- ಪೂರ್ವಭಾವಿ ಸಭೆಯಲ್ಲಿ ಹರಿಹರ ತಹಸೀಲ್ದಾರ್ ಗುರು ಬಸವರಾಜ್ ಸೂಚನೆ
- - -ಕನ್ನಡಪ್ರಭ ವಾರ್ತೆ ಹರಿಹರ
ಸಂವಿಧಾನ ದಿನಾಚರಣೆಯ ಮೆರವಣಿಗೆ, ಜಾಥಾ ಹಾಗೂ ಕಾರ್ಯಕ್ರಮದಲ್ಲಿ ತಾಲೂಕುಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ತಹಸೀಲ್ದಾರ್ ಕೆ.ಎಂ. ಗುರು ಬಸವರಾಜ್ ಹೇಳಿದರು.ನಗರದ ತಾಲೂಕು ಆಡಳಿತ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಸಂವಿಧಾನ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನ.26ರಂದು ಕಾರ್ಯಕ್ರಮ ಅರ್ಥಪೂರ್ಣವಾಗಿ ಆಚರಿಸಲು ಸನ್ನದ್ಧರಾಗಿರಬೇಕು ಎಂದರು.
ಸಂವಿಧಾನ ದಿನಾಚರಣೆ ನಿಮಿತ್ತ ನಡೆವ ಜಾಥಾದಲ್ಲಿ ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳಿಂದ ಜಿಲ್ಲಾ, ತಾಲೂಕು ಮಟ್ಟದಲ್ಲಿ ಸಂವಿಧಾನ ಪುಸ್ತಕವನ್ನು ಪ್ರದರ್ಶಿಸುವುದು, ವಿವಿಧ ಕನ್ನಡಪರ ಸಂಘಟನೆಗಳು, ದಲಿತಪರ ಸಂಘಟನೆಗಳು ಮುಖಂಡರು, ಸಂಘ ಸಂಸ್ಥೆಯ ಪಧಾಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಯವರು, ಎನ್.ಸಿ.ಸಿ, ಎನ್.ಎಸ್.ಎಸ್ ವಿಧ್ಯಾರ್ಥಿಗಳ ಸಹಯೋಗದೊಂದಿಗೆ ಹೆಚ್ಚು ಜನರನ್ನು ಸೇರಿಸಿ, ಆಚರಿಸಲು ಸೂಚಿಸಿದರು.ನ.26ರಂದು ಶ್ರೀ ಹರಿಹರೇಶ್ವರ ದೇವಾಲಯ ಆವರಣದಿಂದ ನಗರದ ಪ್ರಮುಖ ರಸ್ತೆಗಳ ಮೂಲಕ ಗುರುಭವನವರೆಗೆ ಜಾಥಾ, ಡಾ.ಅಂಬೇಡ್ಕರ್ ವೇಷಭೂಷಣ ಪ್ರದರ್ಶನ, ಜಾಥಾದಲ್ಲಿ ಸಂವಿಧಾನದ ಕುರಿತು ಡಾ.ಅಂಬೇಡ್ಕರ್ ಅವರ ಪ್ರಮುಖ ನುಡಿಮುತ್ತು ಪ್ರದರ್ಶಿಸುವ ವ್ಯವಸ್ಥೆಗಳನ್ನೂ ಮಾಡಬೇಕು ಎಂದರು.
ನಂತರ ವೇದಿಕೆ ಕಾರ್ಯಕ್ರಮದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಸಂವಿಧಾನದ ಕುರಿತು ಉಪನ್ಯಾಸಗಳನ್ನು ನೀಡುವುದು, ಚರ್ಚಾ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಛಾಯಾಚಿತ್ರ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದರು.ದಲಿತ ಸಂಘರ್ಷ ಸಮಿತಿ ಸಂಚಾಲಕ ಮಹಾಂತೇಶ್ ಮಾತನಾಡಿ, ನಾಗಮೋಹನ್ ದಾಸ್ ಅವರು ರಚಿಸಿರುವ ಸಂವಿಧಾನದ ಪೀಠಿಕೆ ಇರುವ ಪುಸ್ತಕಗಳನ್ನು ಮೆರವಣಿಗೆಯಲ್ಲಿ ಭಾಗವಹಿಸುವ ಎಲ್ಲ ಮಕ್ಕಳಿಗೆ ನೀಡುವಂತೆ ಸಭೆಯಲ್ಲಿ ತಿಳಿಸಿದರು.
ನಗರಸಭೆಯ ಪೌರಾಯುಕ್ತ ಎಂ.ಪಿ. ನಾಗಣ್ಣ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹನುಮಂತಪ್ಪ ಲಮಾಣಿ, ಬಿಇಒ ದುರ್ಗಪ್ಪ ಡಿ, ಆರೋಗ್ಯಧಿಕಾರಿ ಡಾ.ಅಬ್ದುಲ್ ಖಾದರ್, ಪಿಎಸ್ಐ ಶ್ರೀಪತಿ ಗಿನ್ನಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಅಸ್ಮಾ ಬಾನು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಅಧಿಕಾರಿ ಪ್ರಿಯದರ್ಶಿನಿ, ಬೆಸ್ಕಾಂ ಇಲಾಖೆ ಸಹಾಯಕ ಅಭಿಯಂತರ ಲಕ್ಷ್ಮಪ್ಪ ಕೆ., ಪಶು ಮತ್ತು ಸಂಗೋಪನ ಇಲಾಖೆಯ ತಿಪ್ಪೇಸ್ವಾಮಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಮರಿಸ್ವಾಮಿ, ಕಾರ್ಮಿಕ ಇಲಾಖೆಯ ನಿರೀಕ್ಷಕಿ ಕವಿತಾ ಜೆ, ಗ್ರಾಮ ಆಡಳಿತ ಅಧಿಕಾರಿ ಎಚ್ ಜೆ ಹೇಮಂತ್ ಕುಮಾರ್, ಸಾರ್ವಜನಿಕ ಗ್ರಂಥಾಲಯದ ರವಿಕುಮಾರ್, ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಪುಟ್ಟಪ್ಪ, ಸಿಬ್ಬಂದಿ ಜಮೀರ್, ಮಂಜುನಾಥ, ಕನ್ನಡಪರ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.- - -
-24HRR.02.ಜೆಪಿಜಿ:ಹರಿಹರದ ತಾಲೂಕು ಆಡಳಿತ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಸಂವಿಧಾನ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ತಹಸೀಲ್ದಾರ್ ಕೆ.ಎಮ್. ಗುರು ಬಸವರಾಜ್ ವಹಿಸಿ ಮಾತನಾಡಿದರು.