ರಕ್ತದಾನ ಜಾಗೃತಿ ಮೂಡಲಿ: ಡಾ. ರಾಧಾಕೃಷ್ಣ

KannadaprabhaNewsNetwork |  
Published : Jun 19, 2026, 03:00 AM IST
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ನಡೆಯಿತು | Kannada Prabha

ಸಾರಾಂಶ

ಇಲ್ಲಿನ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಸ್ವಯಂಪ್ರೇರಿತ ರಕ್ತದಾನಿಗಳು, ಪ್ರೇರಕರು ಮತ್ತು ಸಂಘಟಕರ ಅಮೂಲ್ಯ ಕೊಡುಗೆಗಳನ್ನು ಗುರುತಿಸಲು ಮೀಸಲಾಗಿರುವ ವಿಶ್ವ ರಕ್ತದಾನಿಗಳ ದಿನವನ್ನು ಗುರುವಾರ ಆಚರಿಸಲಾಯಿತು.

ಮಣಿಪಾಲ: ಇಲ್ಲಿನ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಸ್ವಯಂಪ್ರೇರಿತ ರಕ್ತದಾನಿಗಳು, ಪ್ರೇರಕರು ಮತ್ತು ಸಂಘಟಕರ ಅಮೂಲ್ಯ ಕೊಡುಗೆಗಳನ್ನು ಗುರುತಿಸಲು ಮೀಸಲಾಗಿರುವ ವಿಶ್ವ ರಕ್ತದಾನಿಗಳ ದಿನವನ್ನು ಗುರುವಾರ ಆಚರಿಸಲಾಯಿತು.

ಬಂಟಕಲ್ಲಿನ ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರೊ. ಡಾ. ರಾಧಾಕೃಷ್ಣ ಎಸ್. ಐತಾಳ್ ಕಾರ್ಯಕ್ರಮ ಉದ್ಘಾಟಿಸಿದರು. ರಕ್ತದಾನವು ಅತ್ಯಂತ ಅರ್ಥಪೂರ್ಣ ಸೇವಾ ಕಾರ್ಯಗಳಲ್ಲಿ ಒಂದಾಗಿದೆ. ಈ ಸೇವಾ ಕಾರ್ಯವು ಅಸಂಖ್ಯಾತ ಜೀವಗಳನ್ನು ಉಳಿಸುತ್ತದೆ. ಆದ್ದರಿಂದ ರಕ್ತದಾನದ ಬಗ್ಗೆ ಶಿಕ್ಷಣ ಸಂಸ್ಥೆಗಳು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮಾತನಾಡಿ, ಪ್ರಪಂಚದಾದ್ಯಂತ ಅನೇಕ ದೇಶಗಳು ನಿಯಮಿತ ಸ್ವಯಂಪ್ರೇರಿತ ರಕ್ತದಾನದ ಪ್ರಬಲ ಸಂಸ್ಕೃತಿಯನ್ನು ನಿರ್ಮಿಸಿವೆ. ಆದರೆ ಏಷ್ಯಾ ಮತ್ತು ಆಫ್ರಿಕಾದ ರಾಷ್ಟ್ರಗಳಲ್ಲಿ ಈ ಸಂಸ್ಕೃತಿ ಇನ್ನಷ್ಟು ಜಾಗೃತಿಗೊಂಡು ಸಮುದಾಯದ ಭಾಗವಹಿಸುವಿಕೆ ಹೆಚ್ಚಬೇಕಾಗಿದೆ ಎಂದರು.

ಎಂಜಿಎಂ ಸಂಜೆ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ಎಸ್. ನಾಯಕ್ ಮತ್ತು ಮಾಹೆ ಬೋಧನಾ ಆಸ್ಪತ್ರೆಗಳ ಸಿಒಒ ಡಾ. ಸುಧಾಕರ್ ಕಂಟಿಪುಡಿ ಉಪಸ್ಥಿತರಿದ್ದರು.ಅತ್ಯಧಿಕ ಸಂಖ್ಯೆಯ ರಕ್ತದಾನ ಶಿಬಿರಗಳ ಸಂಘಟಕರು, ಪ್ರೇರಕರು ಮತ್ತು ಸ್ವಯಂ ರಕ್ತದಾನ ಸೇವೆಗಾಗಿ 80ಕ್ಕಿಂತ ಹೆಚ್ಚು ಸಂಘ ಸಂಸ್ಥೆಗಳನ್ನು ಮತ್ತು ದಾನಿಗಳನ್ನು ಗೌರವಿಸಲಾಯಿತು. ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ರಕ್ತ ಕೇಂದ್ರದ ಅತ್ಯುತ್ತಮ ತಾಂತ್ರಿಕ ಸಿಬ್ಬಂದಿ ಮತ್ತು ಅತ್ಯುತ್ತಮ ತಾಂತ್ರಿಕೇತರ ಸಿಬ್ಬಂದಿಗಳಿಗೆ ಡಾ. ಸತೀಶ್ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಪ್ರಶಸ್ತಿ ವಿತರಿಸಲಾಯಿತು.ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ವರ್ಣಚಿತ್ರವೊಂದನ್ನು ಆಸ್ಪತ್ರೆಯ ಹೊರ ರೋಗಿ ವಿಭಾಗದಲ್ಲಿ ಅನಾವರಣಗೊಳಿಸಲಾಯಿತು. ಸಮುದಾಯ ವೈದ್ಯಕೀಯ ವಿಭಾಗದ ಕಲಾವಿದ ಶ್ರೀನಾಥ್ ಮಣಿಪಾಲ್ ಈ ಕಲಾಕೃತಿ ರಚಿಸಿದ್ದರು.

ರಕ್ತಪೂರಣ ಔಷಧ ವಿಭಾಗದ ಪ್ರಾಧ್ಯಾಪಕಿ ಡಾ. ಶಮೀ ಶಾಸ್ತ್ರಿ ಸ್ವಾಗತಿಸಿ, ಕಾರ್ಯಕ್ರಮದ ಅವಲೋಕನ ನೀಡಿದರು. ರಕ್ತ ಕೇಂದ್ರ ಮತ್ತು ರಕ್ತಪೂರಣ ಔಷಧ ವಿಭಾಗದ ಮುಖ್ಯಸ್ಥ ಡಾ. ಗಣೇಶ್ ಮೋಹನ್ ವಂದಿಸಿದರು. ವಿಶ್ವೇಶ್ ಎನ್. ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉನ್ನತ ಹುದ್ದೆಗಳಲ್ಲಿ ಶಿಕ್ಷಕ ಹುದ್ದೆ ಅತ್ಯಂತ ಶ್ರೇಷ್ಠ
ಪ್ರೊ.ಕೆ.ಎಸ್.ಭಗವಾನ್ ವಿರುದ್ಧ ಠಾಣೆಗೆ ದೂರು