ಲಕ್ಷ್ಮೇಶ್ವರ: ಸಾಮಾನ್ಯ ಜನರ ಅಸಾಮಾನ್ಯ ಸಾಧನೆಗಳನ್ನು ದೇಶದ ಜನರಿಗೆ ಮನ್ ಕಿ ಬಾತ್ ಮೂಲಕ ತಿಳಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ. ಈ ಕಾರ್ಯಕ್ರಮವು ಹೊಸತನಕ್ಕೆ ಪ್ರೇರಣೆ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ವಿಶೇಷ ಕಾರ್ಯಕ್ರಮ. ಹಿಂದಿನ ಯಾವುದೇ ಪ್ರಧಾನಿ ಮಾಡದಿರುವ ಜನರ ಜತೆಗೆ ನೇರ ಸಂಪರ್ಕ ಇಟ್ಟುಕೊಂಡು ಇಡೀ ದೇಶದಲ್ಲಿ ಆಗುತ್ತಿರುವ ಒಳ್ಳೆಯ ಕೆಲಸಗಳ ಬಗ್ಗೆ ದೇಶಕ್ಕೆ ತಿಳಿಸಿ ಅವುಗಳಿಂದ ಪ್ರೇರಣೆ ಪಡೆಯಲು ಈ ಕಾರ್ಯಕ್ರಮ ನಡೆಸುತ್ತಿದ್ದಾರೆ ಎಂದರು.
ಪ್ರತಿ ತಿಂಗಳು ಈ ಕಾರ್ಯಕ್ರಮ ನಡೆಯುತ್ತದೆ. ಒಂದು ತಿಂಗಳಲ್ಲಿ ದೇಶದಲ್ಲಿ ಯಾವ ಒಳ್ಳೆಯ ಕಾರ್ಯಕ್ರಮ ನಡೆದಿವೆ, ಅವುಗಳನ್ನು ಕೋಡಿಕರಿಸಿ ತಿಂಗಳ ಕೊನೆಯಲ್ಲಿ ಹೇಳುತ್ತಾರೆ. ಕರ್ನಾಟಕ, ಜಮ್ಮು ಕಾಶ್ಮೀರ, ಮಣಿಪುರ ಸೇರಿದಂತೆ ದೇಶದ ಎಲ್ಲ ರಾಜ್ಯಗಳಲ್ಲಿ ಸಾಮಾನ್ಯರು ಮಾಡಿರುವ ಅಸಾಮಾನ್ಯ ಸಾಧನೆಗಳನ್ನು ಹೇಳುತ್ತಾರೆ. ದುಬೈನಲ್ಲಿ ಕನ್ನಡ ಶಾಲೆ ತೆರೆದಿರುವುದು, ಮಣಿಪುರದಲ್ಲಿ ವಿದ್ಯುತ್ ಇಲ್ಲದಿರುವಾಗ ಸೋಲಾರ್ ಬಳಕೆ ಮೂಲಕ ವಿದ್ಯುತ್ ಸಂಪರ್ಕ ಪಡೆದು ವಿದ್ಯೆ ಪಡೆದಿರುವುದು, ದೇಶದ ಎಲ್ಲರನ್ನು ಈ ಮೂಲಕ ಜನರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.ಈ ಕಾರ್ಯಕ್ರಮದಿಂದ ಬಹಳಷ್ಟು ಜನರಿಗೆ ಪ್ರೇರಣೆ ಸಿಕ್ಕಿದೆ. ಉದಾಹರಣೆಗೆ ಎಫ್ಪಿಒ ಹುಟ್ಟಿದ್ದೇ ಇದರ ಮೂಲಕ. ಕೆಲವು ರೈತರು ಸೇರಿ ಒಂದು ಸಂಸ್ಥೆ ಕಟ್ಟಿಕೊಂಡು ದಲ್ಲಾಳಿಗಳನ್ನು ದೂರ ಮಾಡಿ ರೈತರೇ ಮಾರಾಟ ಮಾಡಿ ಲಾಭ ಪಡೆಯುತ್ತಿದ್ದರು. ಅದನ್ನು ಮನ್ ಕಿ ಬಾತ್ನಲ್ಲಿ ಪ್ರಧಾನಿ ಹೇಳಿದ್ದರು. ಅದನ್ನೇ ಪ್ರೇರಣೆಯಾಗಿ ಪಡೆದುಕೊಂಡು ದೇಶದಲ್ಲಿ ರೈತ ಉತ್ಪಾದಕ ಕಂಪನಿಗಳನ್ನು ತೆರೆಯಲು ಆಂಭಿಸಿದರು. ಅದೇ ರೀತಿ ಸೂರಣಗಿಯಲ್ಲಿ ರೈತ ಉತ್ಪಾದಕ ಸಂಸ್ಥೆ ಆರಂಭಿಸಿ ಮೂರುವರೆ ಕೋಟಿ ರೂ. ವಹಿವಾಟು ಮಾಡುತ್ತಿದ್ದಾರೆ. ಇದನ್ನು ಯಾರೂ ಕಲ್ಪನೆ ಮಾಡಿರಲಿಲ್ಲ. ರಾಯಚೂರಿನಲ್ಲಿ ಸುಮಾರು ಇನ್ನೂರು ಕೋಟಿ ರು. ವಹಿವಾಟು ಮಾಡುತ್ತಾರೆ. ಇಂತಹ ಸಂಸ್ಥೆಗಳು ಹೆಚ್ಚಿನ ಪ್ರಮಾಣದಲ್ಲಿ ಬರಬೇಕು. ರೈತರಿಗೆ ಹೆಚ್ಚಿನ ಲಾಭ ಬರುವಂತಾಗಬೇಕು. ಇದೇ ರೀತಿ ಹೆಣ್ಣುಮಕ್ಕಳ ಸಾಧನೆ, ರೈತರ ಸಾಧನೆಗಳನ್ನು ಮನ್ ಕಿ ಬಾತ್ನಲ್ಲಿ ಹೇಳಿದ್ದಾರೆ ಎಂದರು.