ಹರಪನಹಳ್ಳಿ ನಗರಸಭೆ ಅಭಿವೃದ್ಧಿಗೆ ಸರ್ವರು ಸಹಕರಿಸಲಿ: ಶಾಸಕಿ ಎಂ.ಪಿ.ಲತಾ

KannadaprabhaNewsNetwork |  
Published : Nov 25, 2025, 02:15 AM IST
ಸ | Kannada Prabha

ಸಾರಾಂಶ

ನಗರಸಭೆಯಾಗಲು ನಾನು ಸ್ವ-ಇಚ್ಛಾಶಕ್ತಿಯಿಂದ ಕೆಲಸ ಮಾಡಿದ್ದೇನೆ.

ಹರಪನಹಳ್ಳಿ: ಪಟ್ಟಣದ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿದೆ. ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಮೂಲಕ ನಗರದ ಅಭಿವೃದ್ಧಿಗೆ ಸರ್ವರು ಸಹಕಾರ ನೀಡಬೇಕೆಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.

ನಗರಸಭೆ ಕಚೇರಿಯಲ್ಲಿ ಸೋಮವಾರ ನೂತನ ನಗರಸಭೆ ನಾಮಫಲಕ ಅನಾವರಣಗೊಳಿಸಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರಸಭೆಯಾಗಲು ನಾನು ಸ್ವ-ಇಚ್ಛಾಶಕ್ತಿಯಿಂದ ಕೆಲಸ ಮಾಡಿದ್ದೇನೆ. ಅಭಿವೃದ್ಧಿಯಲ್ಲಿ ಯಾರು ರಾಜಕೀಯ ಮಾಡೋದು ಬೇಡ. ಜನರಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದು ಜನಪ್ರತಿನಿಧಿಗಳ ಜವಾಬ್ದಾರಿ ಎಂದರು.ಕಳೆದ ಹತ್ತು ವರ್ಷದ ಹಿಂದೆ ಹರಪನಹಳ್ಳಿ ಪಟ್ಟಣವು ಅಭಿವೃದ್ಧಿಯಿಂದ ಹಿಂದೆ ಉಳಿದಿತ್ತು, ಸಹೋದರ ಎಂ.ಪಿ.ರವೀಂದ್ರ ಶಾಸಕರಾದ ಮೇಲೆ ಪಟ್ಟಣದ ಅಭಿವೃದ್ಧಿಗೆ ತಕ್ಕಮಟ್ಟಿಗೆ ಶ್ರಮಿಸಿದ್ದು ನಮಗೆ ತೃಪ್ತಿ ಇದೆ ಎಂದರು.

ಪಟ್ಟಣದ ನಾಗರಿಕರು ಸಕಾಲದಲ್ಲಿ ತೆರಿಗೆ ಪಾವತಿಸುವ ಮೂಲಕ ನಗರದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ನಗರಸಭೆ ಹಿರಿಯ ಸದಸ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿದ್ದು ಜನರ ಬಹುದಿನಗಳ ಬೇಡಿಕೆ ಈಡೇರಿದೆ, ಮಾಜಿ ಶಾಸಕ ದಿ.ಇಜಾರಿ ಶಿರಪ್ಪ ಅವರ ಕಾಲದಲ್ಲಿ ಹರಪನಹಳ್ಳಿ ಪಟ್ಟಣ ಪಂಚಾಯ್ತಿಯಾಗಿ ಸ್ಥಾಪನೆಯಾಗಿತ್ತು, ನಂತರ ಪುರಸಭೆಯಾಗಿ ಮಾರ್ಪಾಡಾಯಿತು, ಈಗ ನಮ್ಮ ಶಾಸಕರ ಪರಿಶ್ರಮದಿಂದ ನಗರಸಭೆಯಾಗಿದೆ ಎಂದರು.

ಮಾಜಿ ಶಾಸಕ ದಿ.ಎಂ.ಪಿ.ರವೀಂದ್ರ ಹರಪನಹಳ್ಳಿ ತಾಲೂಕನ್ನು 371 ಜೆ.ವ್ಯಾಪ್ತಿಗೆ ಸೇರಿಸಿದ ಹಿನ್ನೆಲೆಯಲ್ಲಿ ಇಂದು ಪಟ್ಟಣ ಸೇರಿದಂತೆ ತಾಲೂಕು ಅಭಿವೃದ್ಧಿ ದಿಕ್ಕಿನಲ್ಲಿ ಸಾಗುತ್ತಿದೆ, ಎಂ.ಪಿ.ಲತಾ ಮಲ್ಲಿಕಾರ್ಜುನ ಸಹ ಜನ ಸೇವೆಯ ಮೂಲಕ ಜನರ ಮನಸ್ಸು ಗೆದ್ದು ಶಾಸಕರಾಗಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದರು.

ಪುರಸಭೆ ನಗರಸಭೆಯಾಗಲು ಶಾಸಕಿ ಎಂ.ಪಿ.ಲತಾ, ಹಿಂದಿನ ಮುಖ್ಯಾಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಸರ್ವ ಸದಸ್ಯರ ಪಾತ್ರ ಹೆಚ್ಚಿದೆ ಮುಂದೆ ಗ್ರೇಡ್-1 ನಗರಸಭೆಯಾಗಲು ಎಲ್ಲರೂ ಶ್ರಮಿಸೋಣ ಎಂದರು.

ನಗರಸಭೆ ಸದಸ್ಯ ಮಾಜಿ ಅಧ್ಯಕ್ಷ ಎಚ್.ಎಂ.ಅಶೋಕ ಮಾತನಾಡಿ ನನ್ನ ಅವಧಿಯಲ್ಲಿ ಸಾಮಾನ್ಯ ಸಭೆಯಲ್ಲಿ ನಗರಸಭೆ ಮಾಡಲು ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು, ಈಗ ಎಂ.ಪಿ.ಲತಾ ಅವರು ಇದನ್ನು ಮುಂದುವರೆಸಿ ನಗರಸಭೆ ಮಾಡಲು ಶ್ರಮಿಸಿದ್ದಾರೆ, ಎಲ್ಲರೂ ನಗರದ ಅಭಿವೃದ್ಧಿ ಹಾಗೂ ಸೌಂದರ್ಯಿಕರಣಕ್ಕೆ ಶ್ರಮಿಸೋಣ ಎಂದರು.

ಹಿರಿಯ ಸದಸ್ಯ ಅಬ್ದುಲ್ ರೆಹಮಾನ್ ಮಾತನಾಡಿ ಪುರಸಭೆ ನಗರಸಭೆಯಾಗಿ ಮಾಡಲು ಈ ಹಿಂದೆ ಹಲವು ಬಾರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಆದರೆ ಅನೇಕ ತಾಂತ್ರಿಕ ಕಾರಣದಿಂದ ರದ್ದಾಗಿತ್ತು, ಆದರೆ ನಮ್ಮ ಶಾಸಕರ ಇಚ್ಛಾಶಕ್ತಿ ನಗರಸಭೆಯಾಗಲು ಕಾರಣವಾಯಿತು ಎಂದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವೆಂಕಟೇಶ ಮಾತನಾಡಿ ನಗರಸಭೆ ಆಗಲು ಶಾಸಕರ ಪಾತ್ರ ತುಂಬಾ ಇದೆ ಎಂದರು.

ಪುರಸಭೆ ಅಧ್ಯಕ್ಷೆ ಫಾತಿಮಾಬೀ ಶೇಕ್ಷಾವಲಿ ಮಾತನಾಡಿ ಪುರಸಭೆಯನ್ನು ನಗರಸಭೆ ಮಾಡಿದ ಕೀರ್ತಿ ಶಾಕರಿಗೆ ಸಲ್ಲುತ್ತದೆ ನಗರದ ಜನತೆಗೆ ಮೂಲಭೂತ ಸೌಕರ್ಯ ಒದಗಿಸಲು ಪ್ರಯತ್ನಿಸುತ್ತೇವೆ ಎಂದರು.

ನಗರಸಭೆ ಪೌರಾಯುಕ್ತೆ ರೇಣುಕಾ ಎಸ್.ದೇಸಾಯಿ, ಸದಸ್ಯರಾದ ಲಾಟಿ ದಾದಾಪೀರ್, ಉದ್ದಾರ ಗಣೇಶ, ಮಂಜುನಾಥ ಇಜಂತಕರ್, ಭರತೇಶ, ಜಾಕೀರ ಹುಸೇನ್, ಜಾವೀದ್, ವಿನಯ್, ರೊಕ್ಕಪ್ಪ, ಕಿರಣ್, ಸುಮಾ, ಭೀಮವ್ವ, ಹನುಮಕ್ಕ, ಲಕ್ಕಮ್ಮ, ಸಹಿರಾಬಾನು, ವಸಂತಪ್ಪ, ಗುಡಿ ನಾಗರಾಜ, ಹೇಮಣ್ಣ ಸಲೀಂ ಸೇರಿದಂತೆ ಸಿಬ್ಬಂದಿ ಸಾರ್ವಜನಿಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತರ್ಜಾತಿ ವಿವಾಹಿತರಿಗೆ ಪೊಲೀಸರ ರಕ್ಷಣೆ : ಗೃಹ ಮಂತ್ರಿ
ಮುಂಬೈ ಮೇಯರ್‌ ಹುದ್ದೆಗೆ ಶಿಂಧೆ ಲಡಾಯಿ?