ಕೊಡಗು ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ಸಭಾಭವನ ನಿರ್ಮಾಣ ಪ್ರಗತಿಯಲ್ಲಿದ್ದು, ಕಾಮಗಾರಿ ಪೂರ್ಣಗೊಳಿಸಲು ಸಮಾಜಬಾಂಧವರ ಸಹಕಾರ ಅಗತ್ಯ ಎಂದು ಸಂಘದ ಜಿಲ್ಲಾಧ್ಯಕ್ಷ ಎಂ.ಎಂ.ಪರಮೇಶ್ವರ್ ತಿಳಿಸಿದರು.

ಮಡಿಕೇರಿ: ಕೊಡಗು ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ಸಭಾಭವನ ನಿರ್ಮಾಣ ಪ್ರಗತಿಯಲ್ಲಿದ್ದು, ಕಾಮಗಾರಿ ಪೂರ್ಣಗೊಳಿಸಲು ಸಮಾಜಬಾಂಧವರ ಸಹಕಾರ ಅಗತ್ಯ ಎಂದು ಸಂಘದ ಜಿಲ್ಲಾಧ್ಯಕ್ಷ ಎಂ.ಎಂ.ಪರಮೇಶ್ವರ್ ತಿಳಿಸಿದರು.

ಮಡಿಕೇರಿ ತಾಲೂಕಿನ ತಾಳತ್ತಮನೆಯ ಸಂಘದ ನಿವೇಶನದಲ್ಲಿ ಕೊಡಗು ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ೩೦ನೇ ವರ್ಷದ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸುಮಾರು ೪ ಕೋಟಿ ರು ವೆಚ್ಚದಲ್ಲಿ ಸಂಘದ ಸಭಾಭವನ ನಿರ್ಮಾಣವಾಗಲಿದೆ. ಈಗಾಗಲೇ ಸರ್ಕಾರದಿಂದ ೨ ಕೋಟಿ ರು. ಅನುದಾನ ಘೋಷಣೆಯಾಗಿದ್ದು, ೬೫ ಲಕ್ಷ ರು ಸಿಕ್ಕಿದೆ. ೧.೩೫ ಕೋಟಿ ರು ಹಣ ಬರಲು ಬಾಕಿಯಿದೆ. ಸರ್ಕಾರದ ಹಣದೊಂದಿಗೆ ಸಮಾಜಬಾಂಧವರ ಸಹಕಾರದೊಂದಿಗೆ ೧.೬೦ ಕೋಟಿ ರು ವೆಚ್ಚದಲ್ಲಿ ಸಭಾಭವನ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನುಳಿದ ಕಾಮಗಾರಿ ನಡೆಸಲು ಸಮಾಜಬಾಂಧವರ ಸಹಕಾರ ಅಗತ್ಯವಾಗಿದ್ದು, ಪ್ರತಿ ಕುಟುಂಬದಿಂದ ೫,೦೦೦ ರು. ನೀಡುವಂತೆ ಮನವಿ ಮಾಡಿದರು.

ಕರ್ನಾಟಕ ಮರಾಟಿ ಒಕ್ಕೂಟದ ಅಧ್ಯಕ್ಷ ಡಾ.ಕೆ.ಸುಂದರ್‌ನಾಯ್ಕ ಉದ್ಘಾಟಿಸಿ ಮಾತನಾಡಿ, ಸಂಘದ ಕಟ್ಟಡ ಕಾಮಗಾರಿಗೆ ಸಹಕಾರ ನೀಡಲಾಗುವುದು. ಜತೆಗೆ ಸರ್ಕಾರದಿಂದ ಬರಬೇಕಾದ ಹಣವನ್ನು ಬಿಡುಗಡೆ ಮಾಡಿಸಲು ಪ್ರಯತ್ನಿಸಲಾಗುವುದು ಎಂದರು.ಬೆಂಗಳೂರಿನ ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗ ಶಾಲೆಯ ಮುಖ್ಯ ವಿಜ್ಞಾನಿ ಎಂ.ಟಿ.ಶೋಭಾವತಿ ಮಾತನಾಡಿ, ಕಟ್ಟಡ ಕಾಮಗಾರಿಯ ನಿಧಾನಗತಿಯ ಬಗ್ಗೆ ವಿಷಾದ ವ್ಯಕ್ತಪಡಿಸಿ, ಸಮಾಜ ಬಾಂಧವರು ಸಹಾಯಹಸ್ತ ನೀಡಿದರೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವುದು ಕಷ್ಟವೇನಿಲ್ಲ ಎಂದರು. ಉದ್ಯಮಿ ಉಮೇಶ್ ನಾಯ್ಕ, ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘದ ಉಪಾಧ್ಯಕ್ಷೆ ದೇವಕಿ ಜಿ.ಆರ್.ನಾಯ್ಕ, ಕಟ್ಟಡ ಸಮಿತಿ ಕಾರ್ಯದರ್ಶಿ ಎಂ.ಎಸ್.ಯೋಗೇಂದ್ರ, ಸಂಘದ ಸ್ಥಾಪನ ಸಂಘಟನಾ ಕಾರ್ಯದರ್ಶಿ ಬಿ.ಎ.ಗಣೇಶ್ ಕರಿಕೆ, ಸಂಘದ ಕಾರ್ಯಕಾರಿ ಮಂಡಳಿಯ ಹಿರಿಯ ಸದಸ್ಯ ಎಂ.ಟಿ.ದೇವಪ್ಪ, ಸಂಘದ ಕಾನೂನು ಸಲಹೆಗಾರರಾದ ಗುರುಪ್ರಸಾದ್ ಕಟ್ಟೆಮಾಡು, ಅಂಭಾಭವಾನಿ ಯುವಕ-ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘದ ಅಧ್ಯಕ್ಷ ಎಂ.ಆರ್.ಮೋಹನ್, ಮಹಿಳಾ ವೇದಿಕೆ ಅಧ್ಯಕ್ಷೆ ರತ್ನಮಂಜರಿ ನರಸಿಂಹ, ಉಪಸಮಿತಿಗಳ ಅಧ್ಯಕ್ಷರಾದ ಕೆ.ಜಿ.ಹೊನ್ನಪ್ಪ, ಧನಂಜಯ್, ವೆಂಕಪ್ಪ, ನಿರಲ್ ಕುಮಾರ್, ಕೆ.ಜೆ.ಶಶಿಕಾಂತ್ ಇತರರಿದ್ದರು. ಕಾರ್ಯಕ್ರಮದಲ್ಲಿ ಗಂಗಾಧರ್ ಪ್ರಾರ್ಥಿಸಿದರೆ, ಸಂಘದ ಕಾರ್ಯದರ್ಶಿ ಹೂವಮ್ಮ ಸ್ವಾಗತಿಸಿದರು. ಟೀನಾ ನಾಯ್ಕ ನಿರೂಪಿಸಿದರೆ, ನರಸಿಂಹ ನಾಯ್ಕ ವಂದಿಸಿದರು.

ಪ್ರತಿಭಾ ಪುರಸ್ಕಾರ: ೨೦೨೪-೨೫ ಮತ್ತು ೨೦೨೫-೨೬ನೇ ಸಾಲಿನಲ್ಲಿ ೭ನೇ ತರಗತಿ, ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ, ವೃತ್ತಿಪರ ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಳನ್ನು ಪುರಸ್ಕರಿಸಲಾಯಿತು. ೨೦೨೪-೨೫ ಹಾಗೂ ೨೦೨೫-೨೬ನೇ ಸಾಲಿನ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ವಾರ್ಷಿಕ ಮಹಾಸಭೆ: ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಎಂ.ಎಂ.ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ೨೦೨೫-೨೬ನೇ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರವನ್ನು ಎಂ.ಕೆ.ಸಂತೋಷ್ ಕುಮಾರ್ ಕಟ್ಟೆಮಾಡು ಅವರು ಮಂಡಿಸಿದರು. ಅಂಬಾ ಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋರಂಜನ ಸಂಘದ ವರದಿಯನ್ನು ಉಪಾಧ್ಯಕ್ಷ ದೇವಿಪ್ರಸಾದ್ ವಾಮನ ನಾಯ್ಕ ಮಂಡಿಸಿದರು. ೨೦೨೬-೨೭ನೇ ಸಾಲಿಗೆ ಜಿಲ್ಲಾ ಸಂಘದ ಅಧ್ಯಕ್ಷರಾಗಿ ಎಂ.ಎಂ.ಪರಮೇಶ್ವರ, ಯುವ ವೇದಿಕೆ ಅಧ್ಯಕ್ಷರಾಗಿ ದೇವಿಪ್ರಸಾದ್ ವಾಮನ ನಾಯ್ಕ, ಮಹಿಳಾ ವೇದಿಕೆ ಅಧ್ಯಕ್ಷರಾಗಿ ಜಲಜಾಕ್ಷಿ ನವೀನ ಅವಿರೋಧವಾಗಿ ಆಯ್ಕೆಯಾದರು. ನಂತರ ಕರ್ನಾಟಕ ಮರಾಟಿ ಒಕ್ಕೂಟದ ಕಾರ್ಯಕಾರಿಣಿ ಸಭೆ ಕರ್ನಾಟಕ ಮರಾಟಿ ಒಕ್ಕೂಟದ ಅಧ್ಯಕ್ಷ ಡಾ.ಕೆ.ಸುಂದರ್‌ನಾಯ್ಕ(ಐಎಫ್‌ಎಸ್) ಅಧ್ಯಕ್ಷತೆಯಲ್ಲಿ ನಡೆಯಿತು.