ಶಿರಸಿ: ಕನ್ನಡದ ಕಾವ್ಯಗಳ ಅಧ್ಯಯನ ಕೊರತೆಯಿಂದ ಕನ್ನಡದ ಕಾವ್ಯಗಳಿಗೆ ಶರೀರವೇ ಇಲ್ಲದಂತಾಗಿದೆ. ಕನ್ನಡ ಕಾವ್ಯಗಳ ಅಧ್ಯಯನವಾಗಬೇಕು. ಈ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಸಾಹಿತಿ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಮೈಸೂರು ಹೇಳಿದರು.
ಅವರು ತಾಲೂಕಿನ ಬನವಾಸಿಯ ಮಯೂರವರ್ಮ ವೇದಿಕೆಯಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯ ಇಲಾಖೆ ಹಾಗೂ ಬನವಾಸಿ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ನಡೆದ ಕದಂಬೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.ಆದಿಕವಿ ಪಂಪ ಈ ಮಣ್ಣಿನ ಮಗ. ಆದಿ ಪಂಪ ವಿಶೇಷವಾದವನು. ಬನವಾಸಿಯನ್ನು ವರ್ಣಿಸಿದಂತೆ ಕುರುಕ್ಷೇತ್ರವನ್ನೂ ಆತ ವರ್ಣಿಸಿದ್ದಾನೆ. ಪಂಪನ ಕಾವ್ಯ ದಲ್ಲಿ ಕವಿಗಳು ಅನುಸಂಧಾನ ಮಾಡುವಂತಹ ಅಂಶಗಳು ಅಡಗಿವೆ. ಪಂಪನ ಕಾವ್ಯಗಳು ನಮಗೆ ಮಾದರಿಯಾಗಬೇಕು ಎಂದರು.
ಪಂಪನ ಆದರ್ಶ ಗಳನ್ನು, ಮೌಲ್ಯಗಳನ್ನು ನಾವು ಅಳವಡಿಸಿಕೊಳಬೇಕು. ಪಂಪ ಕನ್ನಡದ ಅಸ್ಮಿತೆ.ಪ್ರತಿದಿನವೂ ಪಂಪನನ್ನು ನಾವು ಸ್ಮರಿಸಬೇಕು. ಕದಂಬೋತ್ಸವ ಕನ್ನಡ ತನವನ್ನು ಹೆಚ್ಚಿಸುತ್ತಿದೆ. ಪಂಪನ ಕಾವ್ಯಗಳು ಗಮಕ ವಾಚನದ ಮೂಲಕ ಕದಂಬೋತ್ಸವದಲ್ಲಿ ಇಮ್ಮಡಿ ಗೊಳ್ಳಬೇಕು ಎಂದರು.ಪಂಪನನ್ನು ಅನುಸಂಧಾನ ಮಾಡಬೇಕು. ಕನ್ನಡ ಸಾಹಿತ್ಯದಲ್ಲಿ ಹೊಸ ಶಬ್ದಗಳನ್ನು ಪರಿಚಯಿಸಿದವನು ಪಂಪ. ಇಂದಿಗೂ ಆ ಶಬ್ದಗಳು ಜೀವಂತವಾಗಿದೆ. ಪರಭಾಷಿಕರನ್ನು ಕನ್ನಡಿಕರಿಸುವ ಕಾರ್ಯ ಸರ್ಕಾರದಿಂದ ಆಗಬೇಕು. ಮಯೂರವರ್ಮ ಹುಟ್ಟಿದ ನೆಲ,ಪಂಪಕವಿ ನಡೆದಾಡಿದ ಭೂಮಿ ಸಮೃದ್ಧವಾಗಿರಬೇಕು ಎಂದರು.
ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಕದಂಬರ ನಾಡು ಬನವಾಸಿಯ ಬಗ್ಗೆ ಪಂಪ ಹಾಗೂ ನಾಡನ್ನು ಹಿರಿಯ ಸಾಹಿತಿಗಳು ಹಾಡಿ ಹೋಗಳಿದ್ದಾರೆ. ಕದಂಬ ರಾಜಧಾನಿ ಬನವಾಸಿಯಲ್ಲಿ ಕದಂಬೋತ್ಸವ ಆಚರಿಸುವ ಮೂಲಕ ಬನವಾಸಿ ಅಭಿವೃದ್ಧಿ ಯಾಗುತ್ತಿದೆ. ಇನ್ನು ಅನೇಕ ಅಭಿವೃದ್ಧಿಗಳು ಆಗಬೇಕಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬನವಾಸಿ ಅಭಿವೃದ್ಧಿಗಾಗಿ ಬನವಾಸಿ ಅಭಿವೃದ್ಧಿ ಪ್ರಾಧಿಕಾರ ರಚಿಸಿದ್ದಾರೆ. ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ತರುವ ಮೂಲಕ ಬನವಾಸಿಯನ್ನು ಅಭಿವೃದ್ಧಿ ಮಾಡುವ ಕೆಲಸ ಮುಂದಿನ ದಿನಗಳಲ್ಲಿ ಆಗುತ್ತದೆ. ಕದಂಬೋತ್ಸವದ ಮೂಲಕ, ಸಾಹಿತ್ಯ,ಕಲೆ, ಸಂಸ್ಕೃತಿ ಹಾಗೂ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಕೆಲಸವಾಗುತ್ತಿದೆ ಎಂದರು.ಮುಂದಿನ ದಿನಗಳಲ್ಲಿ ನ್ಯೂನತೆ ರಹಿತವಾಗಿ ಕದಂಬೋತ್ಸವ ಆಚರಣೆಯಾಗುವಂತಾಗಲಿ. ಎಲ್ಲರೂ ಸೇರಿ ಇನ್ನೂ ಹೆಚ್ಚಿನ ರೀತಿಯಲ್ಲಿ ಯಶಸ್ವಿಯಾಗಿ ಉತ್ಸವಗಳು ನಡೆಯಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಬನವಾಸಿಯ ಕದಂಬೋತ್ಸವವನ್ನು ಮಾಡಲೇಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹಾಗೂ ನಾನು ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿ ಯಶಸ್ವಿಯಾಗಿ ಆಚರಣೆ ಮಾಡಿದ್ದೇವೆ. ಅತೀ ಕಡಿಮೆ ಸಮಯದಲ್ಲಿ ವಿಜೃಂಭಣೆಯಿಂದ ಕದಂಬೋತ್ಸವ ನಡೆದಿದೆ.ಸ್ಥಳೀಯ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕಲಾವಿದರಿಗೆ ಅವಕಾಶಗಳನ್ನು ನೀಡುವ ಮೂಲಕ ವಿಜೃಂಭಣೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದೆ. ಬನವಾಸಿ ಯಾವುದೇ ಕ್ಷೇತ್ರಕ್ಕೆ ಸೀಮಿತವಾದ ಪ್ರದೇಶವಲ್ಲ. ಕನ್ನಡದ ಮೊದಲ ರಾಜಧಾನಿ ಇದು. ಕನ್ನಡ ಭವನಕ್ಕೆ ಪ್ರಸ್ತಾವನೆ ಕಳುಹಿಸಿ ಬನವಾಸಿಯಲ್ಲಿ ಪಂಪ ಭವನ ನಿರ್ಮಾಣ ಮಾಡಲಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಕೆ ಲಕ್ಷ್ಮೀ ಪ್ರೀಯ ಮಾತನಾಡಿ, ಎರಡು ದಿನಗಳ ಕಾಲ ಬನವಾಸಿಯಲ್ಲಿ ಬಹಳ ವಿಜೃಂಭಣೆಯಿಂದ ಕದಂಬೋತ್ಸವ ಆಚರಣೆ ಮಾಡಲಾಗಿದೆ. ಕದಂಬೋತ್ಸವವನ್ನು ಯಶಸ್ವಿಯಾಗಿ ನಡೆಸುವ ಉದ್ದೇಶದಿಂದ ಹಲವು ಸಮಿತಿಗಳನ್ನು ರಚಿಸಲಾಗಿದ್ದು. ಸಮಿತಿಯ ಪ್ರತಿಯೊಬ್ಬ ಸದಸ್ಯರು ಬಹಳ ಶ್ರಮಪಟ್ಟು ಕೆಲಸ ಮಾಡಿದ್ದಾರೆ ಎಂದರು.ಇದೇ ಸಂದರ್ಭದಲ್ಲಿ ಕಬ್ಬಿನಾಲೆ ವಸಂತ ಭಾರದ್ವಾಜ, ಶಾಸಕರಾದ ಶಿವರಾಮ ಹೆಬ್ಬಾರ, ಭೀಮಣ್ಣ ನಾಯ್ಕ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಶಿರಸಿ ಸಹಾಯಕ ಆಯುಕ್ತೆ ಕಾವ್ಯರಾಣಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರೀಯಾ, ಅಪರ ಜಿಲ್ಲಾಧಿಕಾರಿ ಸಾಜೀದ್ ಅಹ್ಮದ್ ಮುಲ್ಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಮಂಗಲಾ ನಾಯಕ, ಬನವಾಸಿ ಗ್ರಾಪಂ ಅಧ್ಯಕ್ಷೆ ಬಿಬಿ ಆಯಿಷಾ ಖಾನ್, ಗುಡ್ನಾಪುರ ಗ್ರಾಪಂ ಅಧ್ಯಕ್ಷೆ ನಿರ್ಮಲಾ ನಾಯ್ಕ ಮತ್ತಿತರರು ಇದ್ದರು.