ರಲ್ಲಿ ಎಸ್.ಐ.ಆರ್. ಆಗಿತ್ತು. 2002ರ ಮಾತದಾರರ ಪಟ್ಟಿಯಲ್ಲಿರುವವರನ್ನು ಅರ್ಹ ಮತದಾರರೆಂದು ಪರಿಗಣಿಸಲಾಗುತ್ತಿದೆ. ಪ್ರಸ್ತುತ 2025ರ ಮಾತದಾರರ ಪಟ್ಟಿಯನ್ನು 2002ರ ಪಟ್ಟಿಯೊಂದಿಗೆ ಹೋಲಿಕೆ ಮಾಡಿ ಅವರನ್ನು ಮ್ಯಾಪಿಂಗ್ ಮಾಡಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಬಿ.ಎಲ್.ಎ. ಮತ್ತು ಬಿ.ಎಲ್.ಒ.ಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಪಾರದರ್ಶಕವಾಗಿ ನಡೆಯಬೇಕು. ಈ ದಿಶೆಯಲ್ಲಿ ಮತದಾರರ ಪಟ್ಟಿ ದೋಷರಹಿತವಾಗಿರಬೇಕು. ಹಾಗಾಗಿ ಎರಡು ಕಡೆ ಹೆಸರಿರುವ ಮತದಾರರನ್ನು ಪತ್ತೆ ಹಚ್ಚಿ ಪರಿಷ್ಕರಿಸಲಾಗುತ್ತದೆ. ಮತದಾರರ ಪಟ್ಟಿಯ ಪರಿಷ್ಕರಣೆಯು ಈ ಬಾರಿ ಸಂಪೂರ್ಣವಾಗಿ ಡಿಜಿಟಲೈಜ್ ಆಗಿ ನಡೆಯುತ್ತಿರುವುದರಿಂದ ಒಬ್ಬ ಮತದಾರನಿಗೆ ಎರಡು ಕಡೆ ಹೆಸರು ಉಳಿಸಿಕೊಳ್ಳುವುದಕ್ಕೆ ಯಾವುದೇ ಅವಕಾಶವಿಲ್ಲ. ಎಸ್.ಐ.ಆರ್. ಪ್ರಕ್ರಿಯೆಯಲ್ಲಿ 2025ರ ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬರಿಗೂ ಎನ್ಯುಮರೇಷನ್ ಫಾರಂ ಕೊಡಲಾಗುತ್ತದೆ. ಮತದಾರರು ಭರ್ತಿ ಮಾಡಿ, ಬಿ.ಎಲ್.ಒ.ಗಳಿಗೆ ನೀಡಿದ್ದಲ್ಲಿ ಅದನ್ನು ಅವರು ಆ್ಯಪ್ ಮೂಲಕ ಮುಂದಿನ ಕ್ರಮ ಕೈಗೊಳ್ಳುವರು ಎಂದರು.

ಬಿ.ಎಲ್.ಒ.ಗಳು ಮನೆ ಮನೆಗೆ ಭೇಟಿ ನೀಡಿ, ಎನ್ಯುಮರೇಷನ್ ಫಾರಂ ನೀಡುವ ಸಂದರ್ಭದಲ್ಲಿ ಎಲ್ಲ ಬೂತ್ ಮಟ್ಟದ ಏಜೆಂಟರು ಜಾಗ್ರತರಾಗಿ ಕಾರ್ಯನಿರ್ವಹಿಸಿ, ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಬಿ.ಎಲ್.ಒ.ಗಳು ನಿಮ್ಮೊಂದಿಗೆ ಸಭೆ ಮಾಡಲಿದ್ದು, ಮತದಾರರಿಂದ ಎನ್ಯುಮರೇಷನ್ ಫಾರಂ ಸಂಗ್ರಹಿಸಿ, ಅದನ್ನು ಬಿ.ಎಲ್.ಒ.ಗಳಿಗೆ ನೀಡಲು ಎಲ್ಲ ಬೂತ್ ಮಟ್ಟದ ಏಜೆಂಟರಿಗೆ ಅವಕಾಶ ನೀಡಲಾಗಿದೆ. ಈ ವೇಳೆಯ ಮ್ಯಾಪಿಂಗ್ ಆಗದೇ ಇರುವ ಮತದಾರರ ಮ್ಯಾಪಿಂಗ್ ಮಾಡಿಸಲು ಸಹ ಸಹರಿಸಬೇಕು ಎಂದು ಹೇಳಿದರು.

ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮಾತನಾಡಿ, ಎಸ್.ಐ.ಆರ್. ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಿಂದ ಈಗಾಗಲೇ ಬಿ.ಎಲ್.ಎ.-1 ಮತ್ತು 2ನ್ನು ನೇಮಿಸಿಕೊಂಡಿದ್ದಾರೆ. ಬಿ.ಎಲ್.ಒ.ಗಳ ವಿವರಗಳುಳ್ಳ ಪಟ್ಟಿಯನ್ನು ಬೂತ್ ಮಟ್ಟದ ಏಜೆಂಟರಿಗೆ ನೀಡಬೇಕು. ಕಾರ್ಯಕ್ರಮವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದರು.

ಸಂಸದ ಕೆ. ರಾಜಶೇಖರ ಬಸವರಾಜ ಹಿಟ್ನಾಳ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಈಗಾಗಲೇ ಶೇ. 92ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮ್ಯಾಪಿಂಗ್ ಮಾಡಿದ್ದು, ರಾಜ್ಯದಲ್ಲಿ ನಮ್ಮ ಜಿಲ್ಲೆ ಮುಂಚೂಣಿಯಲ್ಲಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ಬಿಟ್ಟು ಹೋಗದಂತೆ ಎಲ್ಲ ಬಿ.ಎಲ್.ಎ.ಗಳು ನೋಡಿಕೊಳ್ಳಬೇಕು ಎಂದು ಹೇಳಿದರು. ಜೆಡಿಎಸ್‌ನ ಸಿ.ವಿ. ಚಂದ್ರಶೇಖರ ಹಾಗೂ ಬಿಜೆಪಿಯ ವೀರೇಶ ಮಾತನಾಡಿದರು. ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್ ವಿದ್ಯಾಧರ ಅವರು ಎಸ್.ಐ.ಆರ್. ಕುರಿತು ವಿವರವಾಗಿ ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಕಾಂಗ್ರೆಸ್‌ನ ಕೃಷ್ಣರೆಡ್ಡಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸುವವರೇ ಸಾಧಕರು: ಸ್ವಾಮೀಜಿ
ಮರಾಠ ಸಮಾಜ ಸೇವಾ ಸಂಘ ೩೦ನೇ ವಾರ್ಷಿಕೋತ್ಸವ