ನೈತಿಕ ಹೊಣೆ ಹೊತ್ತು ಸಿಎಂ ರಾಜಿನಾಮೆ ನೀಡಲಿ: ಮುರಳಿ

KannadaprabhaNewsNetwork | Published : Aug 5, 2024 12:31 AM

ಸಾರಾಂಶ

ಬಿಜೆಪಿ-ಜೆಡಿಎಸ್‌ ವತಿಯಿಂದ ಹಮ್ಮಿಕೊಂಡಿರುವ ಬೆಂಗಳೂರು- ಮೈಸೂರು ಪಾದಯಾತ್ರೆಗೆ ಚಿತ್ರದುರ್ಗದಿಂದ ಭಾನುವಾರ ಕಾರ್ಯರ್ತರು ತೆರಳಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರು. ಭ್ರಷ್ಠಾಚಾರ, ಮುಡಾ ನಿವೇಶನ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್‌ ಜಂಟಿಯಾಗಿ ಹಮ್ಮಿಕೊಂಡಿರುವ ಬೆಂಗಳೂರು-ಮೈಸೂರು ಚಲೋ ಪಾದಯಾತ್ರೆಗೆ ಚಿತ್ರದುರ್ಗ ಜಿಲ್ಲೆಯಿಂದ 20 ಬಸ್‌ಗಳಲ್ಲಿ ಸಾವಿರ ತೆರಳಿದ್ದಾರೆ.

ಅದೇ ರೀತಿ ಚಿತ್ರದುರ್ಗ ನಗರದ ಒನಕೆ ಓಬವ್ವ ವೃತ್ತದಿಂದ ಬಿಜೆಪಿ ಮುಖಂಡರು ಹಾಗೂ ಕಾರ್ಯಕತರು ಎರಡು ಬಸ್‌ಗಳಲ್ಲಿ ಪ್ರಯಾಣ ಬೆಳೆಸಿದರು.

ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿಗೆ ಬಳಸಬೇಕಾಗಿರುವ ಹಣವನ್ನು ಸಿಎಂ ಸಿದ್ದರಾಮಯ್ಯ ಅನ್ಯ ಉದ್ದೇಶಗಳಿಗೆ ಬಳಸಿರುವುದಲ್ಲದೆ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರು. ಅಕ್ರಮವಾಗಿ ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಅಲ್ಲದೆ ಮುಡಾ ನಿವೇಶನ ಹಗರಣದಲ್ಲಿ ಸಿಲುಕಿದ್ದಾರೆ. ಪಾದಯಾತ್ರೆ ಮುಗಿಯುವುದರೊಳಗೆ ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.

ಜಿಲ್ಲೆಯಿಂದ ಒಂದು ಸಾವಿರಕ್ಕೂ ಹೆಚ್ಚು ಪದಾಧಿಕಾರಿಗಳು, ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ಆರು ತಾಲೂಕುಗಳಿಂದ ಕಾರ್ಯಕರ್ತರು ಪಾದಯಾತ್ರೆಗೆ ಹೊರಟಿದ್ದು, ನಾವುಗಳು ಬಿಡದಿಯಲ್ಲಿ ಸೇರಿಕೊಳ್ಳುತ್ತೇವೆ ಎಂದರು.

ವಿಧಾನಸಭೆ ಅಧಿವೇಶನದಲ್ಲಿ ಮುಡಾ ಹಗರಣದ ಕುರಿತು ಚರ್ಚಿಸಲು ಸ್ಪೀಕರ್ ಯುಟಿ ಖಾದರ್ ಅವಕಾಶ ಕೊಡಲಿಲ್ಲ. ದಲಿತರು, ರೈತರಿಗೆ ದ್ರೋಹವೆಸಗಿರುವ ಸಿಎಂ ಸಿದ್ದರಾಮಯ್ಯ ಭಂಡತನ ತೋರುವ ಬದಲು ಅಧಿಕಾರದಿಂದ ಕೆಳಗಿಳಿಯುವತನಕ ಹೋರಾಟ ನಿಲ್ಲುವುದಿಲ್ಲ. ವಿಧಾನಸಭೆ ಚುನಾವಣೆ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಲು ಆಗದೆ ಬೇರೆ ಬೇರೆ ಹಣ ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ಮತದಾರರು ಸಹಿಸುವುದಿಲ್ಲ ಎಂದು ಹೇಳಿದರು.

ಈ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಟಿ.ಸುರೇಶ್‍ ಸಿದ್ದಾಪುರ, ಸಂಪತ್‍ಕುಮಾರ್, ಖಜಾಂಚಿ ಮಾಧುರಿ ಗಿರೀಶ್, ನಗರ ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ, ಗ್ರಾಮಾಂತರ ಮಂಡಲ ಅಧ್ಯಕ್ಷ ಕಲ್ಲೇಶಯ್ಯ, ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್, ಶರತ್ ಪಾಟೀಲ್, ಕಿರಣ್, ಚಂದ್ರಿಕಾ ಲೋಕನಾಥ್, ಕವನ, ಕಾಂಚನ, ಸುಮ, ವೀಣ, ಶೀಲಾ, ಸರಸ್ವತಿ, ಮಮತ, ಪೂರ್ಣಿಮ, ರಾಜೇಶ್ವರಿ, ಶಾಂತಮ್ಮ, ರಜಿನಿ, ಬಸಮ್ಮ, ಭಾರತಿ, ಶ್ರೀನಿವಾಸ್, ಪ್ರವೀಣ್, ಶಂಭು, ವೆಂಕಟೇಶ್, ನಾಗರಾಜ್, ರಾಘವೇಂದ್ರ, ಯಶವಂತ್, ಪ್ರವೀಣ್, ಲೋಕೇಶ್, ಪ್ರಕಾಶ್, ಸಾರಂಗ ಮಠ ಪ್ರಸಾದ್, ಬಾಬು ಇದ್ದರು

Share this article