ಪೌರ ಕಾರ್ಮಿಕರೊಂದಿಗೆ ನಾಗರೀಕರೂ ಸಹಕರಿಸಿದಾಗ ಮಾತ್ರವೇ ನಗರದ ನೈರ್ಮಲ್ಯ ಕಾಪಾಡಲು ಸಾಧ್ಯವಾಗಲಿದೆ ಎಂದು ಪಪಂ ಮುಖ್ಯಾಧಿಕಾರಿ ಶ್ರೀನಾಥ್ ಬಾಬು ತಿಳಿಸಿದರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ಪೌರ ಕಾರ್ಮಿಕರೊಂದಿಗೆ ನಾಗರೀಕರೂ ಸಹಕರಿಸಿದಾಗ ಮಾತ್ರವೇ ನಗರದ ನೈರ್ಮಲ್ಯ ಕಾಪಾಡಲು ಸಾಧ್ಯವಾಗಲಿದೆ ಎಂದು ಪಪಂ ಮುಖ್ಯಾಧಿಕಾರಿ ಶ್ರೀನಾಥ್ ಬಾಬು ತಿಳಿಸಿದರು.ಪಟ್ಟಣ ಪಂಚಾಯಿತಿ ಆವರಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ, ಪಟ್ಟಣ ಪಂಚಾಯ್ತಿ ವತಿಯಿಂದ ಕಾರ್ಮಿಕ ದಿನದ ಅಂಗವಾಗಿ ನಡೆದ ಕಾಯಕ ದಿನಾಚರಣೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪೌರ ಕಾರ್ಮಿಕರು ಮಾಡುವ ಸ್ವಾಭಿಮಾನದ ಸೇವೆಯನ್ನು ಎಲ್ಲರು ಸ್ಮರಿಸಬೇಕಾಗಿದೆ. ಅವರು ನಿತ್ಯ ತಮ್ಮ ಸೇವಾ ಕಾರ್ಯದಲ್ಲಿ ತೊಡಗದಿದ್ದರೆ ಪಟ್ಟಣದ ಸ್ವಚ್ಚತೆ ಹಾಳಾಗುತ್ತದೆ. ಅನೈರ್ಮಲ್ಯ ಉಂಟಾಗಿ ಜನತೆ ಹಲವು ರೋಗ ರುಜಿನಗಳಿಗೆ ತುತ್ತಾಗಬೇಕಾಗುತ್ತದೆ. ಪೌರ ಕಾರ್ಮಿಕರು ಮಾಡುವ ನಿಸ್ವಾರ್ಥ ಸ್ವಚ್ಚತಾ ಸೇವಾ ಕಾರ್ಯದಿಂದ ಪಟ್ಟಣ ಶುಚಿಯಾಗಿರಲಿದೆ. ಆ ನಿಟ್ಟಿನಲ್ಲಿ ಇವರ ನಿಸ್ವಾರ್ಥ ಸೇವೆಯನ್ನು ತಾಲೂಕು ಶರಣ ಸಾಹಿತ್ಯ ಪರಿಷತ್ ಕಾರ್ಮಿಕರನ್ನು ಇಂದು ಗುರ್ತಿಸಿ ಸನ್ಮಾನಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು. ಶರಣ ಸಾಹಿತ್ಯ ಪರಿಷತ್ ನ ಪ್ರಧಾನ ಕಾರ್ಯದರ್ಶಿ ಟಿ.ಸಿ. ಸುನಿಲ್ಬಾಬು ಮಾತನಾಡಿ, ನಗರದ ಸ್ವಚ್ಚತೆ ಆರೋಗ್ಯವನ್ನು ಕಾಪಾಡುವ ಕೆಲಸ ಮಾಡುವ ಪೌರ ಕಾರ್ಮಿಕರೇ ನಗರದ ಮುಖ್ಯ ಶಕ್ತಿಯಾಗಿದ್ದಾರೆ. ಅವರನ್ನು ಗುರುತಿಸುವಂತಹ ಕಾರ್ಯವನ್ನು ನಾವುಗಳು ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಶರಣ ಸಾಹಿತ್ಯ ಪರಿಷತ್ತು ಇಂದು ಪೌರ ಕಾರ್ಮಿಕರನ್ನು ಗುರುತಿಸುವ ಮೂಲಕ ಕಾಯಕ ದಿನವನ್ನು ಆಚರಣೆ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದರು. ತಾಲೂಕು ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಮಲ್ಲಿಕಾರ್ಜುನ ದುಂಡ ಮಾತನಾಡಿ, ನಾಗರೀಕರು ಮಲಗಿರುವ ಹೊತ್ತಿನಲ್ಲಿ ತಾವೆದ್ದು ನಗರದ ಕಸವನ್ನು ಸ್ವಚ್ಛ ಮಾಡುವ ಪೌರಕಾರ್ಮಿಕರು ಸಾಮಾಜಿಕ ಜವಾಬ್ದಾರಿ ಹೊಂದಿರುವವರು. ಅಂತಹ ಪೌರ ಕಾರ್ಮಿಕರಿಗೆ ಎಷ್ಟೇ ಕೃತಜ್ಞತೆ ಸಲ್ಲಿಸಿದರೂ ಸಾಲದು ಎಂದು ಹೇಳಿದರು. ಹಿರಿಯ ಪೌರ ಕಾರ್ಮಿಕರಾದ ಟಿ.ಡಿ.ರವಿಕುಮಾರ್ ಹಾಗೂ ಬಿ.ಆರ್.ಸುಮಲತ ಅವರನ್ನು ಸನ್ಮಾನಿಸಲಾಯಿತು. ಕದಳಿ ಅಧ್ಯಕ್ಷೆ ಶರಣೆ ದೇವಮ್ಮ ಶಂಕರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷೆ ರೂಪಶ್ರೀ ಸ್ವಾಗತಿಸಿದರು. ಜ್ಯೋತಿ ನಿರೂಪಿಸಿದರು. ಲ.ವಿರೂಪಾಕ್ಷ ವಂದಿಸಿದರು. ಪ.ಪಂ.ಸದಾನಂದ್, ನರಸಿಂಹಮೂರ್ತಿ, ರವಿಕುಮಾರ್, ನಾಗರಾಜ್, ರಾಜಣ್ಣ, ಕಾರ್ಮಿಕ ಮುಖಂಡ ಸುರೇಶ್ ಸೇರಿದಂತೆ ಪೌರಕಾರ್ಮಿಕರು ಹಾಗೂ ಇತರರು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.