ಕಾರವಾರ: ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನು ಮಾದಕ ದ್ರವ್ಯ ಹಾಗೂ ಸೈಬರ್ ಅಪರಾಧ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದು, ಮುಂದಿನ ದಿನದಲ್ಲಿ ಈ ಕಾರ್ಯಕ್ಕೆ ಯಶಸ್ಸು ಖಚಿತವಾಗಿ ದೊರೆಯಲಿದೆ ಎಂದು ಶಾಸಕ ಸತೀಶ ಸೈಲ್ ಹೇಳಿದರು.ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ನಗರದ ರವೀಂದ್ರನಾಥ ಟಾಗೋರ ಕಡಲ ತೀರದಲ್ಲಿ ಶನಿವಾರ ಆಯೋಜಿಸಿದ್ದ ಮಾದಕ ದ್ರವ್ಯ ಹಾಗೂ ಸೈಬರ್ ಅಪರಾಧ ಮುಕ್ತ ಕರ್ನಾಟಕ 2025ರ ಮ್ಯಾರಥಾನ್ 5K ಓಟಕ್ಕೆ ಚಾಲನೆ ನೀಡಿ ಮಾತನಾಡಿ, ಮ್ಯಾರಥಾನ್ ಓಟದ ಸ್ಪರ್ಧೆಯಲ್ಲಿ ಉತ್ಸಹಕರಾಗಿ 1000 ಅಧಿಕ ಜನರು ನೋಂದಣಿ ಮಾಡಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಿರುವುದನ್ನು ಕಂಡು ಹರ್ಷ ವ್ಯಕ್ತ ಪಡಿಸಿ ಎಲ್ಲರಿಗೂ ಶುಭ ಕೋರಿದರು.
ಜಿಲ್ಲಾಧಿಕಾರಿ ಕೆ. ಲಕ್ಮೀಪ್ರಿಯಾ ಮಾತನಾಡಿ, ಪ್ರತಿಯೊಬ್ಬರು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ದೈಹಿಕವಾಗಿ ಸದೃಢರಾಗಲು ಪ್ರತಿದಿನ ಸ್ವಲ್ಪ ಸಮಯ ಮೀಸಲಿಡಬೇಕು. ಡ್ರಗ್ಸ್ ಅಥವಾ ಮಾದಕ ವಸ್ತುಗಳನ್ನು ನಿಯಂತ್ರಣ ಮಾಡಲು ಜಿಲ್ಲೆಯಲ್ಲಿ ಎನ್ಕ್ವಾಡ್ ( ನಾರ್ಕಟಿಕ್ ಕ್ರೈಂ ಕೋ- ಆರ್ಡಿನೇಷನ್ ಕಮಿಟಿ) ಇದೆ. ಈ ಕಮಿಟಿಯು ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ವಿದ್ಯಾರ್ಥಿಗಳು ಜಾಗೃತರಾಗಿದ್ದು, ಮಾದಕ ವಸ್ತುಗಳ ಸೇವನೆ ಮಾಡದೇ ಉತ್ತಮ ಅರೋಗ್ಯ ಕಾಪಾಡಿಕೊಳ್ಳಬೇಕು ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ. ಮಾತನಾಡಿ, ಪ್ರತಿ ಜಿಲ್ಲೆಯಲ್ಲಿ ಡ್ರಗ್ಸ್ ಹಾಗೂ ಸೈಬರ್ ಕ್ರೈಂ ಮುಕ್ತ ಕರ್ನಾಟಕ್ಕಾಗಿ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ 2 ಆವೃತ್ತಿ ಯ ಮ್ಯಾರಥಾನ್ ನ್ನು ಇಡಿ ರಾಜ್ಯದಲ್ಲೇ ಆಯೋಜನೆ ಮಾಡಲಾಗಿದೆ. ಯಾರು ಕೂಡ ಡ್ರಗ್ಸ್ ಗೆ ತುತ್ತಾಗಬಾರದು. ಪೊಲೀಸ್ ಇಲಾಖೆಯಿಂದ ಮಾತ್ರ ಮಾದಕ ವಸ್ತುಗಳ ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಇದಕ್ಕೆ ಸಾರ್ವಜನಿಕ ಸಹಕಾರ ಅಗತ್ಯವಾಗಿದೆ ಯಾರಾದರು ಡ್ರಗ್ಸ್ ಸೇವನೆ ಅಥವಾ ಮಾರಾಟ ಮಾಡುವುದು ಕಂಡು ಬಂದಲ್ಲಿ ಪೋಲಿಸ್ ಇಲಾಖೆಗೆ ಮಾಹಿತಿ ನೀಡಿ ಎಂದು ತಿಳಿಸಿದರು.
ಮ್ಯಾರಥಾನ್ ಓಟವು ರವೀಂದ್ರನಾಥ ಕಡಲ ತೀರದಿಂದ ಪ್ರಾರಂಭವಾಗಿ ಬಿಲ್ಟ್ ಸರ್ಕಲ್ , ಸವಿತಾ ಸರ್ಕಲ್, ಕಾಜುಬಾಗ, ಅರ್ಜುನ ಚಿತ್ರ ಮಂದಿರ, ಎಸ್.ಪಿ. ಕಚೇರಿ ಮೂಲಕ ವಾಪಸ್ ರವೀಂದ್ರನಾಥ ಟಾಗೋರ ಕಡಲ ತೀರದಲ್ಲಿ ತಲುಪಿ ಮುಕ್ತಾಯವಾಯಿತು.ಜಿಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಈಶ್ವರಕುಮಾರ ಕಾಂದೂ, ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೇಕರ, ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಬೋಪಣ್ಣ, ಗೃಹ ರಕ್ಷಕದಳದ ಜಿಲ್ಲಾ ಸಮಾದೇಷ್ಠ ಡಾ. ಸಂಜು ನಾಯಕ, ಚಲನಚಿತ್ರ ನಟಿಯರಾದ ಬ್ರಂದಾ ಆಚಾರ್ಯ, ಅದಿತಿ ಶ್ರೀವಾಸ್ತವ, ಜಯಾ ಪಟೇರಿಯಾ, ಕದಂಬ ನೌಕ ನೆಲೆಯ ಕಮಾಂಡರ್ ಗುರು, ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಮೊದಲಾದವರು ಇದ್ದರು.
ಪುರುಷ ವಿಭಾಗದಲ್ಲಿ ಕಾರ್ತಿಕ ನಾಯ್ಕ ಪ್ರಥಮ, ಸಂದೀಪ ಪೂಜಾರ ದ್ವಿತೀಯ, ಗುರುರಾಜ್ ಹೆಗಡೆ ತೃತೀಯ, ಮಹಿಳಾ ವಿಭಾಗದಲ್ಲಿ ಪೂರ್ವಿ ಹರಿಕಂತ್ರ ಪ್ರಥಮ, ಸುಪ್ರಿತಾ ಚೆನ್ನಯ್ಯ ದ್ವಿತೀಯ, ಸಾವಿತ್ರಿ ಮಿರಾಶಿ ತೃತೀಯ ಸ್ಥಾನ ಪಡೆದುಕೊಂಡರು.