ರಾಹುಲ್ ರತ್ನಂ ಪಾಂಡೆ ಕರೆ, ಗಂಗಾವತಿಯಲ್ಲಿ ಧ್ವಜಾರೋಹಣಕನ್ನಡಪ್ರಭ ವಾರ್ತೆ ಕೊಪ್ಪಳ
ಜಿಲ್ಲಾದ್ಯಂತ ನಮ್ಮ ನಡೆ ಮತಗಟ್ಟೆ ಕಡೆ ಎನ್ನುವ ಅಭಿಯಾನ ಪ್ರಾರಂಭಿಸಿದ್ದು, ಇದನ್ನು ರಾಷ್ಟ್ರೀಯ ಹಬ್ಬದಂತೆ ಆಚರಣೆ ಮಾಡೋಣ ಎಂದು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ ಹೇಳಿದ್ದಾರೆ.ಗಂಗಾವತಿ ನಗರದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಲೋಕಸಭಾ ಚುನಾವಣೆ ಅಂಗವಾಗಿ ನಡೆಯುತ್ತಿರುವ ನಮ್ಮ ನಡೆ, ಮತಗಟ್ಟೆ ಕಡೆ ಅಭಿಯಾನದ ಧ್ವಜಾರೋಹಣವನ್ನು ಚುನಾವಣಾ ಜಿಲ್ಲಾ ರಾಯಭಾರಿ ಶಿವಕುಮಾರ್ ಮಾಲಿಪಾಟೀಲ್ ಅವರ ಜತೆ ಜಂಟಿಯಾಗಿ ನೆರವೇರಿಸಿ, ಆನಂತರ ಮಾತನಾಡಿದರು.
ಮೇ 7ರಂದು ನಡೆಯುವ ಲೋಕಸಭಾ ಚುನಾವಣೆ ಅಂಗವಾಗಿ ಜನರಿಗೆ ಮತಗಟ್ಟೆ ಪರಿಚಯಿಸಲು ನಮ್ಮ ನಡೆ, ಮತಗಟ್ಟೆ ಕಡೆ ಅಭಿಯಾನ ನಡೆಸಲಾಗುತ್ತಿದೆ. ಮತಗಟ್ಟೆಗಳ ಮೇಲೆ ಮೇ 7ರ ವರೆಗೆ ಧ್ವಜ ಏರಿಸಬೇಕು. ನಮ್ಮ ನಡೆ, ಮತಗಟ್ಟೆ ಕಡೆ ಅಭಿಯಾನವನ್ನು ರಾಷ್ಟ್ರೀಯ ಹಬ್ಬದಂತೆ ಆಚರಿಸಬೇಕು. ಚುನಾವಣೆ ಕೆಲಸದಲ್ಲಿ ಬಿಎಲ್ಒಗಳ ಕಾರ್ಯ ಅತಿ ಮುಖ್ಯವಾಗಿರುತ್ತದೆ. ಎಲ್ಲರೂ ಮತಗಟ್ಟೆಗಳನ್ನು ಮತದಾರರಿಗೆ ಪರಿಚಯಿಸಬೇಕು. ಶೇ. 100ರಷ್ಟು ಮತದಾನ ಆಗಲು ಕಾರ್ಯನಿರ್ವಹಿಸಬೇಕು. ಎಲ್ಲ ಮತಗಟ್ಟೆಗಳಲ್ಲಿ ಧ್ವಜಾರೋಹಣ ನಡೆಸಿ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.ಚುನಾವಣಾ ಜಿಲ್ಲಾ ರಾಯಭಾರಿ ಶಿವಕುಮಾರ್ ಮಾಲಿಪಾಟೀಲ್ ಮಾತನಾಡಿ, ಇದೀಗ ದೇಶ ಸೇವೆ ಮಾಡುವ ಅವಕಾಶ ಒದಗಿ ಬಂದಿದೆ. ಮತದಾರರು ಯಾವುದೇ ಆಸೆ, ಆಮಿಷಕ್ಕೆ ಬಲಿಯಾಗದೆ ಮತದಾನ ಮಾಡಬೇಕು. ಮತದಾನ ಪ್ರಕ್ರಿಯೆಯಿಂದ ದೂರ ಉಳಿಯಬಾರದು. ಮತದಾನ ಪ್ರಮಾಣ ಹೆಚ್ಚಳವಾಗಲು ಶ್ರಮಿಸಬೇಕು ಎಂದು ಹೇಳಿದರು.
ಆನಂತರ ಲಯನ್ಸ್ ಕ್ಲಬ್ ಆವರಣದಲ್ಲಿ ಬೂತ್ ಮಟ್ಟದ ಅಧಿಕಾರಿಗಳಿಗೆ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ ಅವರು ಧ್ವಜಗಳನ್ನು ವಿತರಣೆ ಮಾಡಿದರು.ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀದೇವಿ, ನಗರಸಭೆ ಪೌರಾಯುಕ್ತ ವಿರೂಪಾಕ್ಷ ಮೂರ್ತಿ ಅವರು, ಬಿಎಲ್ಒಗಳ ಕರ್ತವ್ಯಗಳ ಕುರಿತು ಮಾಹಿತಿ ನೀಡಿದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಸನ್ನಕಲ್ಮನಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಮಹೇಶ ಹಿರೇಮಠ, ತೋಟಗಾರಿಕೆ ಸಹಾಯಕ ಅಧಿಕಾರಿ ಶಿವಕುಮಾರ ಗಾಂಜಿ, ಸಿಡಿಪಿಒ ಮೇಲ್ವಿಚಾರಕ ವಿದ್ಯಾವತಿ, ನಗರಸಭೆ ಅಧಿಕಾರಿಗಳು, ತಾಪಂ ಅಧಿಕಾರಿಗಳು, ಸಿಬ್ಬಂದಿ, ಬಿಎಲ್ಒಗಳು ಇದ್ದರು.