ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕೂಗಿಗೆ ಸ್ಪಂದನೆ ಸಿಗಲಿ: ಅಜಿತ ಹನುಮಕ್ಕನವರ

KannadaprabhaNewsNetwork | Published : Oct 22, 2024 12:10 AM

ಸಾರಾಂಶ

ನಮ್ಮ ನೆಲದ ಜ್ಞಾನದ ಪರಂಪರೆ ಕಳೆದುಹೋಗುತ್ತಿದೆ. ರೈತರು, ಆದಿವಾಸಿಗಳ ಜ್ಞಾನ ಪರಂಪರೆ ಎಲ್ಲೋ ಒಂದು ಕಡೆ ತುಂಡಾಗಿದ್ದು, ಅನೇಕ ಸಮಸ್ಯೆಗಳಿಗೆ ಕಾರಣವಾದವು ಎಂದು ಪತ್ರಕರ್ತ ಅಜಿತ್ ಹನುಮಕ್ಕನವರ ತಿಳಿಸಿದರು.

ಶಿರಸಿ: ಬಹುಕಾಲದಿಂದ ಉತ್ತರ ಕನ್ನಡದಲ್ಲಿ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ ಇದೆ. ರಾಜ್ಯ ಪತ್ರಿಕೋದ್ಯಮ ನಡೆಸುವವರೂ ಬಹುತೇಕ ಇದೇ ಜಿಲ್ಲೆಯವರೇ ಆಗಿದ್ದು, ಅವರಿಗೂ ಏನಾದರೂ ತಮ್ಮ ಜಿಲ್ಲೆಗೆ ಮಾಡಬೇಕು ಎಂಬುದಿದೆ ಎಂದು ಹಿರಿಯ ಪತ್ರಕರ್ತ ಅಜಿತ್ ಹನುಮಕ್ಕನವರ ತಿಳಿಸಿದರು.ಭಾನುವಾರ ನಗರದಲ್ಲಿ ಭಾರತೀಯ ವೈದ್ಯಕೀಯ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಜಿಲ್ಲೆಯ ಜನರು ಹಲವಾರು ಬಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆ ಕೊರತೆ ನೀಗಿಸುವ ಕಾರ್ಯವನ್ನು ಭಾರತೀಯ ವೈದ್ಯಕೀಯ ಸಂಘ ಮಾಡುತ್ತಿದೆ ಎಂದರು.

ನಮ್ಮ ನೆಲದ ಜ್ಞಾನದ ಪರಂಪರೆ ಕಳೆದುಹೋಗುತ್ತಿದೆ. ರೈತರು, ಆದಿವಾಸಿಗಳ ಜ್ಞಾನ ಪರಂಪರೆ ಎಲ್ಲೋ ಒಂದು ಕಡೆ ತುಂಡಾಗಿದ್ದು, ಅನೇಕ ಸಮಸ್ಯೆಗಳಿಗೆ ಕಾರಣವಾದವು. ಆ ಜ್ಞಾನದ ಹರಿವು ಕತ್ತರಿಸಿದ್ದೇ ಮುಂದೆ ದೊಡ್ಡ ಅನಾಹುತಕ್ಕೆ ಕಾರಣವಾಯಿತು. ಆ ಜ್ಞಾನ ಮುಂದುವರಿದರೆ ನಿರೋಗಿ ಬದುಕಾಗಿಸಲು ಸಾಧ್ಯವಿತ್ತಾ ಎಂದೂ ನೋಡುವಂತಾಗಿದೆ ಎಂದರು.ಕುಮಟಾದ ಪ್ರಸಿದ್ಧ ವೈದ್ಯ ಡಾ. ಜಿ.ಜಿ. ಹೆಗಡೆ ಪ್ರಮಾಣವಚನ ಬೋಧಿಸಿ, ವೈದ್ಯಕೀಯ ವೃತ್ತಿಯಲ್ಲಿ ಸ್ನೇಹ ಇರಬೇಕು. ವೈದ್ಯರಲ್ಲಿ ಪರಸ್ಪರ ನಂಬಿಕೆ, ಸ್ನೇಹ ಇರಬೇಕು. ನವ ವೈದ್ಯರ ನಡುವೆ ಸವಾಲು ಕೂಡ ಇದೆ. ಎಡವುತ್ತಿರುವ ವೈದ್ಯರು ಗಮನಿಸಿ ನಡೆಯಬೇಕಿದೆ. ಶಿರಸಿಯ ವೈದ್ಯರು ಸೇರಿ ಒಂದು ಖಾಸಗಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕು ಎಂದರು.ನೂತನ ಅಧ್ಯಕ್ಷ ಡಾ. ಕೃಷ್ಣಮೂರ್ತಿ ಹೆಗಡೆ, ಕೇವಲ ವೈದ್ಯಕೀಯ ತಜ್ಞರ ಜತೆ ಸಮಾಜಮುಖಿ ಕಾರ್ಯವನ್ನೂ ನಡೆಸಬೇಕಾಗಿದೆ ಎಂದರು.ವೇದಿಕೆಯಲ್ಲಿ ಕಾರ್ಯದರ್ಶಿ ಶ್ರೀಶೃತಿ ಹೆಗಡೆ, ಖಜಾಂಚಿ ಕೆ.ಸಿ. ಪೃಥ್ವಿಚಂದ್ರ, ನಿಕಟಪೂರ್ವ ಅಧ್ಯಕ್ಷ ಡಾ. ಮಧುಕೇಶ್ವರ ಜಿ.ವಿ., ನಿಕಟಪೂರ್ವ ಕಾರ್ಯದರ್ಶಿ ಡಾ. ಸುಮನ್ ಹೆಗಡೆ, ಡಾ. ದಿನೇಶ ಹೆಗಡೆ ಇತರರು ಇದ್ದರು.ಮೆಡಿಕಲ್‌ ಕಾಲೇಜು: ಶಿರಸಿಯಲ್ಲಿ ಖಾಸಗಿ ಮೆಡಿಕಲ್ ಕಾಲೇಜು ಆರಂಭಿಸಬೇಕು. ಇದಕ್ಕೆ ಶಿರಸಿ ವೈದ್ಯರು, ಐಎಂಎ ಮುಂದಾಗಬೇಕು. ಮೆಡಿಕಲ್ ಹಾಗೂ ಪ್ರವಾಸೋದ್ಯಮದಿಂದ ಮಾತ್ರ ಜಿಲ್ಲೆ ಬೆಳೆಸಲು ಸಾಧ್ಯವಿದೆ ಎಂದು ವೈದ್ಯರಾದ ಡಾ. ಜಿ.ಜಿ. ಹೆಗಡೆ ತಿಳಿಸಿದರು.

Share this article