ಕಲಾವಿದರು ಪ್ರೇಕ್ಷಕರನ್ನು ಹಿಡಿದುಕೊಳ್ಳುವ ಸಾಮರ್ಥ್ಯ ರೂಢಿಸಿಕೊಳ್ಳಲಿ

KannadaprabhaNewsNetwork | Published : Oct 10, 2024 2:20 AM

ಟಿವಿ, ಸಿನಿಮಾ, ಮೊಬೈಲ್ ಹಾವಳಿಯಿಂದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ಕಷ್ಟ ಎಂಬ ಮಾತಿದೆ.

ಬಳ್ಳಾರಿ: ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ರೂಢಿಸಿಕೊಂಡರೆ ಮಾತ್ರ ಕಲಾವಿದ ಉಳಿದು ಬೆಳೆಯಲು ಸಾಧ್ಯ ಎಂದು ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ ಹೇಳಿದರು.ಆಲಾಪ್ ಸಂಗೀತ ಕಲಾ ಟ್ರಸ್ಟ್ ವತಿಯಿಂದ ನಗರದ ಬ್ಯಾಂಕ್ ಕಾಲನಿಯಲ್ಲಿ ಆಯೋಜಿಸಲಾಗಿದ್ದ ದಸರಾ ಭಾವ ಸಂಗಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಟಿವಿ, ಸಿನಿಮಾ, ಮೊಬೈಲ್ ಹಾವಳಿಯಿಂದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ಕಷ್ಟ ಎಂಬ ಮಾತಿದೆ. ಆದರೆ, ಕಲಾವಿದರು ತಮ್ಮಲ್ಲಿರುವ ಕಲಾ ಸಾಮರ್ಥ್ಯದಿಂದ ಜನರನ್ನು ಹಿಡಿದುಕೊಳ್ಳಲು ಸಾಧ್ಯವಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಜನರು ಹೆಚ್ಚು ಆಸಕ್ತಿಯಿಂದ ಬರುತ್ತಾರೆ. ಆದರೆ, ಪ್ರೇಕ್ಷಕರ ನಿರೀಕ್ಷೆಯನ್ನು ಕಲಾವಿದರು ಹುಸಿಗೊಳಿಸಬಾರದು ಎಂದು ಸಲಹೆ ನೀಡಿದರು.

ನಿವೃತ್ತ ಬ್ಯಾಂಕ್ ನೌಕರ ಗೆಣಿಕೆ ಹಾಳು ಶಾಂತಪ್ಪ ಅವರು ಮಾತನಾಡಿ, ಬ್ಯಾಂಕ್ ಕಾಲೋನಿಯ ಉದ್ಯಾನವನದಲ್ಲಿ ಆಲಾಪ್ ಸಂಗೀತ ಕಲಾ ಟ್ರಸ್ಟ್, ಬಳ್ಳಾರಿ ಜಿಲ್ಲಾ ಕಲಾವಿದರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಕಲಾ ಟ್ರಸ್ಟ್ ನ ಅಧ್ಯಕ್ಷ ರಮಣಪ್ಪ ಭಜಂತ್ರಿ ಪ್ರಾಸ್ತಾವಿಕ ಮಾತನಾಡಿದರು.

ನಿವೃತ್ತ ಬ್ಯಾಂಕ್ ನೌಕರ ಬಸವರಾಜ, ನೃತ್ಯಗುರು ಎಸ್.ಕೆ.ಜಿಲಾನಿ ಬಾಷಾ, ಸೂರ್ಯ ಕಲಾ ಟ್ರಸ್ಟ್ ಅಧ್ಯಕ್ಷ ಕೆ.ಸಿ. ಸುಂಕಣ್ಣ, ರಾಘವ ಮೆಮೋರಿಯಲ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಎಂ.ರಾಮಾಂಜನೇಯಲು, ಹಿಂದೂಸ್ತಾನಿ ಗಾಯಕ ರಾಘವೇಂದ್ರ ಗೂಡುದೂರು, ಜ್ಯೋತಿ ಯಲ್ಲನಗೌಡ, ತೊಗಲುಗೊಂಬೆ ಕಲಾವಿದ ಸುಬ್ಬಣ್ಣ, ರಾಜಶೇಖರ, ರಾಜೇಶ್ ,ನಾಗನ ಗೌಡ, ಶಿವರುದ್ರ ಸ್ವಾಮಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬಳಿಕ ರಾಘವೇಂದ್ರ ಗೂಡುದೂರು ಮತ್ತು ತಂಡದಿಂದ ವಚನ ಗಾಯನ, ಎಮ್ಮಿಗನೂರು ಜಡೆಪ್ಪ ಮತ್ತು ತಂಡದಿಂದ ಜಾನಪದ ಗಾಯನ, ಎಸ್ ಕೆ ಜಿಲಾನಿ ಬಾಷಾ ಮತ್ತು ತಂಡದಿಂದ ಜಾನಪದ ನೃತ್ಯ, ಸೂರ್ಯ ಕಲಾ ಟ್ರಸ್ಟ್ ವತಿಯಿಂದ ಸಮೂಹ ನೃತ್ಯವನ್ನು ಪ್ರದರ್ಶನಗಳು ಜರುಗಿದವು.

ವೀರೇಶ ದಳವಾಯಿ ಕಾರ್ಯಕ್ರಮ ನಿರ್ವಹಿಸಿದರು.

ಬಳ್ಳಾರಿಯ ಬ್ಯಾಂಕ್ ಕಾಲನಿಯಲ್ಲಿ ಆಲಾಪ್ ಸಂಗೀತ ಕಲಾ ಟ್ರಸ್ಟ್ ನಿಂದ ಹಮ್ಮಿಕೊಂಡಿದ್ದ ದಸರಾ ಭಾವಸಂಗಮ ಕಾರ್ಯಕ್ರಮಕ್ಕೆ ಕಲಾವಿದ ಯಲ್ಲನಗೌಡ ಶಂಕರಬಂಡೆ ಚಾಲನೆ ನೀಡಿದರು.