ಯಲಬುರ್ಗಾ: ಐದು ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯಡಿ ತಾಲೂಕಿನಲ್ಲಿ ೬೧ ಮಹಿಳಾ ಫಲಾನುಭವಿಗಳಿಗೆ ಇದುವರೆಗೂ ಹಣ ಪಾವತಿಯಾಗಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ದಾಖಲೆ ಸಂಗ್ರಹಿಸಿ ಹಣ ಪಾವತಿಯಾಗುವಂತೆ ಕ್ರಮ ವಹಿಸಬೇಕೆಂದು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಸುಧೀರ ಕರ್ಲಹಳ್ಳಿ ಸೂಚಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ನಡೆದ ಅನುಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಅರ್ಹ ಫಲಾನುಭವಿಗಳಿಗೆ ಸರ್ಕಾರದ ಗ್ಯಾರಂಟಿ ಯೋಜನೆಗಳ ಸೌಲಭ್ಯ ದೊರೆಯಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಅಧಿಕಾರಿಗಳು ಸೌಲಭ್ಯ ವಂಚಿತ ಫಲಾನುಭವಿಗಳ ಗುರುತಿಸಿ ತಲುಪಿಸಬೇಕು ಎಂದರು.
ತಾಲೂಕಿನಲ್ಲಿ ಅನ್ನಭಾಗ್ಯ ಯೋಜನೆಯ ಪಡಿತರ ಚೀಟಿಗಳು ಎಷ್ಟು ರದ್ದಾಗಿವೆ? ರದ್ದಾಗಿರುವ ಮಾಹಿತಿ ಫಲಾನುಭವಿಗಳಿಗೆ ಹೇಗೆ ತಿಳಿಯುತ್ತದೆ ಎಂದು ಸುಧೀರ ಕರ್ಲಹಳ್ಳಿ ಆಹಾರ ಇಲಾಖೆ ಶಿರಸ್ತೇದಾರ ಮಲ್ಲಿಕಾರ್ಜುನ ಶಾಸ್ತ್ರೀಮಠರನ್ನು ಪ್ರಶ್ನಿಸಿದರು.ಶಾಸ್ತ್ರೀಮಠ ಪ್ರತಿಕ್ರಿಯಿಸಿ, ತಾಲೂಕಿನಲ್ಲಿ ಈಗಾಗಲೇ ೧೯೦೦ಕ್ಕೂ ಅಧಿಕ ಪಡಿತರ ಚೀಟಿ ರದ್ದಾಗಿವೆ. ಅಲ್ಲದೆ ಇನ್ನೂ ೫೩೨ ಖೋಟಿಗಳ ರದ್ಧತಿಗೆ ಆದೇಶ ಬಂದಿದೆ. ಕಾರ್ಡ್ಕ ರದ್ದಾಗಿರುವ ಬಗ್ಗೆ ಫಲಾನುಭವಿಗಳ ಮೊಬೈಲ್ಗೆ ಸಂದೇಶ ಹೋಗುತ್ತದೆ. ನಿಜವಾದ ಅರ್ಹ ಫಲಾನುಭವಿಗಳ ಚೀಟಿ ರದ್ದಾಗಿದ್ದರೆ ಆಹಾರ ಇಲಾಖೆಗೆ ೪೫ ದಿನಗಳ ಒಳಗಾಗಿ ಸೂಕ್ತ ದಾಖಲಾತಿ ಸಲ್ಲಿಸುವ ಮೂಲಕ ಕಾರ್ಡ್ ಪಡೆಯಬಹುದು ಎಂದು ಸಭೆಯ ಗಮನಕ್ಕೆ ತಂದರು. ಪಡಿತರ ಆಹಾರ ಧಾನ್ಯಗಳನ್ನು ತಿಂಗಳಾದ್ಯಂತ ವಿತರಣೆಗೆ ಕ್ರಮ ವಹಿಸಬೇಕು ಎಂದು ಸುಧೀರ ಕರ್ಲಹಳ್ಳಿ ನಿರ್ದೇಶನ ನೀಡಿದರು.
ಅನ್ನ ಸುವಿಧಾ ಯೋಜನೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಇದುವರೆಗೂ ತಾಲೂಕಿನಲ್ಲಿ ಏಕವ್ಯಕ್ತಿ ಇರುವ ೭೫ ವರ್ಷದ ೪೧೬ ಫಲಾನುಭವಿಗಳನ್ನು ಗುರುತಿಸಲಾಗಿದೆ. ಆಯ್ಕೆಯಾದ ಫಲಾನುಭವಿ ಮನೆಗೆ ನೇರವಾಗಿ ಆಹಾರ ಕಿಟ್ ತಲುಪಿಸಲಾಗುತ್ತದೆ. ಇದುವರೆಗೂ ೪೧ ಜನ ನೋಂದಣಿಯಾಗಿದ್ದಾರೆ. ಉಳಿದವರು ನೋಂದಣಿ ಮಾಡಿಕೊಂಡು ಸೌಲಭ್ಯ ಪಡೆದುಕೊಳ್ಳಬೇಕು ಎಂದು ಶಾಸ್ತ್ರೀಮಠ ತಿಳಿಸಿದರು.ಗ್ಯಾರಂಟಿ ಸಮಿತಿ ಸದಸ್ಯ ಬೀರಪ್ಪ ಕಲ್ಲಪ್ಪನವರ ಮಾತನಾಡಿ, ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಬೀದಿ ದೀಪ ನಿರಂತರ ಉರಿಯುತ್ತಿವೆ. ಇದು ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತದೆ. ಕೆಲ ಲೈನಮನ್ಗಳು ಮೀಟರ್ ರೀಡಿಂಗ್ ವೀಕ್ಷಣೆ ಮಾಡದೆ ಅಂದಾಜು ಬಿಲ್ ಬರೆಯುತ್ತಿರುವ ಬಗ್ಗೆ ಆರೋಪ ಕೇಳಿಬರುತ್ತಿದ್ದು, ಇದಕ್ಕೆ ಅವಕಾಶ ಮಾಡಿ ಕೊಡಬಾರದು. ತಾಲೂಕಿನಲ್ಲಿ ಇದುವರೆಗೂ ೩೯೩ ಫಲಾನುಭವಿಗಳು ಗೃಹಜ್ಯೋತಿ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಬಾಕಿ ಉಳಿದುಕೊಂಡಿದ್ದಾರೆ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು.
ಈ ಸಂದರ್ಭದಲ್ಲಿ ತಾಪಂ ಇಒ ನೀಲಗಂಗಾ ಬಬಲಾದ, ಅಂಗನವಾಡಿ ವಲಯ ಮೇಲ್ವಿಚಾರಕಿ ಮಾಧವಿ ವೈದ್ಯ, ಗ್ಯಾರಂಟಿ ಯೋಜನೆ ಸಮಿತಿ ಸದಸ್ಯ ಗವಿಸಿದ್ದಪ್ಪ ಚಂಡೂರ, ಹುಲಗಪ್ಪ ಬಂಡಿವಡ್ಡರ, ಪುನೀತ ಕೊಪ್ಪಳ ಹಾಗೂ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.