ಸಾಹಿತ್ಯ, ಸಂಸ್ಕೃತಿ ಕಟ್ಟುವ ಕೈಂಕರ್ಯವಾಗಲಿ: ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ

KannadaprabhaNewsNetwork | Published : Mar 7, 2024 1:49 AM

ಕನ್ನಡ ಅಧ್ಯಾಪಕರೇ ಸಾಹಿತ್ಯ ಚರಿತ್ರೆ ಓದಿಲ್ಲ. ಹೀಗಾಗಿ, ಅವರಿಗೆ ಕನ್ನಡ ಸಾಹಿತ್ಯ ಪರಂಪರೆ ಜ್ಞಾನವೇ ಇಲ್ಲವಾಗಿದೆ ಎಂದು ಹಿರಿಯ ಸಾಹಿತಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಕನ್ನಡ ಭಾಷೆಯ ಜೊತೆಗೆ ಸಾಹಿತ್ಯ, ಸಂಸ್ಕೃತಿ ಕಟ್ಟುವ ಕೈಂಕರ್ಯವಾಗಬೇಕು. ಯುವ ಜನಾಂಗಕ್ಕೆ ಕನ್ನಡದ ಪುಸ್ತಕಗಳ ಪರಿಚಯವಾಗಬೇಕು. ಈ ಕೆಲಸ ಆಗದಿದ್ದರೆ ಹೊಸತರ ಕಡೆಗೆ ಹೆಜ್ಜೆ ಹಾಕುವುದು ಕಷ್ಟ ಎಂದು ಹಿರಿಯ ಸಾಹಿತಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಹೇಳಿದರು.

ಇಲ್ಲಿಯ ಜನತಾ ಶಿಕ್ಷಣ ಸಮಿತಿ ಸನ್ನಿಧಿ ಕಲಾಕ್ಷೇತ್ರದಲ್ಲಿ ಬುಧವಾರ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಧಾರವಾಡ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು.

ಕನ್ನಡ ಅಧ್ಯಾಪಕರೇ ಸಾಹಿತ್ಯ ಚರಿತ್ರೆ ಓದಿಲ್ಲ. ಹೀಗಾಗಿ, ಅವರಿಗೆ ಕನ್ನಡ ಸಾಹಿತ್ಯ ಪರಂಪರೆ ಜ್ಞಾನವೇ ಇಲ್ಲವಾಗಿದೆ. ಇಂತಹ ಪ್ರಾಧ್ಯಾಪಕರಿಂದ ಏನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು. ಕನ್ನಡ ಭಾಷೆ ಬಾರದವರಿಗೆ ಇಂಗ್ಲಿಷ್ ಮಾಧ್ಯಮದ ಕಲಿಕೆ ಹಾಸ್ಯಾಸ್ಪದ. ಕನ್ನಡ ಪದಗಳು, ವ್ಯಾಕರಣ ಸರಿಯಾಗಿ ಅರ್ಥೈಸಿಕೊಳ್ಳದೆ ಹೋದರೆ, ಮನೆಯ ಭಾಷೆ ಮಾತ್ರವಲ್ಲ, ಇತರೆ ಭಾಷೆ ಅರಿಯುವುದು ಸಹ ಕಷ್ಟಕರ ಎಂದು ತಿಳಿಸಿದರು.

ಕನ್ನಡ ಭಾಷೆ ಹಾಗೂ ಸಾಹಿತ್ಯದ ಓದಿನಿಂದ ಕನ್ನಡಿಗರು ತಮ್ಮ ವ್ಯಕ್ತಿತ್ವ ಕಟ್ಟಿಕೊಳ್ಳಬಹುದು. ಕನ್ನಡ ಸಾಹಿತ್ಯ ಕ್ಷೀಣಿಸಲು ಕಾರಣವಾದ ಮೊಬೈಲ್, ವ್ಯಕ್ತಿಗಳನ್ನು ಮೊದಲು ದೂರವಿರಿಸಬೇಕು. ಪ್ರತಿಯೊಬ್ಬರು ಕನಸು ಕಾಣುವ, ಕಲ್ಪನೆ ಹಾಗೂ ಅಭಿವ್ಯಕ್ತಿ ಗುಣ ಬೆಳೆಸಿಕೊಳ್ಳಬೇಕು ಎಂದ ಅವರು, ಡಾ. ಬೇಂದ್ರೆ ಸಕಲ ಸಾಹಿತ್ಯದ ಸಂಪುಟದ ಕೃತಿ ಇಂದ್ದಂತೆ. ಅವರು ಇತರ ಭಾಷೆಗಳಿಗೂ ಹೋಗಬೇಕು. ಬೇಂದ್ರೆ ಒಡನಾಡಿಗಳ ಮೂಲಕ ಬೇರೆ ಭಾಷೆ ಹಾಗೂ ನಾಡಿಗೆ ಬೇಂದ್ರೆ ಪರಿಚಯಿಸುವ ಕೆಲಸ ಡಾ. ಕೆ.ಎಸ್. ಶರ್ಮಾ ಮಾಡಲಿ ಎಂದು ಆಶಿಸಿದರು.

ಸಮ್ಮೇಳನದ ಆಶಯ ನುಡಿ ಹೇಳಿದ ಸಾಹಿತಿ ಡಾ. ಶಾಂತಿನಾಥ ದಿಬ್ಬದ, ಕನ್ನಡ ಸಾಹಿತ್ಯ 2,500 ವರ್ಷಗಳ ಇತಿಹಾಸ ಹಾಗೂ ಬಹುದೊಡ್ಡ ಪರಂಪರೆ ಹೊಂದಿದೆ. ನಮ್ಮ ಸಾಹಿತ್ಯ ಚರಿತ್ರೆ ಇನ್ನಷ್ಟು ಗಟ್ಟಿಯಾಗಿ ಕಟ್ಟಿಕೊಡುವ ಕಾರ್ಯ ನಡೆಯಲಿ. ಲೌಖಿಕ ಎಂದರೆ ರಾಜರ ಚರಿತ್ರೆ ಅಲ್ಲ, ಕೂಲಿಕಾರರ ಚರಿತ್ರೆಯೂ ಹೌದು. ಇಂಥ ಸಾಹಿತ್ಯ ಬೇಕಿದೆ. ಸಾಹಿತ್ಯ ಕೇವಲ ಮನರಂಜನೆ ಸರಕಾಗದೇ, ನೆತ್ತಿಗೆ ಜ್ಞಾನ ನೀಡಬೇಕು. ಸದ್ಯ ಸಂಹಿಷ್ಣುತೆ ಪ್ರತಿಪಾದಿಸುವ ಸಾಹಿತ್ಯದ ಅಗತ್ಯದ ಕುರಿತು ದಿಬ್ಬದ ಪ್ರತಿಪಾದಿಸಿದರು. ವಿಜ್ಞಾನ, ವಿಚಾರ ಸಾಹಿತ್ಯವೂ ಬೇಕು. ಸಾಹಿತ್ಯ ಕೇವಲ ಮನರಂಜನೆ ಮಾತ್ರ ಆಗಿರದೆ, ಗ್ರೀಕ್ ಚಿಂತಕ ಪ್ಲೇಟೋ ಹೇಳಿದಂತೆ ಜೀವಪರ, ಜನೋಪಯೋಗಿ ಸಾಹಿತ್ಯ ಬರಬೇಕು. ಈ ನಿಟ್ಟಿನಲ್ಲಿ ಸಾಹಿತಿಗಳು ನಡೆ ಇರಬೇಕು ಎಂದು ಸಲಹೆ ನೀಡಿದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ. ಧರಣೇಂದ್ರ ಕುರಕುರಿ, ಸಮ್ಮೇಳನಾಧ್ಯಕ್ಷ ಡಾ. ಕೆ.ಎಸ್. ಶರ್ಮಾ ಅವರಿಗೆ ಕನ್ನಡ ಬಾವುಟ ಹಸ್ತಾಂತರಿಸುವುದರ ಮೂಲಕ ಮುಂದಿನ ಒಂದು ವರ್ಷಗಳ ಕಾಲ ನುಡಿತೇರು ಎಳೆಯುವಂತೆ ಶುಭ ಹಾರೈಸಿದರು. ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಕೃತಿಗಳ ಪ್ರದರ್ಶನ ಉದ್ಘಾಟಿಸಿದರು. ಉಸ್ತುವಾರಿ ಸಚಿವ ಸಂತೋಷ ಲಾಡ್, ಮಾಜಿ ಸಭಾಪತಿ ಡಾ. ವೀರಣ್ಣ ಮತ್ತಿಕಟ್ಟಿ, ಮಾಜಿ ಸಂಸದ ಐ.ಜಿ. ಸನದಿ, ಹುಡಾ ನೂತನ ಅಧ್ಯಕ್ಷ ಶಾಕೀರ ಸನದಿ ಇದ್ದರು.

ಡಾ. ಶೋಭಾ ಜಾಬೀನ ಪ್ರಾರ್ಥಿಸಿದರು. ಜೆಎಸ್ಸೆಸ್ ಕಾಲೇಜಿನ ವಿದ್ಯಾರ್ಥಿಗಳು ನಾಡಗೀತೆ ಪ್ರಸ್ತುತಪಡಿಸಿದರು. ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಸ್ವಾಗತಿಸಿದರು. ಪ್ರೊ. ಕೆ.ಎಸ್. ಕೌಜಲಗಿ, ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಡಾ.ಎಸ್.ಎಸ್. ದೊಡಮನಿ ವಂದಿಸಿದರು.