-ಬಿಜೆಪಿ - ಜೆಡಿಎಸ್ನದು ಪಾದಯಾತ್ರೆ ಅಲ್ಲ, ಪಾಪದ ಯಾತ್ರೆ ರಾಮನಗರ: ಬಿಜೆಪಿ - ಜೆಡಿಎಸ್ ಮಾಡಿರುವ ಪಾಪಗಳನ್ನು ತೊಳೆದುಕೊಳ್ಳಲು ಪಾಪದಯಾತ್ರೆ ಮಾಡುತ್ತಿದ್ದಾರೆ. ಕಾವೇರಿ ನದಿ ಹರಿಯುತ್ತಿರುವ ಎಲ್ಲ ಕಡೆ ಮೈತ್ರಿ ನಾಯಕರು ಸ್ನಾನ ಮಾಡಿಕೊಂಡರೆ, ಅವರ ಪಾಪದ ಕೊಡ ಸ್ವಲ್ಪವಾದರೂ ಕಡಿಮೆಯಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಲಹೆ ನೀಡಿದರು.
ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮಿಷನ್ ಪಡೆದಿದ್ದು ದೇಶಕ್ಕೇ ಗೊತ್ತಿದೆ. ಜೊತೆಗೆ ಭೋವಿ ನಿಗಮದಲ್ಲಿ 100 ಕೋಟಿ, ಎಪಿಎಂಸಿ ಹಗರಣ, ದೇವರಾಜ ಅರಸು ಟ್ರಕ್ ಟರ್ಮಿನಲ್ ಹಗರಣ, ಗಂಗಾ ಕಲ್ಯಾಣ ಯೋಜನೆಯಲ್ಲಿ 430 ಕೋಟಿ ಹಗರಣ, ಪ್ರವಾಸೋದ್ಯಮ, ಕಿಯೋನಿಕ್ಸ್ನಲ್ಲಿ 500 ಕೋಟಿ, ಕೋವಿಡ್ ನಲ್ಲಿ ಸಾವಿರಾರು ಕೋಟಿ, ಪಿಎಸ್ಸೈ ನೇಮಕಾತಿಯಲ್ಲಿ ಹಗರಣ, ಪರಶುರಾಮ ಥೀಮ್ ಪಾರ್ಕ್ ಹಗರಣ, ಬಿಟ್ ಕಾಯಿನ್ ಹಗರಣಗಳು ನಡೆದಿವೆ.
ಯಡಿಯೂರಪ್ಪನವರ ಆಪ್ತರ ಮನೆಯಲ್ಲಿ 750 ಕೋಟಿ ಹಣ ಸಿಕ್ಕಿತ್ತು. KIDBನಲ್ಲೂ ಹಗರಣಗಳ ಸರಮಾಲೆ ಇದೆ. ಈ ಹಗರಣಗಳ ತನಿಖೆಗೆ ಗವರ್ನರ್ ಇನ್ನೂ ಅನುಮತಿ ಕೊಟ್ಟಿಲ್ಲ. ಪಾದಯಾತ್ರೆ ವೇಳೆ ರಾಮನಗರಕ್ಕೆ ಬರುವ ನೀವು ಈ ಹಿಂದಿನ ಅವಧಿಯಲ್ಲಿಯೂ ನಡೆದಿರುವ ಹಗರಣಗಳ ಬಗ್ಗೆ ತನಿಖೆಯಾಗಲೆಂದು ಒತ್ತಾಯಿಸಬೇಕು ಎಂದರು.ಮುಡಾ ವಿಚಾರದಲ್ಲಿ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗಳ ವರದಿ ನೋಡದೆ ಮುಖ್ಯಮಂತ್ರಿಗಳಿಗೆ ನೋಟಿಸ್ ಕೊಟ್ಟಿದ್ದಾರೆ. ಇಂತಹ ಗಂಭೀರ ವಿಚಾರವನ್ನು ರಾಜ್ಯಪಾಲರ ಕಚೇರಿ ನೋಡುವುದಿಲ್ಲ ಎಂದರೆ ಏನರ್ಥ. ಬಿಜೆಪಿಯವರು ರಾಜ್ಯಪಾಲರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ರಾಮಲಿಂಗಾರೆಡ್ಡಿ ಹರಿಹಾಯ್ದರು.