ಏಕೀಕರಣಕ್ಕಾಗಿ ಹೋರಾಡಿದವರ ಸ್ಮರಿಸೋಣ

KannadaprabhaNewsNetwork | Published : Nov 2, 2024 1:31 AM

ಸಾರಾಂಶ

ರಾಮನಗರ: ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಸ್ಮರಣೀಯರ ಸಂಖ್ಯೆ ಬಹುದೊಡ್ಡದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ರಾಮನಗರ: ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಸ್ಮರಣೀಯರ ಸಂಖ್ಯೆ ಬಹುದೊಡ್ಡದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಡೆಪ್ಯೂಟಿ ಚನ್ನಬಸಪ್ಪ, ಹುಯಿಲಗೋಳ ನಾರಾಯಣ ರಾವ್, ಅನಕೃ, ಪಾಟೀಲ ಪುಟ್ಟಪ್ಪ ಸೇರಿದಂತೆ ಹಲವು ಮಹನೀಯರು ಹಾಗೂ ಅಸಂಖ್ಯಾತ ಸಾಹಿತಿಗಳನ್ನು, ಲೇಖಕರನ್ನು, ಸಂಘ ಸಂಸ್ಥೆಗಳನ್ನು ಹಾಗೂ ಹೋರಾಟಗಾರರನ್ನು ನೆನೆಯಬೇಕು ಎಂದು ಹೇಳಿದರು.

ಇಂದು ಅಖಂಡ ಕರ್ನಾಟಕ ಅಸ್ತಿತ್ವಕ್ಕೆ ಬಂದ ದಿನ. 1956ಕ್ಕೂ ಮೊದಲು ಕರ್ನಾಟಕ ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿತ್ತು. ದಕ್ಷಿಣದ ಕೆಲವು ಜಿಲ್ಲೆಗಳು ಮೈಸೂರು ಸಂಸ್ಥಾನದಲ್ಲಿದ್ದರೆ, ಕಲಬುರಗಿ, ಬೀದರ, ರಾಯಚೂರು ಜಿಲ್ಲೆಗಳು ಹೈದರಾಬಾದ್ ನಿಜಾಮರ ಆಳ್ವಿಕೆಗೆ ಒಳಪಟ್ಟಿದ್ದವು. ರಾಜ್ಯದ ವಾಯುವ್ಯ ಭಾಗ ಮುಂಬೈ ಪ್ರಾಂತ್ಯಕ್ಕೆ ಸೇರಿದ್ದರೆ, ದಕ್ಷಿಣ ಕನ್ನಡ, ಕೊಳ್ಳೇಗಾಲ, ಬಳ್ಳಾರಿ ಮುಂತಾದ ಪ್ರದೇಶಗಳು ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ್ದವು. ಕೊಡಗು ಜಿಲ್ಲೆ ಬ್ರಿಟಿಷರ ಒಂದು ಅಧೀನ ರಾಜ್ಯವಾಗಿ ಉಳಿದಿತ್ತು ಎಂದರು.

ಸ್ವಾತಂತ್ರ್ಯದ ನಂತರ ಪ್ರತ್ಯೇಕ ರಾಜ್ಯದ ಕೂಗು ಕೇಳಿಸಿದಾಗ ಆಂಧ್ರ ಪ್ರದೇಶದಲ್ಲಿ ತೆಲುಗು ಮಾತನಾಡುವವರು ಶ್ರೀ ಪೊಟ್ಟಿ ಶ್ರೀರಾಮುಲು ರವರ ನೇತೃತ್ವದಲ್ಲಿ ಒಂದು ದೊಡ್ಡ ಪ್ರಮಾಣದಲ್ಲಿ ಅಮರಣಾಂತರ ಉಪವಾಸ ಸತ್ಯಾಗ್ರಹವನ್ನು ಕೈಗೊಂಡು ಮಡಿದರು.

ಆಗಿನ ಮದ್ರಾಸ್ ಮುಖ್ಯಮಂತ್ರಿಯಾಗಿದ್ದ ರಾಜಗೋಪಾಲಚಾರಿ ತೆಲುಗು ಮಾತನಾಡುವವರನ್ನು ಆಂಧ್ರ ಪ್ರದೇಶವೆಂದು ಪ್ರತ್ಯೇಕ ರಾಜ್ಯ ಮಾಡುವುದು ಸೂಕ್ತವೆಂದು ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರಿಗೆ ಪತ್ರ ಬರೆಯುತ್ತಾರೆ. ಆಗ ನೆಹರುರವರು ಒಂದು ಸಮಿತಿಯನ್ನು ರಚಿಸಿ ವರದಿಯನ್ನು ಪಡೆದು ಭಾಷೆಯ ಆಧಾರಿತ ರಾಜ್ಯಗಳನ್ನು ರಚಿಸಲು ಅನುಮೋದನೆ ನೀಡುತ್ತಾರೆ. 1956ರ ನವೆಂಬರ್ 1ರಂದು ಮೈಸೂರು ರಾಜ್ಯವೆಂದು ನಾಮಕರಣಗೊಂಡು ಉದಯವಾಯಿತು ಎಂದು ಹೇಳಿದರು.

ಭಾರತದ ಇತರ ಭಾಗಗಳಲ್ಲಿಯೂ ಸಹ ಭಾಷಾವಾರು ವಿಂಗಡಣೆ ಮಾಡಿ 1960ರಲ್ಲಿ ಬಾಂಬೆ ರಾಜ್ಯವನ್ನು ವಿಭಜಿಸಿ ಮಹಾರಾಷ್ಟ್ರ ಮತ್ತು ಗುಜರಾತ್ ಎಂದು ಎರಡು ರಾಜ್ಯವನ್ನಾಗಿ ವಿಂಗಡಿಸಲಾಯಿತು. 1969ರಲ್ಲಿ ಮದ್ರಾಸ್ ರಾಜ್ಯವನ್ನು ತಮಿಳುನಾಡು ಎಂದು ಮರುನಾಮಕರಣ ಮಾಡಲಾಯಿತು. ಆನಂತರ ಮೈಸೂರು ರಾಜ್ಯವನ್ನು ನವೆಂಬರ್ 1 1973 ರಂದು ಅಂದಿನ ಮುಖ್ಯಮಂತ್ರಿಗಳಾದ ದಿವಂಗತ ಡಿ.ದೇವರಾಜ ಅರಸರವರು ವಿಶಾಲಾರ್ಥದಲ್ಲಿ ''''''''ಕರ್ನಾಟಕ'''''''' ಎಂದು ಮರು ನಾಮಕರಣ ಮಾಡಿ ಇಂದಿಗೆ 51 ವರ್ಷ ಪೂರ್ಣಗೊಂಡಿದೆ ಎಂದು ರಾಮಲಿಂಗಾರೆಡ್ಡಿ ಇತಿಹಾಸ ಮೆಲುಕು ಹಾಕಿದರು.

ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಮತ್ತಿತರರು ಉಪಸ್ಥಿತರಿದ್ದರು.

ಚೆಂದದ ಒಂದು ಅಥವಾ ಎರಡು ಫೋಟೋ ಬಳಸಿ ಒಂದು ಪ್ಯಾನಲ್‌ನಗೆ ಬಳಸಿ)

1ಕೆಆರ್ ಎಂಎನ್ 1,2,3,4.ಜೆಪಿಜಿ

1.ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.

2.ಸಚಿವ ರಾಮಲಿಂಗಾರೆಡ್ಡಿರವರು ಕವಾಯಿತು ತಂಡಗಳಿಗೆ ಗೌರವ ಸಲ್ಲಿಸಿದರು.

3.ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸಾಂಸ್ಕೃತಿಕ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಸಚಿವ ರಾಮಲಿಂಗಾರೆಡ್ಡಿ ಬಹುಮಾನ ವಿತರಿಸಿದರು.

4.ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸಾಂಸ್ಕೃತಿಕ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಸಚಿವ ರಾಮಲಿಂಗಾರೆಡ್ಡಿ ಬಹುಮಾನ ವಿತರಿಸಿದರು.

Share this article